ನಮ್ಮದು ನುಡಿದಂತೆ ನಡೆದ ಸರ್ಕಾರ: ಸಿದ್ದು

KannadaprabhaNewsNetwork |  
Published : Mar 31, 2026, 02:15 AM IST
ಸಿದ್ದು ಪ್ರಚಾರ | Kannada Prabha

ಸಾರಾಂಶ

ನಾವು 2023ರ ಚುನಾವಣೆ ವೇಳೆ ಒಟ್ಟು 165 ಭರವಸೆ ಕೊಟ್ಟಿದ್ದೇವು. ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಾವು 2023ರ ಚುನಾವಣೆ ವೇಳೆ ಒಟ್ಟು 165 ಭರವಸೆ ಕೊಟ್ಟಿದ್ದೇವು. ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ₹72 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದೇವೆ. ನಮ್ಮದು ನುಡಿದಂತೆ ನಡೆದ ಸರ್ಕಾರ. ಪ್ರಧಾನಿ ನರೇಂದ್ರ ಮೋದಿಯವರು ಸಾಲಮನ್ನಾ ಮಾಡಿದ್ದಾರಾ? ಅವರಿಗೆ ಯಾಕೆ ಮತ ಹಾಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಬಾಗಲಕೋಟೆ ತಾಲೂಕಿನ ಸುತಗುಂಡಾರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ ಮೇಟಿ ಪರ ಭರ್ಜರಿ ಪ್ರಚಾರ ನಡೆಸಿದ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡಿದರೆ ಯಾರೂ ಕಿವಿಗೊಡಬೇಡಿ. ಈ ಭಾಗದಲ್ಲಿ ಎಚ್.ವೈ.ಮೇಟಿ ಅವರು ಸಾಕಷ್ಟು ಜನಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವರ ಸ್ಥಾನಕ್ಕೆ ಉಮೇಶ ಮೇಟಿ ಅವರಿಗೆ ಅವಕಾಶ ನೀಡಿದ್ದೇವೆ. ಎಲ್ಲರೂ ಅವರನ್ನು ಬೆಂಬಲಿಸಬೇಕು ಎಂದು ಕೋರಿದರು.

ಕೊರೋನಾದಿಂದ ಕಂಗೆಟ್ಟಿದ್ದ ರಾಜ್ಯದ ಜನರನ್ನು ಐದು ಗ್ಯಾರಂಟಿಗಳ ಮೂಲಕ ಮೇಲೆತ್ತುವ ಕೆಲಸ ಮಾಡಿದ್ದೇವೆ. ಏಳು ಕೋಟಿ ಜನರಲ್ಲಿ ಮೂರೂವರೆ ಕೋಟಿಯಷ್ಟು ಮಹಿಳೆಯರಿದ್ದು, ಅವರನ್ನು ಸ್ವಾವಲಂಬಿಯಾಗಿ ಮಾಡಲು ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಗೃಹಲಕ್ಷ್ಮೀ ಯೋಜನೆಯ ಲಾಭ ಒಂದು ಕೋಟಿ ಇಪ್ಪತ್ತಾರು ಲಕ್ಷ ಮಹಿಳೆಯರಿಗೆ ತಲುಪುತ್ತಿದೆ. ಈವರೆಗೆ ಜನರಿಗೆ ಒಂದು ಲಕ್ಷ ನಲವತ್ತು ಸಾವಿರ ಕೋಟಿ ರುಪಾಯಿ ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ನೀಡಿದ್ದೇವೆ ಎಂದು ಪ್ರತಿಪಾದಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಡ್ಯಾಂ ಎತ್ತರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೋಟಿಫಿಕೇಶನ್‌ ಹೊರಡಿಸಿದರೆ ನಾವು ಎರಡೇ ವರ್ಷದಲ್ಲಿ ಡ್ಯಾಂ ಎತ್ತರಿಸುವ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗ ಯುಕೆಪಿಗೆ ಸಂಬಂಧಿಸಿದ ಯಾವ ಕೆಲಸವನ್ನು ಮಾಡಿಲ್ಲ. ಹದಿಮೂರು ವರ್ಷ ಕಳೆದರೂ ಕೇಂದ್ರ ಸರ್ಕಾರ ನೋಟಿಫಿಕೇಶನ್‌ ಹೊರಡಿಸುತ್ತಿಲ್ಲ. ಯಾವ ಮುಖ ಹೊತ್ತು ಈ ಭಾಗದಲ್ಲಿ ಮತ ಕೇಳಲು ಬಿಜೆಪಿಯರು ಬರುತ್ತಾರೆ ಎಂದು ಸಿಎಂ ಪ್ರಶ್ನಿಸಿದರು.

