ನರಗುಂದ ತಾಲೂಕಿನಲ್ಲಿ 200ಕ್ಕೂ ಹೆಚ್ಚು ರೈತರಿಗೆ ಸಿಗದ ಸರ್ಕಾರದ ಸೌಲಭ್ಯ

KannadaprabhaNewsNetwork |  
Published : Jul 20, 2026, 01:00 AM IST
(19ಎನ್.ಆರ್.ಡಿ4 ರೈತರು ತಮ್ಮ ಉತಾರದಲ್ಲಿ ಸರ್ಕಾರ ಎಂದು ನಮೊದವಾಗಿದ್ದನ್ನು ಜಿಲ್ಲಾಧಿಕಾರಿಗಳಗೆ ತೋರಿಸಿ ತಮ್ಮ ಅಳಲು ತೋಡಿಕೊಂಡರವದು.) | Kannada Prabha

ಸಾರಾಂಶ

ಕೆಲವು ರೈತರ ಜಮೀನುಗಳಲ್ಲಿ ಕಾರಣಾಂತರದಿಂದ ಸರ್ಕಾರ ಎಂದು ಇಂದಿಗೂ ಇದ್ದಿದ್ದರಿಂದ ಈ ರೈತರು ಕಳೆದ ನಾಲ್ಕು ದಶಕಗಳಿಂದ ಸರ್ಕಾರದ ಸೌಲಭ್ಯಗಳಿಂದ ದೂರ ಉಳಿದಿದ್ದಾರೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ತಾಲೂಕಿನ ವಿವಿಧ ಗ್ರಾಮಗಳ 200ಕ್ಕೂ ಅಧಿಕ ರೈತರ ಜಮೀನಿನ ಉತಾರದ ಕಬ್ಜಾಂ ಕಾಲಂನಲ್ಲಿ ಸರ್ಕಾರ ಎಂದು ನಮೂದಾಗಿದ್ದು, ರೈತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದಕ್ಕಾಗಿ ಸಾಕಷ್ಟು ಬಾರಿ ಹೋರಾಟ ಮಾಡಿದರೂ ಸಮಸ್ಯೆ ಮಾತ್ರ ಇತ್ಯರ್ಥವಾಗುತ್ತಿಲ್ಲ.

1975ನೇ ಸಾಲಿನಲ್ಲಿ ಮಲಪ್ರಭಾ ಜಲಾಶಯ ನಿರ್ಮಾಣಕ್ಕಾಗಿ ಗದಗ, ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳ ಕೆಲವು ತಾಲೂಕಿಗಳ ರೈತರ ಜಮೀನುಗಳಿಗೆ ಕಾಲುವೆ ಮೂಲಕ ನೀರು ಹರಿಸಲು ಸರ್ಕಾರ ಮುಂದಾಯಿತು. ಸರ್ಕಾರ ಕಾಲುವೆ ಮೂಲಕ ಜಮೀನುಗಳಿಗೆ ನೀರು ಪೂರೈಕೆ ಮಾಡಿದ್ದಕ್ಕೆ ಸರ್ಕಾರ 1 ಎಕರೆಗೆ ಇಂತಿಷ್ಟು ಎಂದು ಪ್ರತಿವರ್ಷ ನೀರಿನ ಕರ ತುಂಬಬೇಕೆಂದು ತಿಳಿಸಿತು.

ವರ್ಷಪೂರ್ತಿ ಕಾಲುವೆಗಳಿಗೆ ನೀರು ಪೂರೈಕೆ ಮಾಡಿದರೆ ಮಾತ್ರ ಸರ್ಕಾರಕ್ಕೆ ನೀರಿನ ಕರ ಕಟ್ಟುತ್ತೇವೆಂದು ರೈತರು ಹೇಳಿದರು. ಸರ್ಕಾರ ಮತ್ತು ರೈತರ ಮಧ್ಯೆ ತಿಕ್ಕಾಟ ಶುರುವಾಯಿತು. ರೈತರು ನೀರಿನ ಕರ ಕಟ್ಟದ್ದಕ್ಕೆ ಸರ್ಕಾರ ರೈತನ ಜಮೀನಿನ ಉತಾರದ 9ನೇ ಕಬ್ಜಾ ಕಾಲಂನಲ್ಲಿ ಸರ್ಕಾರವೆಂದು ನಮೂದು ಮಾಡಿತು. ಅದರ ಪರಿಣಾಮ ಈ ಭಾಗದ ನೂರಾರು ರೈತರು ಸರ್ಕಾರ ಸೌಲಭ್ಯಗಳಿಂದ ಸಂಪೂರ್ಣ ವಂಚಿತರಾದರು.

