ಕೊಪ್ಪಳ:
ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್ಸಿಬಿ ಕಪ್ ಗೆಲ್ಲಬೇಕು ಎಂದು ಆಶೀರ್ವಾದ ಮಾಡುವಂತೆ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿಗೆ ಸೋಮವಾರ ಭಕ್ತರು ಪಂಚಾಮೃತ ಅಭಿಷೇಕ ಮಾಡಿಸಿ, ವಿಶೇಷತೆ ಮೆರೆದಿದ್ದಾರೆ.ಈ ಸಲ ಕಪ್ ನಮ್ಮದೇ ಎನ್ನುವ ಹೆಸರಿನಲ್ಲಿ ರಶೀದಿ ತೆಗೆದುಕೊಂಡಿರುವ ಮೂವರು ಯುವಕರು ಹುಲಿಗೆಮ್ಮನ ಸನ್ನಿಧಿಗೆ ತೆರಳಿ, ಪಂಚಾಮೃತ ಅಭಿಷೇಕ ಮಾಡಿಸಿದ್ದಾಗಿ ಹುಲಿಗೆಮ್ಮನ ದೇವಸ್ಥಾನದ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಹುಲಿಗೆಮ್ಮಾ ದೇವಿಯಲ್ಲಿ ಆರ್ಸಿಬಿ ಫೈನಲ್ ಪಂದ್ಯದಲ್ಲಿ ಗೆಲ್ಲಬೇಕು ಎನ್ನುವ ಕ್ರಿಕೆಟ್ ಪ್ರೇಮಿಗಳ ಈ ವಿಶೇಷತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೃಹತ್ ಪರದೆ ಮೇಲೆ ಐಪಿಎಲ್ ಫೈನಲ್ ಪ್ರಸಾರಐಪಿಎಲ್ ಫೈನಲ್ ವೀಕ್ಷಣೆಗೆ ನಗರದ ತಾಲೂಕು ಕ್ರೀಡಾಂಗಣದಲ್ಲ ಬೃಹತ್ ಪರದೆಯ ವ್ಯವಸ್ಥೆ ಮಾಡಲಾಗಿದ್ದು, ಜೂ. 3ರಂದು ಸಂಜೆ. 7.30ಕ್ಕೆ ಕ್ರಿಕೆಟ್ ಪ್ರಸಾರ ಮಾಡಲಾಗುತ್ತದೆ. ೨೦೧೬ರ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ತಲುಪಿದ್ದು, ಈ ಪಂದ್ಯವನ್ನು ಸಾರ್ವಜನಿಕವಾಗಿ ವೀಕ್ಷಣೆ ಮಾಡಲು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ದೊಡ್ಡ ಪರದೆಯ ವ್ಯವಸ್ಥೆ ಮಾಡಿದ್ದು ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಕುರಿತು ಜಿಲ್ಲಾ ಅಥ್ಲೆಟಿಕ್ಸ್ ಅಸೋಷಿಯಶನ್ ಪ್ರಕಟಣೆ ನೀಡಿದ್ದು ಈ ಬಾರಿ ಆರ್ಸಿಬಿ ತಂಡ ಗೆದ್ದೆ ಗೆಲ್ಲುತ್ತದೆ. ಅಂಥ ಸಂಭ್ರಮದ ಕ್ಷಣವನ್ನು ಎಲ್ಲರೂ ಒಟ್ಟಿಗೆ ಸೇರಿಯೇ ಸಂಭ್ರಮಿಸೋಣ ಎಂದು ಮನವಿ ಮಾಡಿದೆ.ಐಪಿಎಲ್ ಫೈನಲ್ ಪಂದ್ಯಾವಳಿ ನೋಡಲು ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ದೊಡ್ಡಪರದೆಯ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಭಾಗವಹಿಸಿ, ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಲಿ ಎನ್ನುವುದು ನಮ್ಮ ಕಳಕಳಿ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.