ಚಿತ್ರಕಲೆ ಸ್ಪರ್ಧೆ ಅರ್ಥಪೂರ್ಣ: ಕೆಎಸ್‌ಈ

KannadaprabhaNewsNetwork |  
Published : Jan 13, 2026, 02:00 AM IST
ಪೋಟೋ: 12ಎಸ್‌ಎಂಜಿಕೆಪಿ10ಶಿವಮೊಗ್ಗ ನಗರದ ಸರ್ಕಾರಿ ನೌಕರರ ಭವನದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಕನ್ನಡ ಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ 'ಕರ್ನಾಟಕ ಅರಣ್ಯ - ಕರ್ನಾಟಕ ವನ್ಯಜೀವಿ' ಎಂಬ ವಿಷಯದ ಮೇಲೆ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯ. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಕೈಯಲ್ಲಿ ಕುಂಚ ಹಿಡಿದು ತಮ್ಮ ಕಲ್ಪನೆಗಳಿಗೆ ಬಣ್ಣಗಳ ಮೂಲಕ ಜೀವಕಳೆ ತುಂಬುತ್ತಿದ್ದರು. ಕನ್ನಡ ನಾಡಿನ ಕಾಂತಾರದೊಳಗಿನ ವನಸಿರಿ, ಜರಿ, ಪ್ರಪಾತ, ಮರ ಗಿಡ, ವಿವಿಧ ಪ್ರಾಣಿಗಳು ಹೀಗೆ ವಿವಿಧ ರೂಪದಲ್ಲಿ ಅವರ ಚಿತ್ತಪಟದಿಂದ ಚಿತ್ರಪಟದಲ್ಲಿ ಮನೋಹರವಾಗಿ ಮೂಡುತ್ತಿದ್ದವು. ಒಬ್ಬೊಬ್ಬರು ಒಂದೊಂದು ಅಂಶದ ಕುರಿತು ತಮ್ಮ ಪ್ರತಿಭೆಗೆ ಅನುಗುಣವಾಗಿ ಚಿತ್ರ ಬರೆಯುತ್ತಿದ್ದರು.

ಶಿವಮೊಗ್ಗ: ವಿದ್ಯಾರ್ಥಿಗಳು ಕೈಯಲ್ಲಿ ಕುಂಚ ಹಿಡಿದು ತಮ್ಮ ಕಲ್ಪನೆಗಳಿಗೆ ಬಣ್ಣಗಳ ಮೂಲಕ ಜೀವಕಳೆ ತುಂಬುತ್ತಿದ್ದರು. ಕನ್ನಡ ನಾಡಿನ ಕಾಂತಾರದೊಳಗಿನ ವನಸಿರಿ, ಜರಿ, ಪ್ರಪಾತ, ಮರ ಗಿಡ, ವಿವಿಧ ಪ್ರಾಣಿಗಳು ಹೀಗೆ ವಿವಿಧ ರೂಪದಲ್ಲಿ ಅವರ ಚಿತ್ತಪಟದಿಂದ ಚಿತ್ರಪಟದಲ್ಲಿ ಮನೋಹರವಾಗಿ ಮೂಡುತ್ತಿದ್ದವು. ಒಬ್ಬೊಬ್ಬರು ಒಂದೊಂದು ಅಂಶದ ಕುರಿತು ತಮ್ಮ ಪ್ರತಿಭೆಗೆ ಅನುಗುಣವಾಗಿ ಚಿತ್ರ ಬರೆಯುತ್ತಿದ್ದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ''''''''ಕರ್ನಾಟಕ ಅರಣ್ಯ - ಕರ್ನಾಟಕ ವನ್ಯಜೀವಿ'''''''' ಎಂಬ ವಿಷಯದ ಮೇಲೆ ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ಚಿತ್ರಕಲಾ ಸ್ವರ್ಧೆಯ ಭಾಗವಾಗಿ ಸೋಮವಾರ ನಡೆದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯಗಳಿವು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ, ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಕೇವಲ ಮಾಧ್ಯಮಗಳಾಗಿ ಉಳಿದುಕೊಳ್ಳದೆ ಅರಣ್ಯ ಮತ್ತು ವನ್ಯಜೀವ ಸಂರಕ್ಷಣೆಯ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಚಿತ್ರಕಲೆ ಸ್ಪರ್ಧೆ ಅರ್ಥಪೂರ್ಣವಾಗಿದ್ದು, ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಮಾಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಎಂದು ಶ್ಲಾಘಿಸಿದರು.

