ಹೂವಿನಹಡಗಲಿ: ಇಲ್ಲಿನ ಕೆಕೆಆರ್ಟಿಸಿ ಸಾರಿಗೆ ಘಟಕದ ಹೊರಗುತ್ತಿಗೆ ಚಾಲಕರ ವೇತನ ವಿಳಂಬ ವಿರೋಧಿಸಿ ಮಂಗಳವಾರ ಬೆಳಗ್ಗೆಯಿಂದಲೇ ಸಾರಿಗೆ ಬಸ್ಗಳನ್ನು ಘಟಕದಿಂದ ಹೊರಗೆ ತರದೇ ದಿಢೀರ್ ಪ್ರತಿಭಟನೆ ಮಾಡಿದ ಪ್ರಸಂಗ ಜರುಗಿದೆ.
ಮೈಲಾರ, ಕೊಟ್ಟೂರು, ಕುರುವತ್ತಿ ಜಾತ್ರೆಗಳು, ಪಿಯುಸಿ ಪರೀಕ್ಷೆಗಳಿವೆ ಎಂದು ನಮ್ಮ ಮುಷ್ಕರವನ್ನು ಮುಂದೂಡುವ ಕೆಲಸ ಮಾಡಿದ್ದಾರೆ. ಆದರೆ, ನಮ್ಮ ಸಮಸ್ಯೆಯನ್ನು ಯಾರೂ ಪರಿಹರಿಸುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಟೆಂಡರ್ ಪಡೆದವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ, ಇಲ್ಲಿ ವರೆಗೂ ನಮ್ಮಿಂದ ಸೇವೆ ಮಾಡಿಸಿಕೊಂಡ ನಮ್ಮವರೇ ಹೀಗೆಂದರೆ ನಮ್ಮ ಸಮಸ್ಯೆ ಪರಿಹರಿಸುವವರು ಯಾರು? ವೇತನ ಇಲ್ಲದೆ ನಮ್ಮ ಜೀವನ ಬೀದಿಗೆ ಬರುತ್ತಿದೆ. ಇಂದು ನಮ್ಮ ವೇತನ ನೀಡಿದರೆ ಮಾತ್ರ ನಾವು ಕರ್ತವ್ಯಕ್ಕೆ ಹಾಜರಾಗುತ್ತೇವೆ ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ನವೀನ, ಆನಂದ ಜೆ., ನಾಗರಾಜ, ಬಿ. ಶಶಿಕಿರಣ, ಹಾಲೇಶ, ಕೊಟ್ರೇಶ, ಚನ್ನಮಲ್ಲಪ್ಪ, ಶೇಕ್ ಸಾಹೇಬ್, ಶರಣಪ್ಪ, ನಾಗರಾಜ, ವೀರೇಶ, ಪ್ರಭು, ಪ್ರಶಾಂತ್, ನಾಗರಾಜ್ ಸಿ, ದುರುಗೇಶ್, ಕಳಕರಡ್ಡಿ, ಗುರುಬಸವರಾಜ, ನಾಗರಾಜ್ ಡಿ. ಇ, ಕೊಟ್ರೇಶ್ ಬಡಿಗೇರ್, ಶರಪ್ಪ ಬಾರ್ಕಿ, ಪ್ರಶಾಂತ್ ಗೌಡ ಹಾಗೂ ಇತರರಿದ್ದರು.ಹೊರ ಗುತ್ತಿಗೆ ಚಾಲಕರ ಪ್ರತಿಭಟನೆಯ ಪರಿಣಾಮ, ಮಂಗಳವಾರ ಬೆಳಗ್ಗೆಯಿಂದಲೇ ತಾಲೂಕಿನ ಸಾರಿಗೆ ಇಲಾಖೆಯ ಗ್ರಾಮೀಣ ಸೌಲಭ್ಯಗಳು ಸ್ಥಗಿತವಾಗಿದ್ದವು. ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿನ 3 ಕೇಂದ್ರದಲ್ಲಿ ಪಿಯುಸಿ ಅರ್ಥಶಾಸ್ತ್ರ ಪರೀಕ್ಷೆ ಜರುಗುತ್ತಿದ್ದು, ಪರೀಕ್ಷಾ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳು ಹಾಜರಾಗಲು ಪರದಾಡುವ ಸ್ಥಿತಿ ಉಂಟಾಗಿತ್ತು.
ಈ ವೇಳೆ ವಿಭಾಗೀಯ ಸಂಚಾರ ಅಧಿಕಾರಿ ವಿ.ಆರ್. ರೆಡ್ಡಿ ಸ್ಥಳಕ್ಕೆ ಭೇಟಿ, ಹೊರ ಗುತ್ತಿಗೆ ಚಾಲಕರ ಜನವರಿ ತಿಂಗಳ ವೇತನ, ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿದ ಬಳಿಕ, ಚಾಲಕರು ಮಧ್ಯಾಹ್ನದ ಹೊತ್ತಿಗೆ ಕರ್ತವ್ಯಕ್ಕೆ ಹಾಜರಾದರು.