ಕನ್ನಡಪ್ರಭ ವಾರ್ತೆ ಮೈಸೂರು
ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳ ಎದುರೇ ವಾಹನ ತಪಾಸಣೆ ಮಾಡುವುದು ಒಳಿತು ಎಂದು ವಕೀಲ ಪಿ.ಜೆ. ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.ನಗರದ ಸಂಚಾರ ಪೋಲೀಸರು ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ರಾಜ್ಯ ಹೆದ್ದಾರಿ ಹಾಗೂ ಮುಖ್ಯ ರಸ್ತೆಗಳಲ್ಲಿ ಕುಡಿದು ವಾಹನ ಚಾಲನೆ ಮಾಡುವ ವಾಹನಗಳ ತಪಾಸಣೆ ಕೈ ಬಿಡಬೇಕು ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕಾಗಿ ನಗರದ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಅವರು ಮನವಿ ಮಾಡಿದ್ದಾರೆ.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರ ಮನವಿ ಗಮನಾರ್ಹವಾದುದು.ಮೈಸೂರಿನಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕಾರ್ಯಾಚರಣೆ ನಡೆಸುವ ಪೊಲೀಸರು ಪ್ರತಿನಿತ್ಯ ಹಲವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ.
ಪೊಲೀಸರು ಒಬ್ಬ ಕುಡುಕನನ್ನು ಪತ್ತೆ ಮಾಡುವುದಕ್ಕಾಗಿ ಹತ್ತು ವಾಹನಗಳ ಚಾಲಕರನ್ನು ತಪಾಸಣೆ ಮಾಡಬೇಕಾಗುತ್ತದೆ. ಹೀಗಾಗಿ ಆ ಒಂಭತ್ತು ಮಂದಿಗೆ ಮುಜುಗರ ಉಂಟಾಗುತ್ತದೆ. ಇದನ್ನು ತಪ್ಪಿಸಲು ಒಂದು ಉಪಾಯ ಇದೆ! ಪೊಲೀಸರು ದೂರದಲ್ಲೆಲ್ಲೋ ನಿಂತು, ನಗರದ ಮಧ್ಯೆ ಅಥವಾ ವರ್ತುಲ ರಸ್ತೆಯಲ್ಲಿ ನಿಂತು ತಪಾಸಣೆ ಮಾಡಿ ಕುಡುಕರನ್ನು ಬೇಟೆಯಾಡುವ ಬದಲಾಗಿ ನಗರ ಹಾಗೂ ವರ್ತುಲ ರಸ್ತೆಗಳಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಗಳ ಎದುರೇ ಟೆಂಟ್ ಹಾಕಿಕೊಂಡು ಕಾರ್ಯಾಚರಣೆ ನಡೆಸಿದರೆ ಕುಡುಕ ಚಾಲಕರನ್ನು ಸುಲಭವಾಗಿ ಹಿಡಿಯಬಹುದು.ಇದರಿಂದ ಕುಡುಕರು ರಸ್ತೆಗಿಳಿದು ಅನಾಹುತ, ಅಫಘಾತ ಮಾಡುವುದನ್ನೂ ತಪ್ಪಿಸಬಹುದು. ಅದಕ್ಕಿಂತಲೂ ದೊಡ್ಡ ಉಪಾಯವೆಂದರೆ ಬಾರ್ಅಂಡ್ರೆಸ್ಟೋರೆಂಟ್ಎದುರು ನೋ ಪಾರ್ಕಿಂಗ್ ಫಲಕ ಅಳವಡಿಸುವುದು. ಅಲ್ಲಿ ವಾಹನ ನಿಲುಗಡೆಗೆ ಅವಕಾಶ ಇಲ್ಲದಿದ್ದರೆ ಕುಡುಕರು ಕುಡಿದು ವಾಹನ ಚಲಾಯಿಸುವ ಅಗತ್ಯವೇ ಉಂಟಾಗದು ಎಂದು ಅವರು ತಿಳಿಸಿದ್ದಾರೆ.