ದೇಶದಲ್ಲಿ ಒಂದು ಧರ್ಮವನ್ನು ಗುರಿಯಾಗಿರಿಸಿ ದಬ್ಬಾಳಿಕೆ

KannadaprabhaNewsNetwork |  
Published : May 04, 2025, 01:31 AM ISTUpdated : May 04, 2025, 01:32 AM IST
ಪೋಟೋ: 03ಎಸ್ಎಂಜಿಕೆಪಿ01ಶಿವಮೊಗ್ಗದ ನಗರದ ಮುಸ್ಲಿಂ ಹಾಸ್ಟೆಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ  ವಕ್ಫ್ ಕಾಯ್ದೆ(ತಿದ್ದುಪಡಿ) 2025 ಅನ್ನು ತಕ್ಷಣ ರದ್ದುಗೊಳಿಸಲು ಆಗ್ರಹಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವತಿಯಿಂದ ಪ್ರತಿಭಟನೆ ಮೆರವಣಿಗೆ ನಡೆಯಿತು.  | Kannada Prabha

ಸಾರಾಂಶ

Oppression targeting a religion in the country

-ಮುಸ್ಲಿಂ ಧಾರ್ಮಿಕ ಮುಖಂಡ ಶಾಹುಲ್ ಹಮೀದ್ ಮುಕ್ತಿಯಾರ್ ಆರೋಪ । ವಕ್ಫ್ ಕಾಯ್ದೆ(ತಿದ್ದುಪಡಿ) ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ, ಮೆರವಣಿಗೆ

----

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಳೆದ 10 ವರ್ಷಗಳಿಂದ ಈ ದೇಶದಲ್ಲಿ ಒಂದು ಧರ್ಮವನ್ನು ಗುರಿಯಾಗಿರಿಸಿ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಮುಸ್ಲಿಂ ಧಾರ್ಮಿಕ ಮುಖಂಡ ಶಾಹುಲ್ ಹಮೀದ್ ಮುಕ್ತಿಯಾರ್ ಆರೋಪಿಸಿದರು.

ವಕ್ಫ್ ಕಾಯ್ದೆ(ತಿದ್ದುಪಡಿ) 2025 ಅನ್ನು ತಕ್ಷಣ ರದ್ದುಗೊಳಿಸಲು ಆಗ್ರಹಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ ನಗರದ ಸರ್ ಎಂ.ವಿಶ್ವೇಶ್ವರಯ್ಯ ರಸ್ತೆಯಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ನಾವೆಲ್ಲಾ ಭಾರತೀಯರೇ. ಈ ಮಣ್ಣಲ್ಲೇ ಹುಟ್ಟಿದವರು. ನಮಗೂ ಈ ದೇಶದಲ್ಲಿ ಸಂವಿಧಾನದ ಪ್ರಕಾರ ಎಲ್ಲಾ ಹಕ್ಕು ಇದೆ. ವಕ್ಪ್ ಕಾಯ್ದೆ ತಿದ್ದುಪಡಿ ನಮ್ಮ ಶರಿಯತ್‌ಗೆ ವಿರುದ್ಧವಾಗಿದೆ. ವಕ್ಫ್ ಆಸ್ತಿ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಅದು ಭಗವಂತನಿಗೆ ಸೇರಿದ್ದು ಇದನ್ನು ಎಲ್ಲಾ ಧರ್ಮೀಯರು ಲೂಟಿ ಮಾಡಿದ್ದಾರೆ. ವಕ್ಪ್ ಆಸ್ತಿಯನ್ನು ಯಾರೇ ಒತ್ತುವರಿ ಮಾಡಿದ್ದರೂ ಅದನ್ನು ಹಿಂದಿರುಗಿಸಲೇಬೇಕು. ಮುಸ್ಲಿಮರ ಆಸ್ತಿಗೆ ಬೇರೆ ಯಾರೂ ಕೈಹಾಕಲು ಸಾಧ್ಯವಿಲ್ಲ. ಈಗಿನ ಕಾನೂನಿನಂತೆ 20-30 ವರ್ಷಗಳ ಕಾಲ ಆತ ವಕ್ಪ್ ಆಸ್ತಿ ಬಳಸಿಕೊಂಡಿದ್ದರೆ ಅದು ಅವನಿಗೇ ನೀಡಬೇಕಾಗುತ್ತದೆ ಎಂದಿದೆ ಎಂದರು.

ಚಿಂತಕ ಸುಧೀರ್ ಕುಮಾರ್ ಮರೊಳ್ಳಿ ಮಾತನಾಡಿ, ಪ್ರಧಾನಿ ಮೋದಿಯುವರು ದೇಶವನ್ನು ಕಟ್ಟುವ ಕೆಲಸ ಮಾಡುತ್ತಿಲ್ಲ, ಕೋಮುಗಳ ನಡುವೆ ಹೊಡೆದಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಜನರ ಭಾವನೆಗಳನ್ನು ನಾಶ ಮಾಡಲಾಗುತ್ತಿದೆ. ವಕ್ಫ್ ಕಾಯ್ದೆ ಜಾರಿಗೆ ತರುವ ಹಿಂದೆ ರಾಜಕೀಯ ಷಂಡ್ಯತ್ರ ಇದೆ. ಈ ವಕ್ಫ್ ಕಾಯಿದೆ ಸಂವಿಧಾನದ ವಿರೋಧಿಯಾಗಿದೆ ಎಂದರು.

