ಜೂ.30ಕ್ಕೆ ಮುಗಿಸಲು ಆದೇಶ; ಪಡಿತರ ವಿತರಣೆಗೆ ಸರ್ವರ್‌ ಸವಾಲು..!

KannadaprabhaNewsNetwork |  
Published : Jun 29, 2025, 01:32 AM IST
28ಕೆಎಂಎನ್‌ಡಿ-1ಸರ್ವರ್‌ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಗಳ ಎದುರು ಜನರು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ. | Kannada Prabha

ಸಾರಾಂಶ

ಜೂನ್‌ ಮಾಹೆಯ ಪಡಿತರ ವಿತರಣೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ದೊಡ್ಡ ಸವಾಲನ್ನು ತಂದೊಡ್ಡಿದೆ. ಕೊನೆಯ ವಾರ ಪಡಿತರವನ್ನು ಅಂಗಡಿಗಳಿಗೆ ಪೂರೈಸಿ ಜೂ.30ಕ್ಕೆ ವಿತರಣೆಯನ್ನು ಮುಗಿಸಲು ಸರ್ಕಾರ ಆದೇಶಿಸಿದೆ. ಆದರೆ, ಸರ್ವರ್‌ ಸಮಸ್ಯೆ ಬಿಟ್ಟೂ ಬಿಡದಂತೆ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಕಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜೂನ್‌ ಮಾಹೆಯ ಪಡಿತರ ವಿತರಣೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ದೊಡ್ಡ ಸವಾಲನ್ನು ತಂದೊಡ್ಡಿದೆ. ಕೊನೆಯ ವಾರ ಪಡಿತರವನ್ನು ಅಂಗಡಿಗಳಿಗೆ ಪೂರೈಸಿ ಜೂ.30ಕ್ಕೆ ವಿತರಣೆಯನ್ನು ಮುಗಿಸಲು ಸರ್ಕಾರ ಆದೇಶಿಸಿದೆ. ಆದರೆ, ಸರ್ವರ್‌ ಸಮಸ್ಯೆ ಬಿಟ್ಟೂ ಬಿಡದಂತೆ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಕಾಡುತ್ತಿದೆ.

ಪಡಿತರ ಆಹಾರ ಪದಾರ್ಥಗಳ ಪೂರೈಕೆಯಲ್ಲಿ ಈ ಬಾರಿ ಮೂರು ವಾರ ವಿಳಂಬವಾಗಿದೆ. ಜೂ.24 ರಿಂದ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಆಹಾರ ಪದಾರ್ಥಗಳನ್ನು ಪೂರೈಸಲಾಗುತ್ತಿದೆ. ಕೇವಲ 6 ದಿನಗಳೊಳಗೆ ಪಡಿತರ ವಿತರಣೆ ಮುಗಿಸಬೇಕೆಂದು ಆದೇಶಿಸಿರುವುದು ಅಂಗಡಿ ಮಾಲೀಕರನ್ನು ದಿಕ್ಕೆಡಿಸುವಂತೆ ಮಾಡಿದೆ.

ಪ್ರತಿ ತಿಂಗಳು ಹತ್ತನೇ ತಾರೀಖಿನೊಳಗೆ ಆಹಾರ ಪದಾರ್ಥಗಳು ನ್ಯಾಯಬೆಲೆ ಅಂಗಡಿಯನ್ನು ಬಂದು ಸೇರುತ್ತಿದ್ದವು. ಆಗ 20 ದಿನಗಳ ಕಾಲಾವಕಾಶ ದೊರೆತು ಪಡಿತರ ವಿತರಣೆ ಸುಗಮವಾಗಿ ನಡೆಯುತ್ತಿತ್ತು. ಜೂನ್‌ ಮಾಹೆ ಪಡಿತರ ಬಂದಿರುವುದೇ ಕೊನೆಯ ವಾರದಲ್ಲಿ. ಅದಕ್ಕೂ ಕಾಲಾವಕಾಶ ನೀಡದೆ ಆರು ದಿನದಲ್ಲೇ ವಿತರಣೆ ಮುಗಿಸುವಂತೆ ಆದೇಶ ಹೊರಡಿಸಿದೆ. ಹೇಗೋ ಇದೊಂದು ತಿಂಗಳು ಕೊಟ್ಟುಬಿಡೋಣವೆಂದರೆ ಸರ್ವರ್‌ ಭೂತ ಎದುರಾಗಿದೆ.

