ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ತಾಲೂಕಿನ ಸುತಗುಂಡಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪರ ಭರ್ಜರಿ ಪ್ರಚಾರ ನಡೆಸಿದ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡಿದರೆ ಯಾರೂ ಕಿವಿಗೊಡಬೇಡಿ. ಈ ಭಾಗದಲ್ಲಿ ಎಚ್.ವೈ.ಮೇಟಿ ಅವರು ಸಾಕಷ್ಟು ಜನಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವರ ಸ್ಥಾನಕ್ಕೆ ಉಮೇಶ ಮೇಟಿ ಅವರಿಗೆ ಅವಕಾಶ ನೀಡಿದ್ದೇವೆ. ಎಲ್ಲರೂ ಅವರನ್ನು ಬೆಂಬಲಿಸಬೇಕು ಎಂದು ಕೋರಿದರು.
ಕೊರೋನಾದಿಂದ ಕಂಗೆಟ್ಟಿದ್ದ ರಾಜ್ಯದ ಜನರನ್ನು ಐದು ಗ್ಯಾರಂಟಿಗಳ ಮೂಲಕ ಮೇಲೆತ್ತುವ ಕೆಲಸ ಮಾಡಿದ್ದೇವೆ. ಏಳು ಕೋಟಿ ಜನರಲ್ಲಿ ಮೂರೂವರೆ ಕೋಟಿಯಷ್ಟು ಮಹಿಳೆಯರಿದ್ದು, ಅವರನ್ನು ಸ್ವಾವಲಂಬಿಯಾಗಿ ಮಾಡಲು ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಗೃಹಲಕ್ಷ್ಮೀ ಯೋಜನೆಯ ಲಾಭ ಒಂದು ಕೋಟಿ ಇಪ್ಪತ್ತಾರು ಲಕ್ಷ ಮಹಿಳೆಯರಿಗೆ ತಲುಪುತ್ತಿದೆ. ಈವರೆಗೆ ಜನರಿಗೆ ಒಂದು ಲಕ್ಷ ನಲವತ್ತು ಸಾವಿರ ಕೋಟಿ ರುಪಾಯಿ ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ನೀಡಿದ್ದೇವೆ ಎಂದು ಪ್ರತಿಪಾದಿಸಿದರು.ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಡ್ಯಾಂ ಎತ್ತರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೋಟಿಫಿಕೇಶನ್ ಹೊರಡಿಸಿದರೆ ನಾವು ಎರಡೇ ವರ್ಷದಲ್ಲಿ ಡ್ಯಾಂ ಎತ್ತರಿಸುವ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗ ಯುಕೆಪಿಗೆ ಸಂಬಂಧಿಸಿದ ಯಾವ ಕೆಲಸವನ್ನು ಮಾಡಿಲ್ಲ. ಹದಿಮೂರು ವರ್ಷ ಕಳೆದರೂ ಕೇಂದ್ರ ಸರ್ಕಾರ ನೋಟಿಫಿಕೇಶನ್ ಹೊರಡಿಸುತ್ತಿಲ್ಲ. ಯಾವ ಮುಖ ಹೊತ್ತು ಈ ಭಾಗದಲ್ಲಿ ಮತ ಕೇಳಲು ಬಿಜೆಪಿಯರು ಬರುತ್ತಾರೆ ಎಂದು ಸಿಎಂ ಪ್ರಶ್ನಿಸಿದರು.
ಬಿಜೆಪಿಯವರು ಪ್ರಚಾರಕ್ಕೆ ಬಂದಾಗ ನೋಟಿಫಿಕೇಶನ್ ಯಾಕೆ ಹೊರಡಿಸಿಲ್ಲ?, ಅದನ್ನು ಹೊರಡಿಸಿ ನಮ್ಮೂರಿಗೆ ಬನ್ನಿ ಎಂದು ಮತದಾರರು ಕೇಳಲಿ. ಆಗಲಾದರೂ ಬಿಜೆಪಿಯವರಿಗೆ ಬುದ್ಧಿ ಬರುತ್ತದೆ ಎಂದು ಅವರು ಕಿಡಿಕಾರಿದರು.ಉಮೇಶ ಮೇಟಿ ಪರ ಸಿಎಂ ಭರ್ಜರಿ ಪ್ರಚಾರ: