ಜೆಡಿಎಸ್‌ ಬೆಳ್ಳಿಹಬ್ಬಕ್ಕೆ ಜಿಲ್ಲಾದ್ಯಂತ ಕಾರ್ಯಕ್ರಮ

KannadaprabhaNewsNetwork |  
Published : Nov 20, 2025, 02:00 AM IST
13 | Kannada Prabha

ಸಾರಾಂಶ

ಅಧಿಕಾರದಲ್ಲಿದ್ದ ಅವಧಿ ಕಡಿಮೆಯಾದರೂ ಜನ ಮೆಚ್ಚುವ ಕಾರ್ಯಕ್ರಮ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯದಲ್ಲಿ ತನ್ನದೇ ಆದ ಪ್ರಾಬಲ್ಯ ಹೊಂದಿರುವ ಜಾತ್ಯತೀತ ಜನತಾ ದಳದ ಬೆಳ್ಳಿಹಬ್ಬವನ್ನು ನ. 21, 22 ರಂದು ಆಯೋಜಿಸಿದ್ದು, ಪಕ್ಷದ ಹುಟ್ಟು, ಬೆಳವಣಿಗೆ, ಪಕ್ಷದ ಸಾಧನೆ, ಕಾರ್ಯಕ್ರಮಗಳನ್ನು ತಿಳಿಸಿಕೊಡಲು ಹಲವು ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಸಾ.ರಾ. ಮಹೇಶ್‌ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಉದ್ದೇಶಿಸಲಾಗಿದೆ. 25 ವರ್ಷಗಳ ಕಾಲ ಪಕ್ಷ ನಡೆದುಬಂದ ದಾರಿ,ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಮಾಡಿರುವ ಸಾಧನೆಗಳನ್ನು ಮನವರಿಕೆ ಮಾಡಿಕೊಡಲಾಗುವುದು. ಪಕ್ಷವನ್ನು ಕಟ್ಟಿದ, ಮುನ್ನಡೆಸಿಕೊಂಡು ಬರುತ್ತಿರುವ ಎಚ್‌.ಡಿ. ದೇವೇಗೌಡರು ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರಿಬ್ಬರೂ ಅಧಿಕಾರದಲ್ಲಿರಲಿ, ಇಲ್ಲದಿರಲಿ ಜನಪರವಾಗಿ ಹೋರಾಟ ನಡೆಸಿದ್ದಾರೆ ಎಂದರು.ಅಧಿಕಾರದಲ್ಲಿದ್ದ ಅವಧಿ ಕಡಿಮೆಯಾದರೂ ಜನ ಮೆಚ್ಚುವ ಕಾರ್ಯಕ್ರಮ ನೀಡಿದ್ದಾರೆ. ಜೆಡಿಎಸ್‌ ಬೆಳ್ಳಿಹಬ್ಬದ ಸಂಭ್ರಮದ ಅಂಗವಾಗಿ ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಹಿರಿಯ ಮುಖಂಡರು, ಕಾರ್ಯಕರ್ತರನ್ನು ಭೇಟಿಯಾಗಿ ಅಭಿನಂದಿಸಲಾಗುವುದು. ಕಾರ್ಯಕರ್ತರು ಸ್ಥಳೀಯ ಆಸ್ಪತ್ರೆಗಳಿಗೆ ತೆರಳಿ ಹಣ್ಣು ಹಂಪಲು ವಿತರಿಸುವರು. ದೇವಸ್ಥಾನದಲ್ಲಿ ಪೂಜೆ, ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವಧಿಯಲ್ಲಿ ಮೈಸೂರು ರಾಜ್ಯಕ್ಕೆ ನೀಡಿರುವ ನಾನಾ ಕೊಡುಗೆ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ನಡೆಯಲಿದೆ ಎಂದು ಅವರು ತಿಳಿಸಿದರು.ಕರ್ನಾಟಕದಲ್ಲಿ ಎಚ್.ಡಿ. ದೇವೇಗೌಡರು ಪ್ರಾದೇಶಿಕ ಪಕ್ಷವನ್ನು ಕಟ್ಟಿ ಸಂಘಟಿಸಿದರು. ಜಿಲ್ಲೆಯವರೇ ಆಗಿರುವ ನಾಯಕರೊಬ್ಬರು ಕಟ್ಟಿದ ಪಕ್ಷ ಎಷ್ಟು ಸ್ಥಾನ ಗೆದ್ದಿತು, ಯಾವ ಜಿಲ್ಲೆಯಲ್ಲಿ ಗೆದ್ದುಬಂದರು ಎಂಬುದು ಗೊತ್ತಿದೆ. ಜೆಡಿಎಸ್‌ ರಾಷ್ಟ್ರೀಯ, ರಾಜ್ಯ, ಯುವ ಘಟಕದ ಅಧ್ಯಕ್ಷರನ್ನು ಹೊರತುಪಡಿಸಿ ಎಲ್ಲಾ ಪದಾಧಿಕಾರಿಗಳನ್ನು ಬದಲಾಯಿಸಿ ಹೊಸದಾಗಿ ನೇಮಕ ಮಾಡಲಾಗುತ್ತದೆ. ಜಿಲ್ಲೆ, ಮೈಸೂರು ನಗರದ ಅಧ್ಯಕ್ಷರು, ಪದಾಧಿಕಾರಿಗಳನ್ನು ಬದಲಾಯಿಸಿ ಪಕ್ಷದ ಸಂಘಟನೆಗೆ ಸಮಯ ನೀಡುವಂತಹ ಮುಖಂಡರಿಗೆ ಜವಾಬ್ದಾರಿ ಕೊಡುವುದಾಗಿ ಅವರು ಹೇಳಿದರು.ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರು ಹಿರಿಯರು. ಈಗ ಸಹಕಾರ ಸಪ್ತಾಹದ ಕಾರ್ಯಕ್ರಮದ ಒತ್ತಡದಲ್ಲಿದ್ದಾರೆ. ಪಕ್ಷದ ಸಭೆ, ಸಮಾವೇಶಗಳಿಗೆ ಯಾವಾಗಲೂ ಆಹ್ವಾನ ನೀಡಲಾಗುತ್ತದೆ. ಅವರ ಪುತ್ರ, ಶಾಸಕ ಜಿ.ಡಿ. ಹರೀಶ್ ಗೌಡರು ಪಕ್ಷದ ಸಂಘಟನೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಎಂದರು.ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಕೆ. ವಿವೇಕಾನಂದ, ಮಾಜಿ ಶಾಸಕ ಎಂ. ಅಶ್ವಿನ್ ಕುಮಾರ್, ಮಾಜಿ ಮೇಯರ್‌ಗಳಾದ ಆರ್. ಲಿಂಗಪ್ಪ, ಎಂ.ಜೆ. ರವಿಕುಮಾರ್, ಜೆಡಿಎಸ್‌ನಗರ ಅಧ್ಯಕ್ಷ ಎಸ್‌.ಬಿ.ಎಂ. ಮಂಜು, ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್ ಮೊದಲಾದವರು ಇದ್ದರು.

PREV

Recommended Stories

ಸಹಕಾರ ಕ್ಷೇತ್ರದ ಸ್ವಾಯುತ್ತತೆಗೆ ಧಕ್ಕೆ
ಗೌರವ ಧನ ಹೆಚ್ಚಳವೇ ಮತ್ತೊಂದು ಗ್ಯಾರಂಟಿ: ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