ಕನ್ನೇರಿ ಶ್ರೀ ವಿರುದ್ಧ ಬಸವ ಧರ್ಮೀಯರ ಆಕ್ರೋಶ

KannadaprabhaNewsNetwork |  
Published : Oct 14, 2025, 01:00 AM IST
13ಕೆಡಿವಿಜಿ5-ಲಿಂಗಾಯತ ಮಠಾಧೀಶರಿಗೆ ಅವಾಚ್ಯವಾಗಿ ನಿಂದಿಸಿದಕನ್ನೇರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ದೇಶದ್ರೋಹಿ ಕೇಸ್ ದಾಖಲಿಸಿ, ದೇಶದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ದಾವಣಗೆರೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಬಸವ ಧರ್ಮೀಯರು ಪ್ರತಿಭಟಿಸಿದರು. | Kannada Prabha

ಸಾರಾಂಶ

ಲಿಂಗಾಯತ ಮಠಾಧೀಶರಿಗೆ ಅವಮಾನವಾಗುವಂತೆ ಮಾತನಾಡಿ ಸಾಮಾಜಿಕ ಶಾಂತಿಗೆ ಧಕ್ಕೆ ತರಲು ಮುಂದಾಗಿರುವ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಯನ್ನು ದೇಶದಿಂದಲೇ ಗಡೀಪಾರು ಮಾಡುವಂತೆ ಒತ್ತಾಯಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ಮತ್ತು ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಲಿಂಗಾಯತ ಮಠಾಧೀಶರಿಗೆ ಅವಮಾನವಾಗುವಂತೆ ಮಾತನಾಡಿ ಸಾಮಾಜಿಕ ಶಾಂತಿಗೆ ಧಕ್ಕೆ ತರಲು ಮುಂದಾಗಿರುವ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಯನ್ನು ದೇಶದಿಂದಲೇ ಗಡೀಪಾರು ಮಾಡುವಂತೆ ಒತ್ತಾಯಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ಮತ್ತು ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಕನ್ನೇರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆ ಖಂಡಿಸಿ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಪರಿಷತ್ ಪದಾಧಿಕಾರಿಗಳು, ಸಮಾಜ ಬಾಂಧವರು ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ಎಸಿ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರು.

ಇದಕ್ಕೂ ಮುನ್ನ ಜಯದೇವ ವೃತ್ತದಲ್ಲಿ ಮಾತನಾಡಿದ ಪರಿಷತ್ ಪದಾಧಿಕಾರಿಗಳು, ಭಾರತ ಸೌಹಾರ್ದತೆಯ ನೆರವಾಗಿದ್ದು, ಇಲ್ಲಿ ವೈದಿಕಶಾಹಿ ಸೃಷ್ಟಿಸಿದ್ದ ಅಸಮಾನತೆಯ ವಿರುದ್ಧ ಬುದ್ಧ ಗುರು ಶಾಂತಿ, ಸಹಬಾಳ್ವೆ ತತ್ವಗಳ ಮೂಲಕ ಜೀವಪರ ಆಶಯ ಬಿತ್ತರಿಸಿದ್ದರು. ಬುದ್ಧ ಗುರುವಿನ ತತ್ವ, ಚಿಂತನೆ ಇಂದಿಗೂ ಜಗತ್ತಿಗೆ ದಾರಿದೀಪವಾಗಿದೆ. ಬುದ್ಧನ ತರುವಾದ ಮಹತ್ವದ ಸಾಮಾಜಿಕ ಕ್ರಾಂತಿಗೆ ಮುಂದಾಗಿ, ಸಮ ಸಮಾಜಕ್ಕೆ ಮುನ್ನುಡಿ ಬರೆದವರು 12ನೇ ಶತಮಾನದ ಬಸವಾದಿ ಶರಣ-ಶರಣೆಯರು ಎಂದರು.

ಹನ್ನೆರಡನೇ ಶತಮಾನದಲ್ಲೇ ಬಸವ ಗುರು ರೂಪಿಸಿದ ಜೀವಪರ ನೆಲೆಯ ಲಿಂಗಾಯತ ಧರ್ಮವು ತನ್ನದೇ ಆದ ಮಹತ್ವ ಪಡೆದುಕೊಂಡು ಬಂದಿದೆ. ಬವರ ಪರ ಮಠಾಧೀಶರ ಏಕತೆ ಸಹಿಸಲಾಗದ ಮತ್ತು ವೈದಿಕಶಾಹಿಯ ಗುಲಾಮರಂತೆ ವರ್ತಿಸುತ್ತಿರುವ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಬಸವ ಪರವಾದ ಲಿಂಗಾಯ ಮಠಾಧೀಶರಿಗೆ ಅಸಂವಿಧಾನಿಕ ಮತ್ತು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಅಕ್ಷಮ್ಯ. ಲಿಂಗಾಯತ ಮಠಾಧೀಶರಿಗೆ ನಿಂದಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದು ಕಿಡಿಕಾರಿದರು.

