ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಸರ್ಕಾರ ರಾಗಿ ಮತ್ತು ಭತ್ತ ಸೇರಿದಂತೆ ಇತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ ಸರ್ಕಾರವೇ ರೈತರಿಂದ ನೇರವಾಗಿ ಖರೀದಿ ಮಾಡುತ್ತಿದ್ದು, ಎಲ್ಲ ರೈತ ಬಾಂಧವರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿ 2024-25ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಭತ್ತ ಮತ್ತು ರಾಗಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಲಿಗ್ರಾಮ, ಚುಂಚನಕಟ್ಟೆ ಮತ್ತು ಕೆ.ಆರ್. ನಗರದಲ್ಲಿ ಖರೀದಿ ಕೇಂದ್ರ ತೆರೆಯಲಾಗಿದ್ದು, ರೈತರು ನೇರವಾಗಿ ಖರೀದಿ ಕೇಂದ್ರಕ್ಕೆ ಭತ್ತ ಮತ್ತು ರಾಗಿ ಸರಬರಾಜು ಮಾಡಬೇಕು ಎಂದರು.ಪ್ರತಿ ಕ್ವಿಂಟಲ್ ಭತ್ತಕ್ಕೆ 2,300, ಗ್ರೇಡ್-ಎ 2,320 ರು. ಗಳನ್ನು ನಿಗದಿ ಮಾಡಲಾಗಿದ್ದು, ಪ್ರತಿ ಎಕರೆಗೆ ಕನಿಷ್ಠ 25 ರಿಂದ 50 ಕ್ವಿಂಟಲ್ ವರೆಗೆ ಖರೀದಿ ಮಾಡಲಾಗುತ್ತಿದ್ದು, ಕ್ವಿಂಟಲ್ ರಾಗಿಗೆ 4,290 ನಂತೆ 10 ಕ್ವಿಂಟಲ್ನಿಂದ 20ರವರೆಗೆ ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಮಾಹಿತಿ ನೀಡಿದರು.
ಖರೀದಿ ಕೇಂದ್ರದಲ್ಲಿ ಪಡೆದ ರಾಗಿಯನ್ನು ನೇರವಾಗಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರದಾರರಿಗೆ ವಿತರಿಸುವುದರಿಂದ ಗುಣಮಟ್ಟದ ರಾಗಿಯನ್ನು ಖರೀದಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಅವರು, ಈ ಬಾರಿ ಬೆಳೆದಂತಹ ರಾಗಿಯನ್ನು ಮಾತ್ರ ಪಡೆಯಬೇಕು ಹಣದ ಆಸೆಗಾಗಿ ಮಧ್ಯವರ್ತಿಗಳಿಗೆ ಆದ್ಯತೆ ನೀಡಿದ್ದು ಮತ್ತು ಹಳೆ ರಾಗಿ ಖರೀದಿ ಮಾಡಿರುವುದು ಕಂಡು ಬಂದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ತಲೆದಂಡವಾಗಲಿದೆ ಎಂದು ಎಚ್ಚರಿಕೆ ನೀಡಿದರು.ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹೇಶ್, ಪುರಸಭೆ ಅಧ್ಯಕ್ಷ ಶಿವುನಾಯಕ್, ಸದಸ್ಯ ಪ್ರಕಾಶ್, ಸೈಯದ್ ಸಿದ್ದಿಕ್, ಮಾಜಿ ಸದಸ್ಯ ಕೆ. ವಿನಯ್, ಎಪಿಎಂಸಿ ಮಾಜಿ ನಿರ್ದೇಶಕರಾದ ಎಚ್.ಪಿ. ಪ್ರಶಾಂತ್, ಎಚ್.ಎಚ್. ನಾಗೇಂದ್ರ ಇದ್ದರು.