ಹೋರಾಟಕ್ಕೆ ನಾಂದಿ: ಸರ್ಕಾರ ಈ ರೀತಿ ಕಬ್ಜಾ ಕಾಲಂನಲ್ಲಿ ಸರ್ಕಾರವೆಂದು ನಮೂದು ಮಾಡಿದ ನಂತರ ಈ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ನಾಲ್ಕು ಜಿಲ್ಲೆ 11 ತಾಲೂಕಿನ ರೈತರು ಸೇರಿಕೊಂಡು ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಮುಂದೆ ಸರ್ಕಾರ ನೀರಿನ ಕರ ಕಟ್ಟಿದ ರೈತರ ಮನೆಗಳನ್ನು ಜಪ್ತಿ ಮಾಡಲು ಪ್ರಾರಂಭಿಸಿತು.

ಇದರಿಂದ ರೊಚ್ಚಿಗೆದ್ದ ಸಾವಿರಾರು ರೈತರು 1980ರ ಜು. 21ರಂದು ಟ್ರ್ಯಾಕ್ಟರ್‌ಗಳ ಮೂಲಕ ನರಗುಂದಕ್ಕೆ ಆಗಮಿಸಿ ತಹಸೀಲ್ದಾರ್ ಕಾರ್ಯಾಲಯದ ಮುಂದೆ ಹೋರಾಟ ನಡೆಸಿದರು. ಆ ವೇಳೆ ತಹಸೀಲ್ದಾರರು ಕಚೇರಿಗೆ ಸೇವೆಗೆ ಹಾಜರಾಗಲು ಮುಂದಾದಾಗ ರೈತರು ಅಧಿಕಾರಿಗೆ ಹೋಗಲು ಅವಕಾಶ ನೀಡಲಿಲ್ಲ. ದಾರಿಯಲ್ಲಿ ಮಲಗಿದ್ದ ರೈತರ ಮೇಲೆ ಬೂಟಗಾಲಿನಲ್ಲಿ ಅಧಿಕಾರಿ ಹತ್ತಿ ಹೋಗಿದ್ದರಿಂದ ರೊಚ್ಚಿಗೆದ್ದ ಹೋರಾಟಗಾರರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಅಂದಿನ ತಹಸೀಲ್ದಾರ್ ಕಾರ್ಯಾಲಯಕ್ಕೆ ಬೆಂಕಿ ಹಚ್ಚಿದ್ದರಿಂದ ವಾತಾವರಣ ಉದ್ವಿಗ್ನಗೊಂಡಿತು. ರೈತರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ನಡೆಯಿತು. ಗೋಲಿಬಾರ್‌ನಲ್ಲಿ ತಾಲೂಕಿನ ಚಿಕ್ಕನರಗುಂದ ಗ್ರಾಮದ ರೈತ ಈರಪ್ಪ ಕಡ್ಲಕೊಪ್ಪ ಸಾವಿಗೀಡಾದರು. ಈ ಸುದ್ದಿ ಇಡೀ ರಾಜ್ಯದಲ್ಲಿ ಸಂಚಲನ ಉಂಟು ಮಾಡಿತು. ರೈತ ಸಂಘಟನೆಗಳ ಚಳವಳಿ ತಾಪಕ್ಕೆ ಅಂದಿನ ಸರ್ಕಾರ ಪತನವಾಯಿತು. ನರಗುಂದ ಬಂಡಾಯ ಎಂದು ಕರೆಸಿಕೊಂಡ ಈ ಹೋರಾಟಕ್ಕೆ ಮುಖ್ಯಮಂತ್ರಿ ಗುಂಡೂರಾವ್ ಹುದ್ದೆ ಬಿಡುವಂತಾಯಿತು.

