ಕನ್ನಡಪ್ರಭ ವಾರ್ತೆ ಪಾಂಡವಪುರ
ರೆಡ್ಕ್ರಾಸ್ ಘಟಕವು ಐಕ್ಯೂಎಸಿ, ಐಐಸಿ, ಜೀವಧಾರೆ ಟ್ರಸ್ಟ್ ಹಾಗೂ ಜಿಲ್ಲಾ ರಕ್ತನಿಧಿ ಕೇಂದ್ರ ಮಿಮ್ಸ್ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರಕ್ಕೆ ಹಿರಿಯ ವಕೀಲ ಎಸ್.ಎಸ್.ವೈದ್ಯನಾಥನ್ ಶ್ರೀಮತಿ ಅಂಕಮ್ಮ ಮತ್ತು ಶ್ರೀಸಣ್ಣತಮ್ಮೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸಮಾಜದಲ್ಲಿ ರಕ್ತದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಸ್ವಯಂ ಪ್ರೇರಿತರಾಗಿ ವಿದ್ಯಾರ್ಥಿಗಳು ರಕ್ತದಾನ ಮಾಡಬೇಕಿದೆ. ಯುವ ಶಿಕ್ಷಿತರು ರಕ್ತದಾನವನ್ನು ಮಾಡುವ ಮೂಲಕ ಅದರ ಬಗ್ಗೆ ಹಿರಿಯರಲ್ಲಿ ಅದರಲ್ಲೂ ಗ್ರಾಮೀಣ ಭಾಗದ ಜನರ ಪಾಲಿಗೆ ಪ್ರೇರಣಾದಾಯಕರಾಗಬೇಕಿದೆ ಎಂದರು.ಸಂಸ್ಥೆಗಳ ಆಡಳಿತಾಧಿಕಾರಿ ನಿವೇದಿತಾ ನಾಗೇಶ್ ಮಾತನಾಡಿ, ‘ಅಪರ್ಣೆ’ ಹೆಸರಿನಡಿ ಸಂಸ್ಥೆ ಕೃಪಾಪೋಷಕರಾದ ಶ್ರೀಮತಿ ಅಂಕಮ್ಮ ಹಾಗೂ ಶ್ರೀಸಣ್ಣತಮ್ಮೇಗೌಡರ ಸ್ಮರಣಾರ್ಥ ಶಿಬಿರ ನಡೆಸುತ್ತಿದೆ ಎಂದು ಹೇಳಿ ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಹಣ್ಣುಹಂಪಲು ವಿತರಿಸಿದರು.
ಕಾಲೇಜು ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಮಾತನಾಡಿ, ಒಂದು ಯೂನಿಟ್ ರಕ್ತ ಮೂರು ಜೀವಗಳನ್ನು ಉಳಿಸುವ ಕೆಲಸ ಮಾಡುತ್ತದೆ. ನಾವು ನೀಡುವ ರಕ್ತ ನಮಗೇ ಅರಿವಿಲ್ಲದ ಇನ್ನಾವುದೋ ವ್ಯಕ್ತಿಯ ಜೀವ ಉಳಿಸುತ್ತದೆ ಎಂದರೆ ಅಂತಹ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ನಮ್ಮನ್ನು ತೊಡಗಿಸಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳೊಣ ಎಂದು ಕರೆ ನೀಡಿದರು.
ಇದೇ ವೇಳೆ 175 ಯೂನಿಟ್ ರಕ್ತ ದಾನ ಮಾಡಿದ ವಿದ್ಯಾರ್ಥಿ, ಪ್ರಾಧ್ಯಾಪಕರಿಗೆ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ, ರಕ್ತನಿಧಿ ಕೇಂದ್ರ ಮಂಡ್ಯ ಇವರು ಪ್ರಶಂಸಣಾ ಪತ್ರವನ್ನು ನೀಡಿದರು. ಕಾರ್ಯಕ್ರಮದಲ್ಲಿ ಜೀವಧಾರೆ ಟ್ರಸ್ಟ್ ಸಂಸ್ಥಾಪಕ ನಟರಾಜ್, ಸಂಸ್ಥಾಪಕರು, ಲ್ಯಾಬ್ ತಂತ್ರಜ್ಞರಾದ ಶಂಕರ್, ಯುವರೆಡ್ ಕ್ರಾಸ್ ಘಟಕದ ಶಶಾಂಕ್ ಉಪಸ್ಥಿತರಿದ್ದರು.