ವಕ್ಫ್ ಆಸ್ತಿ ಯಾರ ವೈಯುಕ್ತಿಕ ಆಸ್ತಿ ಅಲ್ಲ, ಅದು ಪರಮಾತ್ಮನ ಆಸ್ತಿ. ವಕ್ಫ್ ಆಸ್ತಿಗೂ ಅಮಿತ್ ಷಾ ಗೂ ಮೋದಿಗೂ ಏನ್ ಸಂಬಂಧ ಎಂದು ಪ್ರಶ್ನಿಸಿದ ಅವರು, ಮತ ರಾಜಕಾರಣ ಕೈಬಿಡುವಂತೆ ಆಗ್ರಹಿಸಿದರು.

ಭಾರತದ ಮುಸ್ಲಿಮರ ಧ್ವನಿಯಾಗಿ ವಕ್ಪ್ ತಿದ್ದುಪಡಿ ಕಾಯ್ದೆ ಇಲ್ಲ. ಇದರಿಂದ ವಕ್ಫ್ ಆಸ್ತಿಗಳ ಸ್ವಾಯತ್ತತೆ ಕಸಿದುಕೊಳ್ಳುತ್ತದೆ. ಸಂವಿಧಾನದ ಗ್ಯಾರಂಟಿಗಳನ್ನು ಉಲ್ಲಂಘಿಸುತ್ತದೆ. ಭಾರತದ ಜಾತ್ಯತೀತ ರಚನೆಗೆ ಧಕ್ಕೆ ತರುತ್ತದೆ ಎಂದು ಮುಸ್ಲಿಂ ಮುಖಂಡರು ಆರೋಪಿಸಿದರು.

ಕೇಂದ್ರ ಹಾಗೂ ರಾಜ್ಯ ವಕ್ಪ್ ಮಂಡಳಿಗಳಿಗೆ ಮುಸ್ಲಿಮೇತರರನ್ನು ಕಡ್ಡಾಯವಾಗಿ ಸೇರಿಸುವುದು ಸಂವಿಧಾನದ ೨೬ನೇ ವಿಧಿಯ ಅನ್ವಯ ಉಲ್ಲಂಘನೆಯಾಗುತ್ತದೆ. ಇದು ಮುಸ್ಲಿಮರಿಗೆ ತಮ್ಮ ಧಾರ್ಮಿಕ ಸಂಸ್ಥೆಗಳನ್ನು ನಿರ್ಮಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ. ಹಿಂದೂ, ಸಿಖ್ ಅಥವಾ ಇತರ ಧಾರ್ಮಿಕ ಆಸ್ತಿಗಳಿಗೆ ಇಂತರ ನಿಯಮ ಇಲ್ಲ ಎಂದರು.

ದಾಖಲೆ ಇಲ್ಲದ ಮಸೀದಿಗಳು, ಖಬರಸ್ಥಾನಗಳು ಮತ್ತು ದರ್ಗಾಗಳಿಗೆ ಅಪಾಯವನ್ನೊಡ್ಡುತ್ತದೆ. ಸರ್ಕಾರದ ಕೈವಶವಾಗಬಹುದು ಎಂಬ ಆತಂಕವನ್ನು ಪ್ರತಿಭಟನಾಕಾರರು ವ್ಯಕ್ತಪಡಿಸಿದರು.

ವಕ್ಪ್ ಆಸ್ತಿಯ ಮಾಲೀಕತ್ವವನ್ನು ಜಿಲ್ಲಾಧಿಕಾರಿಗಳೇ ನಿರ್ಧರಿಸುವ ಅಧಿಕಾರ ನೀಡುವುದು ನ್ಯಾಯಾಲಯದ ಮೇಲ್ವಿಚಾರಣೆ ಇಲ್ಲದೇ ಸ್ವೇಚ್ಛಾಚಾರ ತೀರ್ಮಾನಕ್ಕೆ ದಾರಿ ಮಾಡುತ್ತದೆ. ಅಲ್ಲದೇ, ಇದು ವಕ್ಫ್ ಮಂಡಳಿಗಳ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಮೊಹಮ್ಮದ್ ಇರ್ಫಾನ್ ಖಾನ್, ಏಜಾಜ್ ಪಾಶಾ, ಮುಫ್ತಿ ಸೈಯದ್ ಮುಜೀಬುಲ್ಲಾ, ಮುಫ್ತಿ ಮೊಹಮ್ಮದ್ ಶಫೀವುಲ್ಲಾ ಕಾಸ್ಮಿ, ಶೇಖ್ ಅಲಿ, ಮೌಲಾನಾ ಆಮಿದ್ ಉಮರಿ, ಮೌಲಾನಾ ಅಬ್ದುಲ್ ಜಬ್ಬಾರ್ ಸಾಧಿಕ್, ಅಫ್ತರ್ ಕೋಡಿಬೇಂದ್ರೆ, ಮೌಲಾನಾ ಜಬೀವುಲ್ಲಾ ಸಾಬ್, ಮುಫ್ತಿ ಇಫ್ತಾಬ್ ಸಾಹೇಬ್, ಜಾಮಿಲ್ ಉಮ್ರಿ ಇದ್ದರು.