ಪರಿಸರ ವಿನಾಶದತ್ತ ಸರಿಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪೋಟೋಕ್ಕಾಗಿ ಗಿಡ ನೆಡುವ ಕಾರ್ಯಕ್ರಮಗಳು ಪ್ರತಿ ವರ್ಷವೂ ನಡೆಯುತ್ತಿದೆ. ಆದರೆ, ಮರಗಳ ಸಂಖ್ಯೆ ಮಾತ್ರ ಹೆಚ್ಚಿಲ್ಲ. ಕಾರಣ ಗಿಡನೆಟ್ಟು ಫೋಟೋ ತೆಗೆಸಿಕೊಳ್ಳುವವರು ಅದರ ನಿರ್ವಹಣೆ ಮರೆತಿದ್ದಾರೆ. ಹೀಗಾಗಿ ಪ್ರತಿ ವರ್ಷವೂ ಅದೇ ಜಾಗದಲ್ಲಿ ಕೇವಲ ಗಿಡ ನೆಡಲಾಗುತ್ತಿದೆ, ಹೊರತು ಗಿಡಗಳು ಮರಗಳನ್ನಾಗಿಸುವ ನಿಟ್ಟಿಯಲ್ಲಿ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಯೊಂದು ಮಗುವು ಒಬ್ಬ ಶ್ರೇಷ್ಠ ಕಲಾವಿದ. ಮಕ್ಕಳ ಮೊದಲ ಭಾಷೆ ಚಿತ್ರಕಲೆ. ಅವರಿಗೆ ಮೊದಲು ಬರುವುದೇ ಚಿತ್ರಕಲೆ. ಆನಂತರ ಬರಹ-ಓದು. ಸಿಕ್ಕ ಸಿಕ್ಕಲ್ಲಿ ಚಿತ್ರ ಗೀಚುವುದೇ ಅವರಿಗೆ ಆನಂದ. ನಮ್ಮ ಸಮಾಜದ ಎಲ್ಲ ವರ್ಗಗಳ ಮಕ್ಕಳು ತಾವು ಆಟವಾಡುವುದಕಿಂತ ಹೆಚ್ಚು ಸಮಯವನ್ನು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವುದನ್ನು ಕಾಣಬಹುದು. ಇಂತಹ ಪ್ರತಿಭಾವಂತ ಕಲಾವಿದರನ್ನು ಹೆಚ್ಚಿನ ಪ್ರಯತ್ನಗಳು ನಿರಂತವಾಗಿ ನಡೆಯಲಿದೆ ಎಂದು ಆಶಿಸಿದರು.

ಶಿವಮೊಗ್ಗ ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕೃಷ್ಣ ಪಟಗಾರ್‌ ಮಾತನಾಡಿ, ಮಕ್ಕಳಲ್ಲಿ ಚಿತ್ರಕಲೆ ಮೂಲಕ ಅರಣ್ಯ ಸಂರಕ್ಷಣೆಯಲ್ಲಿ ವನ್ಯಜೀವಿಗಳ ಪಾತ್ರ ಏನೂ? ಎಂಬ ಅರಿವಿನ ಕಿಚ್ಚನ್ನು ಹಚ್ಚಿರುವ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಅವರ ಕಾರ್ಯ ಶ್ಲಾಘನೀಯ. ಹುಲಿಯ ಸಂಖ್ಯೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದರೆ, ಆನೆಗಳ ಸಂಖ್ಯೆಯಲ್ಲಿ ಮೊದಲನೇ ಸ್ಥಾನದಲ್ಲಿದ್ದೇವೆ. ಪ್ರಪಂಚದಲ್ಲಿರುವ ಶೇ.70 ರಷ್ಟು ಹುಲಿಗಳು ನಮ್ಮ ಭಾರತದಲ್ಲಿವೆ. ದೇಶದ ವನ್ಯ ಸಂಪತ್ತು ಉತ್ತಮವಾಗಿದೆ. ಆದರೆ, ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಭಾರತದಲ್ಲಿ ಶೇ.33ರಷ್ಟು ಅರಣ್ಯ ಇರಬೇಕಿತ್ತು. ನಮ್ಮಲ್ಲಿ ಇರುವುದು ಕೇವಲ ಶೇ. 21ರಷ್ಟು ಮಾತ್ರ. ಈ ಪ್ರಮಾಣವನ್ನು ಹೆಚ್ಚಿಸಬೇಕಾದರೆ ಅರಣ್ಯ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ ಎಂದರು.

