ಕನ್ನಡಪ್ರಭ ವಾರ್ತೆ ಕಾಪು
ಕಟೀಲು ಮೇಳದ ಭಾಗವತ ಅಂಡಾಲ ದೇವಿ ಪ್ರಸಾದ ಆಳ್ವ ಹಾಗೂ ಬಣ್ಣದ ವೇಷಧಾರಿ ಸುರೇಶ ಕುಪ್ಪೆಪದವು ಅವರಿಗೆ ಈ ವರ್ಷದ ‘ಪೂಲ ವಿಠಲ ಶೆಟ್ಟಿ ಪ್ರಶಸ್ತಿ’ಯನ್ನು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ನಡೆದ ಪಡುಬಿದ್ರಿ ಕಲ್ಲಟೆ ಗುತ್ತು ಮೂಲ ಕುಟುಂಬಸ್ಥರಾದ ರಾಧಾ ವಿಠಲ ಶೆಟ್ಟಿ ಮತ್ತು ಮಕ್ಕಳ ಶ್ರೀ ಕಟೀಲು ಮೇಳದ 28ನೇ ವರ್ಷದ ಸೇವೆ ಬಯಲಾಟದ ವೇದಿಕೆಯಲ್ಲಿ ವಿತರಿಸಲಾಯಿತು.ಕಟೀಲು ಲಕ್ಷ್ಮೀ ನಾರಾಯಣ ಆಸ್ರಣ್ಣ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪರಾಧೀನವಾಗಿದ್ದ ಕಟೀಲು ಮೂಲ ಕುದುರೆಯನ್ನು ಶ್ರೀ ಕ್ಷೇತ್ರಕ್ಕೆ ಮರಳಿಸಿದ ದಾನಿಗಳಾದ ಪೂಲ ವಿಠಲ ಶೆಟ್ಟಿ ಪರಿವಾರದ ಸೇವೆಯನ್ನು ಸ್ಮರಿಸಿದರು.ಕದ್ರಿ ನವನೀತ ಶೆಟ್ಟಿ ಮಾತನಾಡಿ, ಅಂಡಾಲ ದೇವಿಪ್ರಸಾದ ಅವರು ಕಳೆದ ಮೂರುವರೆ ದಶಕಗಳಿಂದ ಯಕ್ಷಗಾನ ರಂಗದಲ್ಲಿ ಪ್ರಸಂಗ ರಚನೆ ಹಾಗೂ ಭಾಗವತಿಕೆಯಲ್ಲಿ ಪ್ರಬುದ್ಧತೆ ಮೆರೆದವರು. ತೆಂಕು ಹಾಗೂ ಬಡಗು ತಿಟ್ಟಿನ ಟೆಂಟ್ ಮೇಳಗಳಲ್ಲೂ ಅವರ ಪ್ರಸಂಗಗಳು ಯಶಸ್ವಿ ಪ್ರದರ್ಶನ ಕಂಡಿವೆ. ಕಟೀಲು ಮೇಳದಲ್ಲೇ ಬಣ್ಣದ ವೇಷಧಾರಿಯಾಗಿ ರೂಪುಗೊಂಡು ಕಳೆದ 35 ವರ್ಷಗಳಿಂದ ಕಲಾ ಸೇವೆಗೈಯ್ಯುತ್ತಿರುವ ಸುರೇಶ ಕುಪ್ಪೆಪದವು ಅವರು ಮಹಿಷಾಸುರ ಪಾತ್ರ ನಿರ್ವಹಣೆಯಲ್ಲಿ ಸಿದ್ದಿ ಪ್ರಸಿದ್ದಿ ಪಡೆದಿದ್ದಾರೆ ಎಂದು ಅಭಿನಂದಿಸಿದರು.ಕಂಬಳ ಕೋಣಗಳ ಮಾಲಕರಾಗಿ ಖ್ಯಾತಿ ಪಡೆದಿದ್ದ ಮುಂಬೈ ಘಾಟ್ ಕೋಪರ್ನ ಭಾರತ್ ಕೆಫೆ ಸಂಸ್ಥಾಪಕ ಪೂಲ ವಿಠಲ ಶೆಟ್ಟಿ ಅವರ ಸ್ಮರಣಾರ್ಥ ಪ್ರತೀವರ್ಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.ಸೇವಾಕರ್ತ ಸತೀಶ್ ವಿಠಲ ಶೆಟ್ಟಿ ಸ್ವಾಗತಿಸಿದರು. ಉದಯ ಶೆಟ್ಟಿ ಎರ್ಮಾಳು, ಐಕಳ ವಿಶ್ವನಾಥ ಶೆಟ್ಟಿ ಮತ್ತು ವಿಶುಕುಮಾರ್ ಬ್ರಹ್ಮಾವರ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಕಟೀಲು ಮೇಳದವರಿಂದ ರಾಮ - ಕೃಷ್ಣ - ಗೋವಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.