ಕೇಂದ್ರ ಸರ್ಕಾರ ನೋಟಿಫಿಕೇಶನ್ ಹೊರಡಿಸದೇ ಡ್ಯಾಂ ಎತ್ತರಿಸಲು ಸಾಧ್ಯವಿಲ್ಲ. ಅವರು ನೋಟಿಫಿಕೇಶನ್ ಹೊರಡಿಸಿದರೆ, ನಾವು ಮುಂದಿನ ಕೆಲಸ ಮಾಡುತ್ತೇವೆ. ಎರಡು ವರ್ಷದಲ್ಲಿ ಪೂರ್ಣ ಯೋಜನೆ ಮುಗಿಸುತ್ತೇವೆ ಎಂದು ಸಿಎಂ ಭರವಸೆ ನೀಡಿದರು.

ಬಿಜೆಪಿಯವರು ಪ್ರಚಾರಕ್ಕೆ ಬಂದಾಗ ನೋಟಿಫಿಕೇಶನ್‌ ಯಾಕೆ ಹೊರಡಿಸಿಲ್ಲ?, ಅದನ್ನು ಹೊರಡಿಸಿ ನಮ್ಮೂರಿಗೆ ಬನ್ನಿ ಎಂದು ಮತದಾರರು ಕೇಳಲಿ. ಆಗಲಾದರೂ ಬಿಜೆಪಿಯವರಿಗೆ ಬುದ್ಧಿ ಬರುತ್ತದೆ ಎಂದು ಅವರು ಕಿಡಿಕಾರಿದರು.ಉಮೇಶ ಮೇಟಿ ಪರ ಸಿಎಂ ಭರ್ಜರಿ ಪ್ರಚಾರ:

ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ ಮೇಟಿ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಭರ್ಜರಿ ಪ್ರಚಾರ ನಡೆಸಿದರು. ತಾಲೂಕಿನ ಸುತಗುಂಡಾರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಸಿದ್ದರಾಮಯ್ಯ ಅವರಿಗೆ ಮಹಿಳೆಯರು ಆರತಿ ಬೆಳಗಿ ಸಾಂಪ್ರದಾಯಿಕ ಸ್ವಾಗತ ಕೋರಿದರು. ಈ ವೇಳೆ, ಸಿಎಂ ಸಮ್ಮುಖದಲ್ಲಿ ಅನೇಕ ಜನರು ಕಾಂಗ್ರೆಸ್ ಗೆ ಸೇರ್ಪಡೆಯಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವಮಾನದ ಕಲಾಶ್ರೇಷ್ಠ ಸಾಧಕರ ಪ್ರಶಸ್ತಿಗೆ ನಾಡೋಜ ಡಾ.ವಿ.ಟಿ. ಕಾಳೆ ಆಯ್ಕೆ
ಸಾಂಸ್ಕೃತಿಕ ಪರಂಪರೆ ಉಳಿಸಿಕೊಳ್ಳಲು ರಂಗಭೂಮಿ ಸಹಕಾರಿ: ಜೆ. ನರಸಿಂಹಮೂರ್ತಿ