ಉಡುಪಿ: ಓದುವ ಹವ್ಯಾಸದಿಂದ ಮಾನಸಿಕ ಒತ್ತಡ ಕಡಿಮೆ ಮಾಡಲು ಸಾಧ್ಯವಿದೆ ಎಂದು ಕ್ರೈಸ್ತ ಧರ್ಮಗುರು ಹೆನ್ರಿ ಆಳ್ವಾ ಅಭಿಪ್ರಾಯಪಟ್ಟರು. ಶನಿವಾರ ಪರಿಚಯ ರಂಗೋತ್ಸವ 2026 ರ ಅಂಗವಾಗಿ ಪಾಂಬೂರಿನಲ್ಲಿ ಬರಹಗಾರ ಡಾ. ಎವ್ಜಿನ್ ಡಿಸೋಜಾ ಅವರ ಕೊಂಕಣಿ ಕಾದಂಬರಿ ಚಂದ್ರಾ ವೊಯ್ಲೆಂ ಮೋಡ್ ಬಿಡುಗಡೆಗೊಳಿಸಿ ಮಾತನಾಡಿದರು. ಕಾದಂಬರಿಗಳಂತಹ ಪುಸ್ತಕಗಳು ಮನಸ್ಸಿನ ಒತ್ತಡ ನಿವಾರಣೆಗ ಸಹಕಾರಿಯಾಗಿದ್ದು ಇತ್ತೀಚೆಗೆ ಮೊಬೈಲ್ ಸಂಸ್ಕೃತಿ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಕಡಿಮೆ ಮಾಡುತ್ತಿದೆ. ಒದುವ ಮೂಲಕ ಪ್ರತಿಯೊಬ್ಬರೂ ಕೊಂಕಣಿ ಸಾಹಿತ್ಯ ಮತ್ತು ಕಲೆಗೆ ಬೆಂಬಲ ನೀಡಬೇಕಾಗಿದೆ ಎಂದರು. ಕಾದಂಬರಿಗೆ ಮುನ್ನುಡಿ ಬರೆದ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ ಮಾತನಾಡಿ, ಕೃತಿಯ ಮುಖ್ಯ ಪಾತ್ರಗಳು, ಅವುಗಳ ಪರಸ್ಪರ ಸಂಬಂಧಗಳು ಹಾಗೂ ದ್ವಿತೀಯ ವಿಶ್ವಯುದ್ಧದ ಪರಿಣಾಮಗಳ ಕುರಿತು ಒಳನೋಟ ನೀಡಿದರು. ಕಾದಂಬರಿಯಲ್ಲಿ ಸಾಮಾಜಿಕ-ಧಾರ್ಮಿಕ ವಿಷಯಗಳನ್ನು ಚಾತುರ್ಯದಿಂದ ನಿರ್ವಹಿಸಿದ ಡಾ. ಎವ್ಜಿನ್ ಡಿ’ಸೂಜ ಅವರ ಪ್ರಯತ್ನವನ್ನು ಶ್ಲಾಘಿಸಿದರು. ಕೊಂಕಣಿ ಕಾದಂಬರಿ ಚಂದ್ರಾ ವೊಯ್ಲೆಂ ಮೋಡ್ ಬರಹಗಾರ ಡಾ.ಎವ್ಜಿನ್ ಡಿಸೋಜಾ ಅವರನ್ನು ಈ ವೇಳೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪರಿಚಯ ಪಾಂಬೂರು ವ್ಯವಸ್ಥಾಪಕ ಟ್ರಸ್ಟಿ ಹಾಗೂ ಗೌರವಾಧ್ಯಕ್ಷರಾದ ಡಾ. ವಿನ್ಸೆಂಟ್ ಆಳ್ವಾ, ಅಧ್ಯಕ್ಷ ಅನಿಲ್ ಡೆಸಾ ಹಾಗೂ ಇತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಪರಿಚಯ ರಂಗೋತ್ಸವ 2026 ಸಮಾರೋಪ ನಾಟಕ ಆಲ್ವಿನ್ ಸೆರಾವೊ ರಚನೆಯ ಚಿರಿ ತೀಸ್ ನಾಣ್ಯಾಚಿ ಪ್ರದರ್ಶನಗೊಂಡಿತು. ಐವನ್ ಪೀಟರ್ ವಂದಿಸಿದರು. ಪ್ರಿಯಾಂಕಾ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು.