ನಿಕಾಹ್‌ ''ಕಬೂಲ್ ಹೈ'' ಎಂದ ನೂರಕ್ಕೂ ಹೆಚ್ಚು ಮುಸ್ಲಿಂ ಜೋಡಿ

KannadaprabhaNewsNetwork |  
Published : Feb 14, 2026, 01:15 AM IST
4.ಮುಸ್ಲಿಂ ವಧು - ವರರ ಸರಳ ವಿವಾಹವನ್ನು ಮೌಲ್ವಿ ನೆರವೇರಿಸುತ್ತಿರುವುದು. | Kannada Prabha

ಸಾರಾಂಶ

ರಾಮನಗರ: ನಗರದ ಯಾರಬ್ ನಗರದ ಮೖದಾನದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಮುಸ್ಲಿಂ ಸಮುದಾಯದ 100ಕ್ಕೂ ಹೆಚ್ಚು ಜೋಡಿ ಶುಕ್ರವಾರ ಸಂಜೆ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು

ರಾಮನಗರ: ನಗರದ ಯಾರಬ್ ನಗರದ ಮೖದಾನದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಮುಸ್ಲಿಂ ಸಮುದಾಯದ 100ಕ್ಕೂ ಹೆಚ್ಚು ಜೋಡಿ ಶುಕ್ರವಾರ ಸಂಜೆ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.

ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಹಾರೋಹಳ್ಳಿ ತಾಲೂಕಿನ ಮುಸ್ಲಿಂ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಧು - ವರರ ಕುಟುಂಬಸ್ಥರು, ಸಂಬಂಧಿಕರು ಮಾತ್ರವಲ್ಲದೆ ಸಹಸ್ರಾರು ಜನರು ಸಾಮೂಹಿಕ ವಿವಾಹ ಕಾರ್ಯಕ್ಕೆ ಸಾಕ್ಷಿಯಾದರು.

ಯಾರಬ್ ನಗರದಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಮೂರು ಎಕರೆ ಜಾಗದಲ್ಲಿ ಹಾಕಿದ್ದ ಜರ್ಮನ್ ಟೆಂಟ್‌ನಲ್ಲಿ ನಿರ್ಮಿಸಿದ್ದ ಬೖಹತ್ ವೇದಿಕೆಯಲ್ಲಿ ಎಲ್ಲಾ ವರರು ಆಸೀನರಾದರೆ, ಸನಿಹದಲ್ಲಿಯೇ ಇದ್ದ ಸುಲ್ತಾನ್ ಪ್ಯಾಲೇಸ್‌ನಲ್ಲಿ ಎಲ್ಲ ವಧುಗಳನ್ನು ಕೂರಿಸಲಾಗಿತ್ತು.

ಮೌಲ್ವಿ ಮೌಲಾನ ಹಜರತ್ ಅಲಿ ಖಾನ್ ಇಬ್ಬರನ್ನೂ ಒಪ್ಪಿಗೆ ಕೇಳಿದಾಗ ವಧು-ವರರು ಮೂರು ಬಾರಿ "ಕಬೂಲ್ ಹೈ " ಎಂದು ಹೇಳಿದರು. ಇದಾದ ನಂತರ ನಿಕಾಹ್ ನಾಮ ನಡೆಯಿತು. ಕುರಾನ್ ಪ್ರಕಾರ ವರ ಮತ್ತು ವಧುವಿನ ಕರ್ತವ್ಯಗಳನ್ನು ವಧು ಮತ್ತು ವರನ ಕುಟುಂಬಗಳಿಂದ ತಲಾ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಪಠಿಸಲಾಯಿತು. ಅಧಿಕೃತ ವಿವಾಹಕ್ಕೆ ಸಹಿ ಹಾಕಿದ ನಂತರ ಖುತ್ಬಾ ಪಠಿಸಲಾಯಿತು.