ಸರ್ವರ್‌ ಸಮಸ್ಯೆಯಿಂದ ನಿತ್ಯ ಎಂಟರಿಂದ ಹತ್ತು ಮಂದಿಗೆ ಮಾತ್ರ ಬೆಳಗ್ಗೆಯಿಂದ ಸಂಜೆಯವರೆಗೂ ಕೊಡಲಾಗುತ್ತಿದೆ. ಒಂದು ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಕನಿಷ್ಠ 200 ರಿಂದ 1000 ಜನರಿದ್ದಾರೆ. ಕಡಿಮೆ ಪಡಿತರದಾರರಿರುವ ನ್ಯಾಯಬೆಲೆ ಅಂಗಡಿ ಮಾಲೀಕರು ಹೇಗೋ ಪರಿಸ್ಥಿತಿಯನ್ನು ನಿಭಾಯಿಸಬಲ್ಲರು. 700 ರಿಂದ 1000 ಕಾರ್ಡ್‌ದಾರರಿರುವ ಅಂಗಡಿಗಳ ವ್ಯಾಪ್ತಿಯಲ್ಲಿ ಪಡಿತರ ವಿತರಣೆ ತೀವ್ರ ತ್ರಾಸದಾಯವಾಗಿದೆ.

ಸರ್ವರ್‌ ಸಮಸ್ಯೆ ಸಾಕಷ್ಟು ಕಾಡುತ್ತಿರುವ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಬೆಳಗ್ಗೆ 7 ರಿಂದ ರಾತ್ರಿ 10ರ ವರೆಗೆ ಪಡಿತರ ವಿತರಿಸುವಂತೆ ಹೇಳುತ್ತಿದ್ದಾರೆ. ಕೆಲವು ಪಡಿತರದಾರರು ಬೆಳಗ್ಗೆ ಅಂಗಡಿಗೆ ಬಂದಾಗ ಸರ್ವರ್‌ ಸಮಸ್ಯೆ ಇದ್ದರೆ ಮಧ್ಯಾಹ್ನ ಅಥವಾ ಸಂಜೆ ಬರುತ್ತಾರೆ. ಪಡಿತರದಾರರು ಬರುವುದನ್ನು ಮತ್ತು ಸರ್ವರ್‌ ಸಿಗುವುದನ್ನೇ ಎದುರುನೋಡುತ್ತಾ ಅಂಗಡಿಯಲ್ಲೇ ಕೂರುವಂತಾಗಿದೆ. ಪರಿಸ್ಥಿತಿಯನ್ನು ತಿಳಿಯದ ಕೆಲವು ಪಡಿತರದಾರರು ಅಂಗಡಿ ಮಾಲೀಕರನ್ನು ಬಾಯಿಗೆ ಬಂದಂತೆ ಬೈದಿರುವ ನಿದರ್ಶನಗಳೂ ಇವೆ.

ಇನ್ನೂ ಅನ್ನಭಾಗ್ಯ ಅಕ್ಕಿ ಅಂಗಡಿಗಳಿಗೆ ಪೂರೈಕೆಯಾಗುತ್ತಲೇ ಇದೆ. ಪೂರೈಕೆಯಾದ ಅಕ್ಕಿಯನ್ನು ಸೋಮವಾರದೊಳಗೆ ವಿತರಿಸುವುದಾದರೂ ಹೇಗೆ. ಬಾಯಲ್ಲಿ ಆದೇಶ ಮಾಡುವುದು ಸುಲಭ. ಅದನ್ನು ಕಾರ್ಯಗತಗೊಳಿಸುವ ನಮಗೆ ಅದರ ಕಷ್ಟ ಏನೆಂದು ಗೊತ್ತಿದೆ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ಅಸಮಾಧಾನದಿಂದ ಹೇಳಿದ್ದಾರೆ.