---

ಬೃಹತ್ ಪ್ರತಿಭಟನೆ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವತಿಯಿಂದ ಜಿಲ್ಲಾ ವಕ್ಪ್(ಮುಸ್ಲಿಂ ಹಾಸ್ಟೆಲ್ )ಕಛೇರಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಹಿಳೆಯರು,ಯುವಕರು, ಪುರುಷರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಕ್ಫ್ ಬಚಾನೆ ಚಲೇ ಹೈ- ಆವೋ ಹಮಾರೆ ಸಾಥ್ ಚಲೋ, ದಸ್ತೂರ್ ಬಚಾನೆ ನಿಕ್ಲೆ ಹೈ - ಆವೋ ಹಮಾರೆ ಸಾಥ್ ಚಲೋ ಘೋಷಣೆ ಕೂಗಿದರು. ಮೆರವಣಿಗೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

--

ಪೊಲೀಸರು ಹೈಅಲರ್ಟ್: ಮುಸ್ಲಿಮರು ನಗರದಲ್ಲಿ ಭಾರೀ ಪ್ರತಿಭಟನೆಯ ಮೂಲಕ ಮೆರವಣಿಗೆ ನಡೆಸುತ್ತಾರೆ ಎಂಬ ಸುದ್ದಿ ತಿಳಿದ ಕೂಡಲೇ ಪೊಲೀಸರು ಅಲರ್ಟ್ ಆಗಿದ್ದರು. ಪ್ರತಿಭಟನೆ, ಯಾವುದೇ ಕ್ಷಣದಲ್ಲಿ ಏನಾದರೂ ತಿರುವು ತೆಗೆದುಕೊಳ್ಳಬಹುದೆಂಬ ಅನುಮಾನವಿದ್ದುದರಿಂದ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ನಗರವಲ್ಲದೇ ಸುತ್ತಮುತ್ತಲ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಗಿತ್ತು. ಪ್ರತಿಭಟನೆ ನಡೆಯುವ ಮುಖ್ಯ ರಸ್ತೆಯಲ್ಲಿ ಭಾರೀ ಭದ್ರತೆ ಹಾಕಿದ್ದು, ಸಂಪರ್ಕ ರಸ್ತೆಗಳನ್ನು ಬಂದ್ ಮಾಡಲಾಗಿತ್ತು.ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಸ್ಥಳದಲ್ಲೇ ಇದ್ದು, ಬಂದೋಬಸ್ತ್ ಮೇಲ್ವಿಚಾರಣೆ ವಹಿಸಿದ್ದರು. ಪ್ರತಿಭಟನೆಯಲ್ಲಿ 5 ಸಾವಿರಕ್ಕೂ ಮುಸ್ಲಿಂ ಸಮುದಾಯದವರು ಭಾಗವಹಿಸಿದ್ದರು.

----------------------

ಪೋಟೋ: 03ಎಸ್ಎಂಜಿಕೆಪಿ01

ಶಿವಮೊಗ್ಗದ ನಗರದ ಮುಸ್ಲಿಂ ಹಾಸ್ಟೆಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವಕ್ಫ್ ಕಾಯ್ದೆ(ತಿದ್ದುಪಡಿ) 2025 ಅನ್ನು ತಕ್ಷಣ ರದ್ದುಗೊಳಿಸಲು ಆಗ್ರಹಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವತಿಯಿಂದ ಪ್ರತಿಭಟನೆ ಮೆರವಣಿಗೆ ನಡೆಯಿತು.

--------------------------

ಪೋಟೋ: 03ಎಸ್ಎಂಜಿಕೆಪಿ02

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವತಿಯಿಂದ ಪ್ರತಿಭಟನೆ ಹಿನ್ನೆಲೆ ಶಿವಮೊಗ್ಗ ಮಹಾವೀರ ವೃತ್ತದ ಬಳಿ ಬ್ಯಾರಿಕೇಡ್ ಹಾಕಿರುವುದು.

-------------------

ಪೋಟೋ: 03ಎಸ್ಎಂಜಿಕೆಪಿ03

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವತಿಯಿಂದ ನಗರದ ಸರ್ ಎಂ.ವಿಶ್ವೇಶ್ವರಯ್ಯ ರಸ್ತೆಯಲ್ಲಿ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು.

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