ಕಾಡಸಿದ್ದೇಶ್ವರ ಸ್ವಾಮೀಜಿ ಮಾತಿನಿಂದ ಕೋಟ್ಯಂತರ ಬಸವ ಪರವಾದ ಲಿಂಗಾಯತ ಧರ್ಮೀಯರಿಗೆ ಅಪಮಾನವಾಗಿದೆ. ಇಂತಹವರ ಮಾತು ಸಾಮಾಜಿಕ ಶಾಂತಿಗೆ ಧಕ್ಕೆ ತರುತ್ತಿವೆ. ಕೋಮುದ್ವೇಷ, ಸಾಮಾಜಿಕ ಶಾಂತಿಗೆ ಭಂಗ ತರುವಂತೆ ಮಾತನಾಡಿ ಪ್ರಚಾರ ಗಿಟ್ಟಿಸಿಕೊಳ್ಳುವುದನ್ನೇ ಹವ್ಯಾಸ ಮಾಡಿಕೊಂಡ ಇಂತಹವರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಭಾರತದ ಸಾರ್ವಭೌಮತೆ, ಸಹಬಾಳ್ವೆ, ಸೌಹಾರ್ದ, ಸಹೋದರತ್ವದ ಮೂಲದಂತಿರುವ ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟಾಗುತ್ತಿದೆ. ಸ್ವಾಮಿಗಳ ಈ ಕೃತ್ಯವು ದೇಶದ್ರೋಹಿ ಕೃತ್ಯಕ್ಕೆ ಸಮಾನ ಎಂದು ಆರೋಪಿಸಿದರು.

ಭಾರತೀಯ ಸಮಾಜದಲ್ಲಿ ಲಿಂಗಾಯತ ಮಠಾಧೀಶರು ಗೌರವಯುತ ಸ್ಥಾನಮಾನ ಪಡೆದಿದ್ದು, ಈ ನೆಲದ ಸೌಹಾರ್ದತೆ, ಸಂವಿಧಾನ ಪಾಲಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಇಂತಹ ಗೌರವಯುತ ಸ್ಥಾನಮಾನದ ಮಠಾಧೀಶರಿಗೆ ಅವಾಚ್ಯವಾಗಿ ನಿಂದಿಸಿ, ಸಾಮಾಜಿಕ ಶಾಂತಿಗೆ ಧಕ್ಕೆ ತಂದ ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ದೇಶದಿಂದಲೇ ಗಡೀಪಾರು ಮಾಡಬೇಕು. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಲಿಂಗಾಯತ ಧರ್ಮದ ಮುಖಂಡರಾದ ಹುಚ್ಚಪ್ಪ ಮಾಸ್ತರ್, ಪರಿಷತ್‌ನ ಕೆ.ಬಿ.ಪರಮೇಶ್ವರಪ್ಪ, ರುದ್ರಗೌಡ ಗೋಪನಾಳ್, ವಿಶ್ವೇಶ್ವರಯ್ಯ, ಶಿವಮೂರ್ತಯ್ಯ, ಎಚ್.ಆರ್.ಲಿಂಗರಾಜ ಶಾಬನೂರು, ಕಕ್ಕರಗೊಳ್ಳ ನಾಗರಾಜ, ಅಣಜಿ ಮಲ್ಲಿಕಾರ್ಜುನ, ಶ್ರೀ ಕುಮಾರ ಆನೆಕೊಂಡ, ಆವರಗರೆ ರುದ್ರಮುನಿ, ಲಿಂಗಾನಂದ ಕಮ್ಮತ್ತಹಳ್ಳಿ, ಎಂ.ಸಿ.ಶ್ರೀನಿವಾಸ, ಅವಿನಾಶ, ಶಿವರಾಜ ಕಬ್ಬೂರು, ವನಜಾ ಮಹಾಲಿಂಗಯ್ಯ, ವೀಣಾ ಮಂಜುನಾಥ, ಪೂರ್ಣಿಮಾ ಪ್ರಸನ್ನ, ಮಮತಾ ನಾಗರಾಜ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