ಇಂದು ಅರಣ್ಯ ನಾಶದಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆ ಕೆಲಸವಲ್ಲ. ಪ್ರತಿಯೊಬ್ಬರ ಸಹಕಾರದಿಂದ ಪರಿಸರ ಉಳಿವು ಸಾಧ್ಯವಾಗಿದೆ. ಜನರು ಇನ್ನಾದರೂ ಎಚ್ಚೆತ್ತುಕೊಂಡು ಅರಣ್ಯ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಲೇಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಚಿತ್ರಕಲಾ ಸ್ಪರ್ಧೆಯಲ್ಲಿ ಕರ್ನಾಟಕದ ಅರಣ್ಯ ಅಥವಾ ಕರ್ನಾಟಕ ವನ್ಯಜೀವಿಗಳು ಎಂಬ ವಿಷಯವನ್ನು ಆಯೋಜಿಸಿರುವುದು ಅತ್ಯಂತ ಸಮಂಜಸ. ಮಕ್ಕಳು ಹಾಗೂ ಯುವ ಜನರು ಅರಣ್ಯ ಸಂರಕ್ಷಣೆಯ ಮಹತ್ವ ಅರಿತರೆ, ಪರಿಣಾಮಕಾರಿಯಾಗಿ ಪರಸರ ಸಂರಕ್ಷಿಸಬಹುದು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶಿವಮೊಗ್ಗದ ಮಲ್ಲಿಗೆ ಇಡ್ಲಿ ಹೌಸ್‌ ಮಾಲೀಕರಾದ ಸುಧಾಕರ್‌ ಶೆಟ್ಟಿ, ಕನ್ನಡಪ್ರಭ ವಿಶೇಷ ವರದಿಗಾರ ಗೋಪಾಲ್‌ ಎಸ್‌.ಯಡಗೆರೆ, ಜಾಹಿರಾತು ವಿಭಾಗದ ಹಿರಿಯ ವ್ಯವಸ್ಥಾಪಕ ಸಿ.ಕಾರ್ತಿಕ್‌, ಪ್ರಸರಣ ವಿಭಾದ ವ್ಯವಸ್ಥಾಪಕ ಎಸ್‌.ಕೆ.ಸಂಚಿತ್‌ ಇದ್ದರು. ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಶಿವಮೊಗ್ಗ ನಗರದ ರವಿವರ್ಮ ಚಿತ್ರಕಲಾ ಶಾಲೆಯ ಶ್ರೀಧರ್‌ ಕಂಬಾರ್‌ ಹಾಗೂ ಹರೀಶ್‌ ಭಾಗವಹಿಸಿದ್ದರು.

ಪರಿಸರ ನಾಶ ತಡೆಯಲು ಕಠಿಣ

ಕಾನೂನು ಜಾರಿಯಾಗಲಿ

ಮಕ್ಕಳಲ್ಲಿ ಕಾಡು, ಅರಣ್ಯ, ವನ್ಯಜೀವದ ಬಗ್ಗೆ ಜ್ಞಾಪಿಸುವಂತ ಕೆಲಸ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಅವರಿಂದ ಆಗಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಈ.ಕಾಂತೇಶ್‌ ಹೇಳಿದರು.

ಇಂದಿನ ಸರ್ಕಾರಗಳೂ ಕೂಡ ಹುಲಿಗಳಿಗೆ ವಿಷವಿಟ್ಟರೂ, ಆನೆಗಳ ದಂತ ಕಳವಾಗುತ್ತಿದ್ದರೂ ನಾವು ಸರ್ಕಾರ ಯಾವುದೇ ಕ್ರಮ ವಹಿಸದೇ ಇರುವುದು ಕಾಡಿನ ನಾಶಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗುತ್ತದೆ. ಇದಕ್ಕೆ ಸರ್ಕಾರಗಳು ಅವಕಾಶ ನೀಡಿದೇ ಪರಿಸರ ನಾಶವನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನುಗಳು ಜಾರಿಗೆ ಬರಬೇಕು ಎಂದರು.

ಬಾಕ್ಸ್‌-2

ಕೆ.ಎಸ್.ಚೇತನ್ ಪ್ರಥಮ

ನಗರದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಮಕ್ಕಳು ಭಾಗವಹಿಸಿದ್ದರು. ಈ ಪೈಕಿ ಹೊಸನಗರದ ಕೆ.ಎಸ್.ಚೇತನ್ ಪ್ರಥಮ ಸ್ಥಾನಗಳಿಸಿದರೆ, ಸಾಗರದ ಅಖಿಲೇಶ್‌ ದ್ವಿತೀಯ ಸ್ಥಾನ ಗಳಿಸಿದರು. ಭದ್ರಾವತಿಯ ಉಲ್ಲಾಸ್‌ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