ಗೋವಾದಲ್ಲಿ ಹೊರಗಿನವರು ವಾಹನ್‌ ಖರೀದಿಗೆ ತಡೆ!

KannadaprabhaNewsNetwork |  
Published : Jul 25, 2025, 12:31 AM ISTUpdated : Jul 25, 2025, 10:37 AM IST
ಗೋವಾ | Kannada Prabha

ಸಾರಾಂಶ

ಕಡಲ ಕಿನಾರೆಯ ಪುಟ್ಟ ರಾಜ್ಯವನ್ನು ಸುಂದರವಾಗಿ ಕಟ್ಟಿ ಬೆಳೆಸಿದ ಕನ್ನಡಿಗರು ಇನ್ನು ಮುಂದೆ ಇಲ್ಲಿ ಯಾವುದೇ ವಾಹನ ಖರೀದಿಸುವಂತಿಲ್ಲ!

ಮಲ್ಲಿಕಾರ್ಜುನ ಸಿದ್ದಣ್ಣವರ

 ಪಣಜಿ :  ಕಡಲ ಕಿನಾರೆಯ ಪುಟ್ಟ ರಾಜ್ಯವನ್ನು ಸುಂದರವಾಗಿ ಕಟ್ಟಿ ಬೆಳೆಸಿದ ಕನ್ನಡಿಗರು ಇನ್ನು ಮುಂದೆ ಇಲ್ಲಿ ಯಾವುದೇ ವಾಹನ ಖರೀದಿಸುವಂತಿಲ್ಲ!

ಕರ್ನಾಟಕ ಸೇರಿದಂತೆ ಇತರ ರಾಜ್ಯಗಳವರು ವಾಹನ ಖರೀದಿಸಲು ಮತ್ತು ಅವುಗಳನ್ನು ನೋಂದಣಿ ಮಾಡಿಸಲು ಪರವಾನಗಿ ನೀಡದಂತೆ ನಿರ್ಬಂಧ ಹೇರುವ ಕಾನೂನು ರೂಪಿಸಲು ಗೋವಾದ ಬಿಜೆಪಿ ಸರ್ಕಾರ ಮುಂದಾಗಿದೆ. ಗೋವಾದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ಈ ಕಾನೂನು ಜಾರಿಯಾದರೆ ಕನ್ನಡಿಗರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ.

ಈ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ಸದಸ್ಯರೊಬ್ಬರು ‘ರೆವಲೂಶ್ನರಿ ಗೋವಾ’ (ಆರ್.ಜಿ) ಸಂಘಟನೆ ಮೂಲ ಗೋವನ್ನರಿಗೆ ಉದ್ಯೋಗ ಉಳಿಸುವಂತೆ ಹೋರಾಟ ಆರಂಭಿಸಿದೆ. ಅದಕ್ಕೆ ಸರ್ಕಾರದ ಪ್ರತಿಕ್ರಿಯೆ ಮತ್ತು ಪ್ರಯತ್ನ ಏನು?’ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರವಾಸೋಧ್ಯಮ ಸಚಿವ ರೋಹನ ಶಿಂಧೆ, ‘ಮೂಲ ಗೋವನ್ನರಿಗೆ ಉದ್ಯೋಗ ಉಳಿಸಲು ಹಲವು ರೀತಿಯ ಪ್ರಯತ್ನ ನಡೆದಿದೆ. ಈಗ ಹೊಸ ಹೆಜ್ಜೆಯಾಗಿ ಕನ್ನಡಿಗರೂ ಸೇರಿ ಹೊರ ರಾಜ್ಯದವರ ವಾಹನ ಖರೀದಿಗೆ ನಿರ್ಬಂಧ ವಿಧಿಸುವ ಕಾನೂನು ರಚಿಸಲಾಗುವುದು’ ಎಂದು ಭರವಸೆ ನೀಡಿದರು.

ಹಿಂದಿನಿಂದಲೂ ಗೋವಾದಲ್ಲಿನ ಕೈಗಾರಿಕೆಗಳಲ್ಲಿನ ಉದ್ಯೋಗವೆಲ್ಲ ಕನ್ನಡಿಗರ ಪಾಲಾಗಿವೆ. ಇಲ್ಲಿನ ಬಹುತೇಕ ಬೀಚ್‌ಗಳಲ್ಲಿನ ವ್ಯಾಪಾರ, ವಹಿವಾಟನ್ನು ಕನ್ನಡಿಗರೇ ನಡೆಸುತ್ತಿದ್ದಾರೆ. ಕ್ಯಾಬ್‌, ಟ್ಯಾಕ್ಸಿ ಸಾರಿಗೆಯಲ್ಲೂ ಅವರೇ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸರಕು ಸಾಗಣೆಯ ಲಾರಿ ಉದ್ಯಮದಲ್ಲೂ ಮುನ್ನುಗ್ಗುತ್ತಿದ್ದಾರೆ. ಇದರಿಂದ ಮೂಲ ಗೋವನ್ನರಿಗೆ ಉದ್ಯೋಗವೇ ಇಲ್ಲದಂತಾಗಿದೆ. ಈ ಅಪಾಯ ತಪ್ಪಿಸಲು ಕನ್ನಡಿಗರು ಸೇರಿ ಅನ್ಯ ರಾಜ್ಯದವರ ವಾಹನ ಖರೀದಿಗೆ ನಿರ್ಬಂಧ ಹೇರುವ ಕಾನೂನನ್ನು ಇಷ್ಟರಲ್ಲಿಯೇ ರೂಪಿಸಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು. ಸಚಿವರ ಈ ನಿಲುವನ್ನು ಇಡೀ ಸದನ ಮೇಜು ಕುಟ್ಟಿ ಸ್ವಾಗತಿಸಿತು.