ನಿಗದಿತ ಸಮಯಕ್ಕೆ ಸರಿಯಾಗಿ ಆಹಾರ ಪದಾರ್ಥಗಳನ್ನು ಪೂರೈಸದಿರುವ ಬಗ್ಗೆ ನಾವು ಯಾರನ್ನು ಪ್ರಶ್ನಿಸೋದು. ತಿಂಗಳಾಂತ್ಯದ ವಾರದಲ್ಲಿ ಆಹಾರ ಪದಾರ್ಥಗಳನ್ನು ಕೊಟ್ಟು ಆರು ದಿನಗಳೊಳಗೆ ವಿತರಣೆ ಮುಗಿಸುವಂತೆ ಆದೇಶಿಸಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಮಾಲೀಕರ ಪ್ರಶ್ನೆಯಾಗಿದೆ.

ಕೆಲವು ಪ್ರಜ್ಞಾವಂತ ಪಡಿತರದಾರರು ನಮ್ಮ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುತ್ತಾರೆ. ಆದರೆ, ಮಹಿಳೆಯರು, ಅನಕ್ಷರಸ್ಥರಿಗೆ, ಬಡವರ್ಗದ ಜನರಿಗೆ ಸರ್ವರ್‌ ಸಮಸ್ಯೆ ಹೇಳಿದರೆ ಅದು ಅವರಿಗೆ ಅರ್ಥವಾಗುವುದಿಲ್ಲ. ಅಂಗಡಿ ಮಾಲೀಕರೇ ಪಡಿತರ ಪದಾರ್ಥಗಳನ್ನು ಏನೋ ಮಾಡಿಕೊಳ್ಳುತ್ತಿದ್ದಾರೆಂದು ದೂರುತ್ತಾರೆ. ನಾವು ಅನುಭವಿಸುವ ವೇದನೆ ಆಹಾರ ಇಲಾಖೆ ಅಧಿಕಾರಿಗಳಿಗೆ ಅರ್ಥವಾಗುವುದೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಅಂಗಡಿಗಳ ಎದುರು ಜನರ ಸಾಲು

ಪಡಿತರ ಆಹಾರ ಪದಾರ್ಥಗಳು ಬಂದಿರುವ ವಿಷಯ ತಿಳಿದು ಪಡಿತರದಾರರು ಅಂಗಡಿಗಳಿಗೆ ಲಗ್ಗೆ ಇಡುತ್ತಿದ್ದಾರೆ. ಆದರೆ, ಸರ್ವರ್‌ ಸಮಸ್ಯೆಯಿಂದ ಪಡಿತರ ಪಡೆಯಲಾಗದೆ ಸರ್ವರ್‌ ಬರುವುದನ್ನೇ ಅಂಗಡಿಗಳ ಎದುರು ಕಾಯುತ್ತಾ ನಿಂತಿದ್ದರು. ಗಂಟೆಗಟ್ಟಲೆ ಕಾದರೂ ಸರ್ವರ್‌ ಬಾರದಿದ್ದರಿಂದ ಕೆಲವರು ಅಂಗಡಿಯವರಿಗೆ ಫೋನ್‌ ನಂಬರ್‌ ಕೊಟ್ಟು, ಮತ್ತೆ ಕೆಲವರು ಅಂಗಡಿಯವರ ಫೋನ್‌ ನಂಬರ್‌ಗಳನ್ನು ಪಡೆದುಕೊಂಡು ತೆರಳುತ್ತಿದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು