- ದತ್ತಮಾಲಾ ಅಭಿಯಾನದ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಧರ್ಮ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪಂಡಿತಾರಾಧ್ಯರ ಬಗ್ಗೆ ಅಪಾರವಾದ ಗೌರವವಿದೆ. ನಾಟಕ, ಉತ್ಸವದ ಮೂಲಕ ಸಾಮಾಜಿಕವಾಗಿ ಬಹಳ ದೊಡ್ಡ ಕ್ರಾಂತಿ ಮಾಡಿದ ಮಠ ಅದು. ಅವರು ಸಣ್ಣ ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡಿದ್ದು ಸರಿಯಲ್ಲ, ನಿಮಗೆ ಶೋಭೆ ತರಲ್ಲ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ದತ್ತಮಾಲಾ ಅಭಿಯಾನದ ಅಂಗವಾಗಿ ನಗರದ ಶಂಕರಮಠ ಮುಂಭಾಗದಲ್ಲಿ ಭಾನುವಾರ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದ ಈ ದೇಶದಲ್ಲಿ ಶುಭ ಕಾರ್ಯಗಳ ಆರಂಭಕ್ಕೂ ಮೊದಲು ಗಣೇಶನಿಗೆ ಪೂಜೆ ಸಲ್ಲಿಸಲಾಗುತ್ತದೆ ಎಂದ ಅವರು, ಗಣೇಶನ ಅಪ್ಪ ಶಿವನನ್ನ ಪೂಜೆ ಮಾಡ್ತೀರಾ, ಗಣೇಶ ಬೇಡ್ವಾ, ನಿಮ್ಮ ಲಾಜಿಕ್ ಏನು, ಗಣೇಶನ ಪೂಜೆಗೆ ಏಕೆ ವಿರೋಧ ಮಾಡ್ತೀರಾ ಎಂದು ಪ್ರಶ್ನಿಸಿದರು.ತಪ್ಪು ಅಂತ ಹೇಳ್ತೀರಾ, ಮೂಢ ನಂಬಿಕೆ ಅಂತ ಏಕೆ ಹೇಳ್ತೀರಾ ಎಂದು ಪ್ರಶ್ನಿಸಿದ ಅವರು, ಸಾವಿರಾರು ವರ್ಷಗಳ ನಂಬಿಕೆಯನ್ನು ವಿರೋಧಿಸೋದು ಸಂವಿಧಾನ ವಿರೋಧಿಯಾಗುತ್ತೆ. ಸಾರ್ವಜನಿಕವಾಗಿ ಒಂದು ನಂಬಿಕೆ ಘಾಸಿಗೊಳಿಸೋದು ನಿಮಗೆ ಶೋಭೆ ತರಲ್ಲ, ನಿಮ್ಮ ಹೇಳಿಕೆ ಹಿಂಪಡೆಯಿರಿ ಎಂದು ಆಗ್ರಹಿಸಿದರು.
ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳಲ್ಲೂ ಸಾಕಷ್ಟು ಮೂಢ ನಂಬಿಕೆಗಳಿವೆ ಅದರ ಬಗ್ಗೆ ಮಾತನಾಡುವುದಿಲ್ಲ. ಜಾತ್ಯಾತೀತರು ಎಂದ ಮೇಲೆ ಎಲ್ಲಾ ಧರ್ಮದ ಬಗ್ಗೆ ಮಾತನಾಡಬೇಕು. ಬರೀ ಹಿಂದೂ ಧರ್ಮದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದರು.ಮೈಸೂರಿನಲ್ಲಿ ಒಬ್ಬ ಭಗವಾನ್ ಇದ್ದಾರೆ. ಆತ ಭಗವಾನ್ ಅಲ್ಲ ಸೈತಾನ್, ಮಹಿಷಾಸುರ ಮರ್ಧನಿ ಸಹಸ್ರಾರು ವರ್ಷಗಳಿಂದ ನಡೆದು ಬಂದಿದೆ. ಆ ರಾಕ್ಷಸನೇ ನಮಗೆ ದೇವರು ಎನ್ನುತ್ತಾರೆ. ಇದೆಂತಹ ಮೂರ್ಖತನ. ಕಾನೂನು ಸಹ ಅಂತಹವರ ಬಗ್ಗೆ ಯೋಚಿಸುವುದಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಕೂಡಲೇ ಹುಲಿ ಉಗುರಿನ ಬಗ್ಗೆ ಒಮ್ಮೆಲೆ ಜಾಗೃತಿ ಆಗಿ ಹಿಂದೂ ಅಮಾಯಕ ಅರ್ಚಕರನ್ನು ಬಂಧಿಸುತ್ತಾರೆ. ಶಾಖಾದ್ರಿಯನ್ನು ಮುಟ್ಟುವ ತಾಕತ್ತು ಇವರಲ್ಲಿಲ್ಲ. ಕಾನೂನು ಎಲ್ಲರಿಗೂ ಒಂದೇ ಅಲ್ಲವೇ ? ರಾಜಕಾರಣಿಗಳ ಮಕ್ಕಳು, ನಟರು ಎಲ್ಲರಿಗೂ ಕಾನೂನು ಒಂದೇ. ಆದರೂ ಇದರಲ್ಲಿ ತಾರತಮ್ಯ ಏಕೆ ಮಾಡುತ್ತಿದ್ದೀರಿ. ಶಾಖಾದ್ರಿ ಸಿಗಲಿಲ್ಲವೇ ? ಎಲ್ಲಿದ್ದಾರೆ ಹೇಳಬೇಕಾ ? ಸಿದ್ದರಾಮಯ್ಯ ನಿಮ್ಮ ಕೈ ಹಿಡಿದು ಎಳೆಯುತ್ತಿರುವ ಕಾರಣ ನೀವು ಬಂಧಿಸುತ್ತಿಲ್ಲ. ಬಹುಮಾನ ಘೊಷಣೆ ಮಾಡಿ ನಾವು ಶಾಖಾದ್ರಿಯನ್ನು ಹುಡುಕಿಕೊಡುತ್ತೇವೆ ಎಂದು ಸವಾಲು ಹಾಕಿದರು.