ಕೊನೆಯಲ್ಲಿ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್, ಪೌರಾಡಳಿತ ಸಚಿವ ರಹೀಂ ಖಾನ್, ಕೆಪಿಸಿಸಿ ಉಪಾಧ್ಯಕ್ಷ ಸೈಯದ್ ಜಿಯಾವುಲ್ಲಾ ಸೇರಿದಂತೆ ಹಲವಾರು ಗಣ್ಯರು, ಧರ್ಮಗುರುಗಳು, ಹಿರಿಯರು ನವ ವಧು ಮತ್ತು ವರರಿಗೆ ಆಶೀರ್ವದಿಸಿದರು.

ಸಾಮೂಹಿಕ ವಿವಾಹೋತ್ಸವದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಎಲ್ಲ ನವ ವಧುಗಳಿಗೆ ತಲಾ ನಾಲ್ಕು ಜೊತೆ ಸೀರೆ, ಕಾಲು ಚೖೆನ್, ವರರಿಗೆ ಜುಬ್ಬಾ, ಪೈಜಾಮ, ಜಾಕೆಟ್, ಟೋಪಿ, ವಾಚ್, ಮನೆಗೆ ಅಲ್ಮೇರಾ, ಪಲ್ಲಂಗ, ಗಾದಿ ಹಾಗೂ ಹೊದಿಕೆ, ದಿನಬಳಕೆಯ ಪಾತ್ರೆಗಳನ್ನು ಉಡುಗೊರೆಯಾಗಿ ನೀಡಿದರು.

ವೇದಿಕೆ ಮುಂಭಾಗದಲ್ಲಿಯೇ ಊಟ ತಯಾರಿಸಲು ಅಡುಗೆ ಮನೆ ತೆರೆಯಲಾಗಿತ್ತು. ವಧು ವರರ ಪೋಷಕರು, ಕುಟುಂಬದವರು ಹಾಗೂ ಸಾರ್ವಜನಿಕರು ಊಟ ಸವಿದರು. ವಾಹನಗಳ ನಿಲುಗಡೆಗೂ ಪ್ರತ್ಯೇಕ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಮುನ್ನಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಬಾಕ್ಸ್‌............

ನವ ವಧುವರರು ಸಮಾಜಕ್ಕೆ ಮಾದರಿಯಾಗಿ ಬದುಕಿ

- ಬಡ ಕುಟುಂಬಗಳಿಗೆ ಆಧಾರಸ್ತಂಭವಾಗಿ ನಿಂತಿರುವ ಶಾಸಕ ಇಕ್ಬಾಲ್ ಕಾರ್ಯ ಶ್ಲಾಘನೀಯ

- ಅಲ್ಲಾನನ್ನು ನಂಬುವವರು ಇನ್ನಾದರು ವರದಕ್ಷಿಣೆ ಕೇಳುವುದನ್ನು ಬಿಡಿ

ರಾಮನಗರ: ದುಂದು ವೆಚ್ಚ ಮಾಡಿ ವಿವಾಹವಾಗುವ ಬದಲು ಸಾಮೂಹಿಕ ವಿವಾಹವಾದರೆ ಜೀವನ ಆದರ್ಶಮಯವಾಗಿರುತ್ತದೆ. ವಧು-ವರರು ದಾಂಪತ್ಯ ಜೀವನವನ್ನು ಉತ್ತಮವಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ನವ ಜೋಡಿಗಳಿಗೆ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಕಿವಿಮಾತು ಹೇಳಿದರು.

ನಗರದ ಯಾರಬ್ ನಗರದ ಮೖದಾನದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಆಯೋಜಿಸಿದ್ದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮದುವೆಯಾದ ದಂಪತಿಗಳು ಅನ್ಯೋನ್ಯವಾಗಿ ಬಾಳುವ ಮೂಲಕ ಈ ಕಾರ್ಯಕ್ರಮದ ಉದ್ದೇಶವನ್ನು ಸಾರ್ಥಕ ಪಡಿಸಬೇಕು ಎಂದರು.

ಪ್ರತಿ ಮನೆಯಲ್ಲಿಯೂ ತಂದೆ-ತಾಯಿಗಳ ದೊಡ್ಡ ಕನಸು ಅವರ ಮಗ - ಮಗಳು ಸಂತೋಷದಿಂದ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿದೆ. ಅಂತಹ ಬಡ ಕುಟುಂಬಗಳಿಗೆ ಆಧಾರಸ್ತಂಭವಾಗಿ ನಿಂತಿರುವ ಶಾಸಕ ಇಕ್ಬಾಲ್ ಹುಸೇನ್ ರವರು ಸರಳ ವಿವಾಹ ನೆರವೇರಿಸುವ ಮೂಲಕ ಅವರೆಲ್ಲರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ಇದೊಂದು ಮಾದರಿ ಕಾರ್ಯ ಎಂದು ಬಣ್ಣಿಸಿದರು.

