ಕನ್ನಡಪ್ರಭ ವಾರ್ತೆ ಮಂಡ್ಯ
ಮೈಕ್ರೋ ಫೈನಾನ್ಸ್ ಹಾವಳಿ ತಪ್ಪಿಸಿ ಆರ್ಬಿಐ ನಿರ್ದೇಶನದಂತೆ ನಬಾರ್ಡ್ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ನೀಡುವಂತೆ ಒತ್ತಾಯಿಸಿ ಜಿಲ್ಲಾ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಕಾರ್ಯಕರ್ತರು, ರಾಜ್ಯ ಸರ್ಕಾರ, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಘೋಷಣೆ ಕೂಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಧರ್ಮಸ್ಥಳ ಸಂಘವನ್ನು ಒಳಗೊಂಡಂತೆ ಮೈಕ್ರೋ ಫೈನಾನ್ಸ್ ಕಂಪನಿಗಳು ವಾರ ಮತ್ತು ತಿಂಗಳ ಕಂತುಗಳನ್ನು ನೀಡಿ ಶೇ.೧೯ ರಿಂದ ೩೦ ರಷ್ಟು ಬಡ್ಡಿ ಹಾಕಿ ವಸೂಲಿ ಮಾಡುವುದು ಸಾಲವನ್ನು ಕಟ್ಟಲಾಗದಿದ್ದಾಗ ಬೆಳಗ್ಗೆ ೬ ಗಂಟೆಯಿಂದ ರಾತ್ರಿ ೧೧ರವರೆಗೂ ಮನೆ ಬಳಿ ಉಳಿಯುವುದು, ಅವಾಚ್ಯಶಬ್ಧಗಳಿಂದ ಮಾತನಾಡುವುದು ಬಾಯಿಗೆ ಬಂದಂತೆ ನಿಂದಿಸುವುದು, ಜಿಲ್ಲೆಯಾದ್ಯಂತ ನಡೆಯುತ್ತಿರುವ ಪರಿಣಾಮ ಕೂಲಿಕಾರರ ಕುಟುಂಬಗಳು ಇವರ ಕಿರುಕುಳಕ್ಕೆ ಬೇಸತ್ತು ಕುಟುಂಬ ಸಹಿತ ಊರು ಬಿಡುವುದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಹೆಚ್ಚುತ್ತಿರುವುದಕ್ಕೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಒತ್ತಡವೇ ಕಾರಣ ಎಂದು ದೂರಿದರು.ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬಗಳಿಗೆ ೨೫ ಲಕ್ಷ ರು.ಗಳ ಪರಿಹಾರ ನೀಡಬೇಕು. ಆರ್ಬಿಐ ನಿಯಮಗಳನ್ನು ಉಲ್ಲಂಘಿಸಿ ಸಾಲ ನೀಡಿ ಕಿರುಕುಳ ನೀಡುತ್ತಿರುವ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಾಲ ನೀಡಲು ಅನುಸರಿಸಿರುವ ಆರ್ಬಿಐ ನಿಯಮಗಳನ್ನು ಎಲ್ಲ ಸರ್ಕಾರಿ ಕಚೇರಿಗಳ ಮುಂದೆ ಕನ್ನಡ ಭಾಷೆಯಲ್ಲಿ ನಾಮಫಲಕಗಳನ್ನು ಪ್ರಕಟಿಸುವುದೂ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿದರು.
ಮುಖಂಡರಾದ ಎಂ. ಪುಟ್ಟಮಾದು, ಬಿ. ಹನುಮೇಶ್, ಟಿ.ಪಿ.ಅರುಣ್ಕುಮಾರ್, ಅಮಾಸಯ್ಯ, ಆರ್.ರಾಜು, ಎನ್.ಸುರೇಂದ್ರ, ಲಕ್ಷ್ಮ್ಮೀ ಕುಂತೂರು, ಲಕ್ಷ್ಮಿ ಗೊಲ್ಲರಹಳ್ಳಿ, ಸಂತೋಷ್, ವೈ.ಕೆ. ಗೋಪಾಲಸ್ವಾಮಿ, ರಾಜೇಶ್ವರಿ, ಶೋಭಾ ಇತರರಿದ್ದರು.