ಗೋರಕ್ಷಕ ಸಂತೋಷ್ನನ್ನು ಬಿಗ್ ಬಾಸ್ ಒಳಗೆ ಹೋಗಿ ಹಿಡಿಯುತ್ತೀರಿ, ನಿಮಗೆ ಶಾಖಾದ್ರಿ ಸಿಗುವುದಿಲ್ಲವೇ ? ನವಿಲು ರಾಷ್ಟ್ರೀಯ ಪಕ್ಷಿ ಅದರ ಗರಿಗಳನ್ನೇ ಹಿಡಿದು ತಲೆಯ ಮೇಲೆ ಕುಟ್ಟುತ್ತಾರಲ್ಲಾ ಅವರಾರು ನಿಮಗೆ ಸಿಗಲಿಲ್ಲವೇ, ದರ್ಗಾದ ಒಳಗೆ ಹೋಗಿ ಅವರನ್ನು ಬಂಧಿಸಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಹಿಂದೂಗಳನ್ನು ಹೇಗೆ ಗುರಿ ಮಾಡುತ್ತದೆ ಎನ್ನುವುದಕ್ಕೆ ಇದು ಜ್ವಲಂತ ಸಾಕ್ಷಿ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಮಗಳೂರಿಗೆ ಬಂದು ಮುಸ್ಲಿಂ ಹಾಗೂ ಹಿಂದೂ ಧರ್ಮದ ಮುಖಂಡರ ಸಭೆ ಕರೆದು ದತ್ತಪೀಠ ಸಮಸ್ಯೆಯನ್ನು ಸೌಹಾರ್ದವಾಗಿ ಬಗೆಹರಿಸಬೇಕು. ದತ್ತಪೀಠ ಹಿಂದುಗಳಿಗೆ ಸೇರಿದ್ದು, ನಾಗೇನಹಳ್ಳಿಯ ದರ್ಗಾ ಮುಸ್ಲಿಂಗೆ ಸೇರಿದ್ದು ಎಂದು ಹೇಳಿದರು.ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಮಾತನಾಡಿ, ದತ್ತಪೀಠದಲ್ಲಿ ಉರುಸ್ ಮಾಡುವು ದಾದರೆ ಮಸೀದಿಗಳಲ್ಲಿ ಗಣಪತಿ ಕೂರಿಸಲು, ದರ್ಗಾದಲ್ಲಿ ಲಕ್ಷ್ಮಿ ಪೂಜೆಗೆ ಅವಕಾಶ ನೀಡಬೇಕು ಆಗ ಮಾತ್ರ ಸೌಹಾರ್ದತೆ ಆಗುತ್ತದೆ ಎಂದರು.
ರಾಜ್ಯದ ಯಾವುದಾದರೂ ದೇವಸ್ಥಾನ, ಮಠ ಮಂದಿರದ ಎದುರು, ಈದ್ ಮಿಲಾದ್ ಮೆರವಣಿಗೆ ವೇಳೆ ಸೌಹಾರ್ದದ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.1992ರ ಡಿ. 6 ರಂದು ಹಿಂದೂ ಸಮಾಜ ಕ್ರಾಂತಿ ಮಾಡಿ ಅಯೋಧ್ಯೆಯ ರಾಮನ ಜನ್ಮಸ್ಥಾನ ವಶಪಡಿಸಿಕೊಂಡಿತೋ ಅದೇ ಮಾದರಿಯಲ್ಲಿ ದತ್ತಪೀಠ ವಶಕ್ಕೆ ಪಡೆಯುತ್ತೇವೆ ಎಂದು ಹೇಳಿದರು.
ಧರ್ಮ ಸಭೆಯಲ್ಲಿ ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದಶೆಟ್ಟಿ ಅಡ್ಯಾರ್, ಸಮಸ್ತ ವಿಶ್ವಧರ್ಮ ರಕ್ಷ ಸೇವಾ ಸಂಸ್ಥಾನದ ಯೋಗಿ ಸಂಜೀತ್ ಸುವರ್ಣ, ವಿವೇಕ್ನಾಥ್, ಚಿಕ್ಕಮಗಳೂರು ವಿಭಾಗೀಯ ಅಧ್ಯಕ್ಷ ರಂಜಿತ್ ಶೆಟ್ಟಿ, ಗೌರವಾಧ್ಯಕ್ಷ ಅನಿಲ್ ಆನಂದ್, ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ನವೀನಾ ರಂಜಿತ್, ಜಿಲ್ಲಾಧ್ಯಕ್ಷ ಜ್ಞಾನೇಂದ್ರ ಜೈನ್, ಪ್ರಿತೇಶ್ ಇದ್ದರು. 5 ಕೆಸಿಕೆಎಂ 2ದತ್ತಮಾಲಾ ಅಭಿಯಾನದ ಅಂಗವಾಗಿ ಚಿಕ್ಕಮಗಳೂರಿನ ಶಂಕರಮಠ ಎದುರು ಏರ್ಪಡಿಸಲಾಗಿದ್ದ ಧರ್ಮ ಸಭೆಯಲ್ಲಿ ಪ್ರಮೋದ್ ಮುತಾಲಿಕ್ ಮಾತನಾಡಿದರು.