ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ನಟ ದೊಡ್ಡಣ್ಣ ಹೇಳಿಕೆ
ಕನ್ನಡಪ್ರಭ ವಾರ್ತೆ ಸಿರಿಗೆರೆ
ಚಿತ್ರದುರ್ಗ ಕ್ಷೇತ್ರದ ಎಲ್ಲೆಡೆ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸುವುದರ ಮೂಲಕ ಜನರ ಅಂದತ್ವವನ್ನು ನಿವಾರಿಸುವುದು ನಮ್ಮ ಮೂಲ ಉದ್ದೇಶವಾಗಿದೆ ಎಂದು ಚಲನಚಿತ್ರ ನಟ ದೊಡ್ಡಣ್ಣ ಹೇಳಿದರು.ಸಿರಿಗೆರೆ ಸಮೀಪದ ದೊಡ್ಡಾಲಘಟ್ಟ ಗ್ರಾಮದಲ್ಲಿ ಶುಕ್ರವಾರ ಜಿಲ್ಲಾ ಕುಟುಂಬ ಮತ್ತು ಕಲ್ಯಾಣ ಇಲಾಖೆ, ಜಿಲ್ಲಾ ಅಂದತ್ವ ನಿರ್ವಹಣಾ ವಿಭಾಗ ಮತ್ತು ಶಂಕರ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿ ಶಂಕರ್ ಕಣ್ಣಿನ ಆಸ್ಪತ್ರೆ ಸಹಾಯದಿಂದ ಸಾಕಷ್ಟು ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಮಾಡಿ ಜಗತ್ತು ನೋಡಲು ಅವಕಾಶ ಮಾಡಿಕೊಡಲಾಗಿದೆ. ಇದರ ಸದುಪಯೋಗವನ್ನು ಕ್ಷೇತ್ರದ ಜನತೆ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.
ಬರದ ನಾಡು ಬಿಸಿಲಿನ ನಾಡು ಎನ್ನುವ ಚಿತ್ರದುರ್ಗವನ್ನು ಮುಂದಿನ ದಿನಗಳಲ್ಲಿ ಸಸಿಗಳನ್ನು ಹಾಕುವುದರ ಮೂಲಕ ಚಿತ್ರದುರ್ಗ ಜಿಲ್ಲೆಯನ್ನ ಸಮೃದ್ಧಿ ಜಿಲ್ಲೆಯನ್ನಾಗಿ ಮಾಡುವ ಕೆಲಸವನ್ನು ಕೈಗೊತ್ತಿಕೊಳ್ಳಲಾಗಿದೆ ಹಾಗಾಗಿ ಸಾರ್ವಜನಿಕರು ಪ್ರತಿ ಮನೆ ಮನೆಯ ಅಕ್ಕ ಪಕ್ಕದಲ್ಲಿನ ಖಾಲಿ ಜಾಗಗಳಲ್ಲಿ ಒಂದೊಂದು ಸಸಿಯನ್ನು ಹಾಕುವುದರ ಮೂಲಕ ಚಿತ್ರದುರ್ಗ ಜಿಲ್ಲೆಯನ್ನ ಸಮೃದ್ಧಿ ಜಿಲ್ಲೆಯನ್ನಾಗಿ ಮಾಡಲು ಕೈಜೋಡಿಸಬೇಕಾಗಿದೆ ಎಂದು ತಿಳಿಸಿದರು.
ಆಲಘಟ್ಟ ಗ್ರಾಪಂ ಅಧ್ಯಕ್ಷ ಕೆ.ಎಂ.ನಾಗರಾಜಪ್ಪ ಮಾತನಾಡಿ, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸಹಭಾಗಿತ್ವದಲ್ಲಿ ಆಯೋಜಿಸಿರುವ ಉಚಿತ ನೇತ್ರ ತಪಾಸಣಾ ಶಿಬಿರ ಗ್ರಾಮೀಣ ಪ್ರದೇಶದ ವರೆಗೆ ಕಣ್ಣು ತೆರೆಸುವಂತಹ ಕಾರ್ಯವಾಗಿದೆ. ಗ್ರಾಮೀಣ ಪ್ರದೇಶ ಜನರ ಕಷ್ಟಗಳನ್ನು ಅರಿತವರೆ ನಿಜವಾದ ಜನಪ್ರತಿನಿಧಿ ಅಂತಹ ಕಾರ್ಯವನ್ನು ಚಿತ್ರದುರ್ಗ ಶಾಸಕರು ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಈ ವೇಳೆ ತಾಲೂಕು ಆರೋಗ್ಯಧಿಕಾರಿ ಡಾ.ಬಿ.ವಿ.ಗಿರೀಶ್, ಆಲ್ಘಟ್ಟ ಗ್ರಾಪಂ ಉಪಾಧ್ಯಕ್ಷ ಲಲಿತಮ್ಮ, ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಪಾಂಡುರಂಗಪ್ಪ, ಸದಸ್ಯರಾದ ನಿರ್ಮಲ ಹನುಮಂತಪ್ಪ, ರತ್ಮಮ್ಮ, ಪಿಡಿಒ ಬಸವರಾಜ್, ಕಾರ್ಯದರ್ಶಿ ನಾಗರಾಜಪ್ಪ, ಕನ್ನಡಾಂಬೆ ಒಕ್ಕೂಟದ ಅಧ್ಯಕ್ಷೆ ಲತಾ, ವನಮಾಲ, ಮಂಜಪ್ಪ, ಪ್ರಭು, ಲೋಕೇಶ್, ಕಾಂಗ್ರೆಸ್ ಮುಖಂಡ ವಿಜಯ್ ಕುಮಾರ್, ರಾಜಣ್ಣ, ನಾಗರಾಜ್, ಗೌಡ್ರುಗೇಶಪ್ಪ, ಹಿಂದು, ದರ್ಶನ್, ರಘು, ಸಿದ್ದಪ್ಪ, ರಾಜಪ್ಪ, ಕರಿಯಪ್ಪ, ರಂಗಪ್ಪ, ದುರ್ಗಪ್ಪ, ತಿಮ್ಮಪ್ಪ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.