ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸೇರಿದ ಕನ್ನಡ ಸೇನೆ, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸಮಿತಿ ಮತ್ತು ಪ್ರಾಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಬೆಂಗಳೂರು- ಮೈಸೂರು ಹೆದ್ದಾರಿಗಳಿದು ಪ್ರತಿಭಟನೆ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ ಕಾರ್ಯಕರ್ತರು ಸಮಿತಿ ಮತ್ತು ಪ್ರಾಧಿಕಾರಿಗಳಿಂದ ಮತ್ತೆ ರಾಜ್ಯಕ್ಕೆ ಅನ್ಯಾಯವಾಗಿರುವುದನ್ನು ತೀವ್ರವಾಗಿ ಖಂಡಿಸಿದರು.ಮಳೆ ಅಭಾವದಿಂದ ಕಾವೇರಿ ಜಲಾಯನ ಪ್ರದೇಶದ ವ್ಯಾಪ್ತಿಯ ಅಣೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ನಮ್ಮಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಆದರೆ, ತಮಿಳುನಾಡು ಕೃಷಿ ಚಟುವಟಿಕೆಗಳಿಗೆ ನೀರು ಕೊಡಲು ಆದೇಶ ಮಾಡಿದೆ ಎಂದು ದೂರಿದರು.
ಈ ಆದೇಶ ರೈತರ ಪಾಲಿಗೆ ಮರಣ ಶಾಸನವಾಗಿದೆ. ಇಲ್ಲಿನ ವಸ್ತು ಸ್ಥಿತಿ ತಿಳಿಸಲು ರಾಜ್ಯ ಸರ್ಕಾರ, ಅಧಿಕಾರಿಗಳು, ಸಚಿವರು ವಿಫಲರಾಗಿದ್ದಾರೆ. ರೈತರ ಹಿತ ಕಾಯಲು ರಾಜ್ಯ ಸರ್ಕಾರ ವಿಫಲವಾಗಿದೆ. ಕೂಡಲೇ ರಾಜ್ಯದ ಜನತೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಮೂರು ಬಾರಿಯೂ ಕರ್ನಾಟಕದ ವಿರುದ್ಧ ಸಮಿತಿ ಮತ್ತು ಪ್ರಾಧಿಕಾರಿಗಳು ಆದೇಶ ನೀಡಿವೆ. ಈಗ ನಾಲ್ಕನೇ ಬಾರಿಯೂ ರಾಜ್ಯಕ್ಕೆ ಅನ್ಯಾಯವಾಗಿದೆ. ತಮಿಳುನಾಡಿಗೆ ಮತ್ತೆ ಯಾವುದೇ ಕಾರಣಕ್ಕೂ ನೀರು ಬಿಡಬಾರದು. ಕೇಂದ್ರ ಪ್ರಾಧಿಕಾರ, ಸಮಿತಿಯ ತನಿಖಾ ತಂಡ ರಾಜ್ಯಕ್ಕೆ ಬಂದು ಇಲ್ಲಿನ ಪರಿಸ್ಥಿತಿ ಅರಿತು ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ರೈತ ಮುಖಂಡ ಶಿವಳ್ಳಿ ಚಂದ್ರಶೇಖರ್, ಹೋರಾಟಗಾರರ ಶಿವಕುಮಾರ್ ಆರಾಧ್ಯ, ಸಿಟಿ ಮಂಜು ಸೇರಿದಂತೆ ಹಲವರು ರೈತರು, ಹೋರಾಟಗಾರರು ಭಾಗವಹಿಸಿದ್ದರು.