ಅನೀಮಿಯ ಯಶಸ್ವಿಯಾಗಿತಡೆಗಟ್ಟಲು ಅರಿವು, ಪರೀಕ್ಷೆ, ಚಿಕಿತ್ಸೆ ಬಹುಮುಖ್ಯ, ಅನೀಮಿಯ ಮುಕ್ತ ಕರ್ನಾಟಕವೇ ನಮ್ಮ ಆದ್ಯತೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು
ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಡಾ.ಬಿ.ವಿ.ಗಿರೀಶ್ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಅನೀಮಿಯ ಯಶಸ್ವಿಯಾಗಿತಡೆಗಟ್ಟಲು ಅರಿವು, ಪರೀಕ್ಷೆ, ಚಿಕಿತ್ಸೆ ಬಹುಮುಖ್ಯ, ಅನೀಮಿಯ ಮುಕ್ತ ಕರ್ನಾಟಕವೇ ನಮ್ಮ ಆದ್ಯತೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.ನಗರ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆಯ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ರಕ್ತಹೀನತೆ ಎಂದರೆ ಇದು ದೈಹಿಕ ಅಗತ್ಯಗಳನ್ನು ಪೂರೈಸಲು ಕೆಂಪು ರಕ್ತ ಕಣಗಳ ಸಂಖ್ಯೆ ಅಥವಾ ಅವುಗಳ ಆಮ್ಲಜನಕ-ಸಾಗಿಸುವ ಸಾಮರ್ಥ್ಯವು ಸಾಕಷ್ಟಿಲ್ಲದ ಸ್ಥಿತಿಯಾಗಿದೆ. ಕಬ್ಬಿಣದ ಕೊರತೆಯು ರಕ್ತಹೀನತೆಗೆ ಸಾಮಾನ್ಯ ಕಾರಣ ಎಂದರು. ಇಲಾಖೆಯ ಮಾರ್ಗಸೂಚಿಯಂತೆ ಮೊದಲ ಹಂತದಲ್ಲಿ ಪದವಿಪೂರ್ವ ಶಿಕ್ಷಣ ಪಡೆಯುತ್ತಿರುವ ಒಟ್ಟು 12,169 ಮಕ್ಕಳನ್ನು ಗುರುತಿಸಿ, ಕ್ರಿಯಾ ಯೋಜನೆ ತಯಾರಿಸಲಾಗಿದೆ. ತಾಲೂಕಿನ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ತಂಡದ ವೈದ್ಯಾಧಿಕಾರಿಗಳು, ಶುಶ್ರೂಷಕರು ತಪಾಸಣೆ ನಡೆಸಿ ತೀವ್ರ ಮತ್ತು ಸಾಧಾರಣ ರಕ್ತ ಹೀನತೆಯ ಮಕ್ಕಳಿಗೆ ಕಬ್ಬಿನಾಂಶ ಮಾತ್ರೆಗಳನ್ನು ವಿತರಿಸುವ ಈ ಮೂಲಕ ತಾಲೂಕಿನಲ್ಲಿ ರಕ್ತಹೀನತೆ ತಡೆಗಟ್ಟಲು ಕ್ರಮ ವಹಿಸಲಾಗುವುದು ಎಂದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ರಕ್ತಹೀನತೆಯಿಂದ ಬಳಲು ತ್ತಿರುವ 16 ರಿಂದ 18 ವರ್ಷದ ಯುವ ಜನರನ್ನು ಪತ್ತೆಹಚ್ಚಿ, ಅವರಿಗೆ ಪೂರಕ ಚಿಕಿತ್ಸಾ ಕ್ರಮಗಳ ಮೂಲಕ ಆರೋಗ್ಯ ಸುಧಾರಣೆ ಮಾಡಲು ಆರೋಗ್ಯ ಇಲಾಖೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮೊದಲ ಹಂತದಲ್ಲಿ ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಯಾ ಕಾಲೇಜುಗಳಲ್ಲಿಯೇ ಅವರಲ್ಲಿನ ಹಿಮೋಗ್ಲೋಬಿನ್ ಅಂಶದ ಪ್ರಮಾಣವನ್ನು ಪರೀಕ್ಷಿಸಿ 11 ಕ್ಕಿಂತ ಕಡಿಮೆ ಹಿಮೋಗ್ಲೋಬಿನ್ ಅಂಶ ಹೊಂದಿರುವ ವಿದ್ಯಾರ್ಥಿಗಳ ವಿವರವನ್ನು ಸಂಗ್ರಹಿಸಲಾಗುವುದು. ಇದಕ್ಕಾಗಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯರ ತಂಡದ ನೆರವು ಪಡೆಯಲಾಗುವುದು.
ಮೊದಲು ದತ್ತಾಂಶ ಸಂಗ್ರಹಿಸಿ, ರಕ್ತಹೀನತೆಯಿಂದ ಬಳಲುತ್ತಿರುವ ಯುವಜನರಿಗೆ ಪೊಲಿಕ್ ಆಮ್ಲ, ಕಬ್ಬಿಣಾಂಶದ ಮಾತ್ರೆಗಳನ್ನು ನೀಡುವುದು, ಪೌಷ್ಟಿಕ ಆಹಾರ ಸೇವನೆ ಕುರಿತಂತೆ ಜಾಗೃತಿ ಮೂಡಿಸುವುದು ಮುಂತಾದ ಆರೋಗ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಮಹಿಳೆಯರಲ್ಲಿ ರಕ್ತ ಹೀನತೆ ತಡೆಗಟ್ಟಲು ಸ್ವ ಸಹಾಯ ಗುಂಪುಗಳೊಂದಿಗೆ ಸಭೆ ನಡೆಸಿ, ಜಾಗೃತಿ ಮೂಡಿಸಲಾಗುವುದು ಎಂದರು.ಜಿಲ್ಲೆಯಲ್ಲಿ 129 ಕಾಲೇಜುಗಳನ್ನು ಗುರುತಿಸಿ ಸರ್ಕಾರಿ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಒಟ್ಟು 30,929 ಮಕ್ಕಳ ಪಟ್ಟಿಯನ್ನು ತಯಾರಿಸಿ ಬೇಡಿಕೆಗೆ ಅನುಗುಣವಾಗಿ ಹಿಮೋಗ್ಲೋಬಿನ್ ತಪಾಸಣೆ ಮಾಡುವ ಯಂತ್ರ ಮತ್ತು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ತಂಡದ ಸಿಬ್ಬಂದಿ ನಿಯೋಜಿಸಿ ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ತಂಡದ ವೈದ್ಯಾಧಿಕಾರಿಗಳಾದ ಡಾ.ವಾಣಿ, ಡಾ.ಮಂಜುಳಾ , ಶುಶ್ರೂಷಕಿ ಅಕ್ಷತಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಕಾಲೇಜಿನ 200 ವಿದ್ಯಾರ್ಥಿಗಳಿಗೆ ಹಿಮೋಗ್ಲೋಬಿನ್ ಪ್ರಮಾಣ ತಪಾಸಣೆ ನಡೆಸಿ, 30 ವಿದ್ಯಾರ್ಥಿಗಳು ತೀವ್ರ ರಕ್ತ ಹೀನತೆ 65ಜನ ವಿದ್ಯಾರ್ಥಿಗಳಿಗೆ ಸಾಧಾರಣ ರಕ್ತ ಹೀನತೆ ಸರಿದೂಗಿಸಲು ಕಬ್ಬಿನಾಂಶದ ಮಾತ್ರೆ ನೀಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.