ಇಕ್ಬಾಲ್ ಹುಸೇನ್ ಕಾರ್ಯ ಅಭಿನಂದನೀಯ:

ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, ಈಗ ವಿವಾಹಗಳು ದುಬಾರಿಯಾಗುತ್ತಿದ್ದು, ಒಂದು ಮದುವೆ ಮಾಡುವುದೂ ಕಷ್ಟವಾಗಿದೆ. ಹೀಗಿರುವಾಗ ಶಾಸಕ ಇಕ್ಬಾಲ್ ಹುಸೇನ್ ರವರು ಅದ್ಧೂರಿಯಾಗಿ ಸರಳ ಸಾಮೂಹಿಕ ವಿವಾಹ ನೆರವೇರಿಸಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.

ಸಾಮೂಹಿಕ ವಿವಾಹಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕುದುವುದಲ್ಲದೆ, ನೆಮ್ಮದಿ ಜೀವನಕ್ಕೆ ನಾಂದಿ ಹಾಡುತ್ತವೆ. ಆರ್ಥಿಕವಾಗಿ ದುರ್ಬಲರಾದವರು, ಗ್ರಾಮೀಣ ಪ್ರದೇಶಗಳ ಬಡ ಕುಟುಂಬಗಳಿಗೆ ಸಾಮೂಹಿಕ ವಿವಾಹಗಳು ನೆರವಾಗುತ್ತವೆ. ಇಂತಹ ಸರಳ ವಿವಾಹಗಳ ಅಗತ್ಯತೆ ಹೆಚ್ಚಿದೆ ಎಂದರು.

ವರದಕ್ಷಿಣೆ ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿರುವ ಪಿಡುಗು. ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ವರದಕ್ಷಿಣೆ ಬೆಲೆಯೂ ಹೆಚ್ಚಾಗುತ್ತಿದೆ. ವರದಕ್ಷಿಣೆ ಕಿರುಕುಳ ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿವೆ. ಇಸ್ಲಾಂ ಧರ್ಮದಲ್ಲಿ ವರದಕ್ಷಿಣೆ ಪಡೆಯಬೇಕೆಂದು ಎಲ್ಲೂ ಹೇಳಿಲ್ಲ. ಇನ್ನಾದರು ಅಲ್ಲಾನನ್ನು ನಂಬುವವರು ವರದಕ್ಷಿಣೆ ಕೇಳುವುದನ್ನು ಬಿಡಬೇಕು ಎಂದು ಕಿವಿಮಾತು ಹೇಳಿದರು.

ಕೆಪಿಸಿಸಿ ಉಪಾಧ್ಯಕ್ಷ ಸೈಯದ್ ಜಿಯಾವುಲ್ಲಾ ಸೇರಿದಂತೆ ಹಲವಾರು ಗಣ್ಯರು, ಧರ್ಮಗುರುಗಳು ಪಾಲ್ಗೊಂಡಿದ್ದರು.

13ಕೆಆರ್ ಎಂಎನ್ 4,5.ಜೆಪಿಜಿ

4.ಮುಸ್ಲಿಂ ವಧು - ವರರ ಸರಳ ವಿವಾಹವನ್ನು ಮೌಲ್ವಿ ನೆರವೇರಿಸುತ್ತಿರುವುದು.

5.ಸರಳ ವಿವಾಹ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಟ್ಟುಹಬ್ಬದ ಸವಿ ನೆನಪಿಗೆ ಗಿಡನೆಟ್ಟು ಪೋಷಿಸಬೇಕು: ಶಾಸಕ ತಮ್ಮಯ್ಯ
ತಳ ಸಮುದಾಯಗಳ ಕುಲದೈವದ ಶೋಧ ನಡೆಸಬೇಕು