ನೀರಿನ ಕರ ಬಗ್ಗೆ ಚರ್ಚೆ: 1980ರ ನಂತರ ನರಗುಂದ ಬಂಡಾಯದ ಚಳವಳಿ ರಾಜ್ಯ ಹಾಗೂ ದೇಶ ವ್ಯಾಪ್ತಿಯಲ್ಲಿ ಹಬ್ಬಿತು. ನಂತರ ಅಸ್ತಿತ್ವಕ್ಕೆ ಬಂದ ಸರ್ಕಾರ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಜಮೀನಿನ ಕಬ್ಜಾ ಕಾಲಂನಲ್ಲಿ ಸರ್ಕಾರ ಎಂಬ ಹೆಸರನ್ನು ಕಡಿಮೆ ಮಾಡಿತು. ಆದರೆ ಕೆಲವು ರೈತರ ಜಮೀನುಗಳಲ್ಲಿ ಕಾರಣಾಂತರದಿಂದ ಸರ್ಕಾರ ಎಂದು ಇಂದಿಗೂ ಇದ್ದಿದ್ದರಿಂದ ಈ ರೈತರು ಕಳೆದ ನಾಲ್ಕು ದಶಕಗಳಿಂದ ಸರ್ಕಾರದ ಸೌಲಭ್ಯಗಳಿಂದ ದೂರ ಉಳಿದಿದ್ದಾರೆ.

ತಾಲೂಕಿನ ಹದಲಿ, ಭೈರನಹಟ್ಟಿ, ಗಂಗಾಪುರ, ಖಾನಾಪುರ, ರಡ್ಡೇರ- ನಾಗನೂರ ಗ್ರಾಮಗಳ 200 ರೈತರ ಉತಾರದ ಕಬ್ಜಾಂ ಕಾಲಂನಲ್ಲಿ ಸರ್ಕಾರ ಎಂಬ ಹೆಸರಿದೆ.

ಪ್ರಯೋಜನವಾಗಿಲ್ಲ: ನಾವು ನೀರಿನ ಕರ ತುಂಬಿ ಸಂಬಂಧಪಟ್ಟ ಇಲಾಖೆಯ ಸಚಿವರಿಗೆ, ಅಧಿಕಾರಿಗಳಿಗೆ, ಸ್ಥಳೀಯ ಶಾಸಕರಿಗೆ ನಮ್ಮ ಉತಾರ ಕಬ್ಜಾ ಕಾಲಂನಲ್ಲಿ ಸರ್ಕಾರ ಎಂದು ನಮೂದಾಗಿರುವುದನ್ನು ತೆಗೆಯಬೇಕೆಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಮಗೂ ಹೋರಾಟ, ಅಲೆದಾಟ ಮಾಡಿ ಸಾಕಾಗಿದೆ. ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಹದಲಿ ಗ್ರಾಮದ ರೈತ ಕುಮಾರಸ್ವಾಮಿ ಹಿರೇಮಠ ತಿಳಿಸಿದರು.

ಮನವಿ ಪತ್ರ: ರೈತರ ಉತಾರದಲ್ಲಿನ ಕಬ್ಜಾ ಕಾಲಂನಲ್ಲಿ ಸರ್ಕಾರ ಎನ್ನುವುದನ್ನು ಕಡಿಮೆ ಮಾಡಬೇಕೆಂದು ಮನವಿ ಪತ್ರವನ್ನು ಸರ್ಕಾರಕ್ಕೆ ರವಾನಿಸಿದ್ದೇವೆ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತ ಬಂಡಾಯಕ್ಕೀಗ 46 ವರ್ಷ!
ಪಾಲಕರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸಲಿ: ಶ್ರೀಕೃಷ್ಣ ಹೆಗಡೆ