ಕನ್ನಡಿಗ ಲಾರಿ ಚಾಲಕನ ಮೇಲೆ ಹಲ್ಲೆ ಗೋವನ್ನರ ಹಲ್ಲೆ

ಸಚಿವರ ಈ ಹೇಳಿಕೆಯ ಬೆನ್ನಲ್ಲೇ ಮಾಫುಸಾದಲ್ಲಿ ಕಳೆದ 40 ವರ್ಷಗಳಿಂದ ವಾಸವಾಗಿರುವ ಮೂಲತಃ ವಿಜಯಪುರ ಜಿಲ್ಲೆ ತಲಗೇರಿಯ ಅನೀಲ ರಾಠೋಡ್ ಎಂಬ ಲಾರಿ ಚಾಲಕನ ಮೇಲೆ ಕೆಲವರು ಹಲ್ಲೆ ನಡೆಸಿ ಲಾರಿ ಚಾಲನೆಗೆ ಅಡ್ಡಿಪಡಿಸಿದ್ದಾರೆ.

ಸ್ವಂತ ಲಾರಿ ಇಟ್ಟುಕೊಂಡು ಪರವಾನಿಗೆ ಪಡೆದು ಅಧಿಕೃತವಾಗಿ ನಿತ್ಯ ಮಹಾರಾಷ್ಟ್ರದ ಕುಡಾಳ ಪ್ರದೇಶದಿಂದ ಗೋವಾಕ್ಕೆ ಮರಳು ಸಾಗಿಸುತ್ತ ಬಂದಿರುವ ಅನೀಲ ರಾಠೋಡನನ್ನು ದಾರಿ ಮಧ್ಯದಲ್ಲಿಯೇ ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ. ಗೋವಾದಲ್ಲಿ ಸದ್ಯ 300ಕ್ಕೂ ಹೆಚ್ಚು ಕನ್ನಡಿಗರ ಲಾರಿಗಳಿವೆ. ಅದಿರು, ಮರಳು ಸಾಗಾಣಿಕೆಯಲ್ಲಿ ತೊಡಗಿವೆ. ಇಂದಿನ ಘಟನೆ ಮತ್ತು ಸಚಿವರ ಹೇಳಿಕೆ ಈ ಕನ್ನಡಿಗ ಲಾರಿ ಚಾಲಕರಲ್ಲಿ ಭಯ ಹುಟ್ಟಿಸಿದೆ.

ವಿವಿಧ ಕ್ಷೇತ್ರದಿಂದ ಕನ್ನಡಿಗರನ್ನು ಅತಂತ್ರಗೊಳಿಸುವ, ಗೋವಾದಿಂದ ಹೊರದಬ್ಬುವ ಪ್ರಯತ್ನಗಳು ಇತ್ತೀಚಿನ ವರ್ಷಗಳಲ್ಲಿ ವಿಪರೀತವಾಗಿದೆ. ಸ್ಥಳೀಯ ಸಂಘಟನೆಗಳು ಈ ಕೆಲಸ ಮಾಡುತ್ತಿದ್ದವು. ಈಗ ಸರ್ಕಾರವೇ ಇಂಥ ಕೆಲಸಕ್ಕೆ ಮುಂದಾಗಿರುವುದು ನಮಗೆ ದಿಕ್ಕುತೋಚದಂತೆ ಆಗಿದೆ.

-ಶಿವಾನಂದ ಬಿಂಗಿ, ಅಧ್ಯಕ್ಷರು- ಗೋವಾ ಕನ್ನಡಿಗರ ಸಂಘ, ವಾಸ್ಕೋ

PREV
Read more Articles on

Recommended Stories

ಯಾವುದೇ ಜಾತಿಯ ಬಗ್ಗೆ ಹೇಳಿಕೆ ನೀಡಿಲ್ಲ: ರಂಭಾಪುರಿ ಶ್ರೀ ಸ್ಪಷ್ಟನೆ
ರಂಭಾಪುರಿ ಶ್ರೀ ವಿರುದ್ಧ ದಲಿತ ಮಠಾಧೀಶರ ಕಿಡಿ