ಹರಪನಹಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ್ ಕಮ್ಯುನಿಸ್ಟ್ ಪಕ್ಷ, ರೈತ ಸಂಘ, ದಲಿತ ಸಂಘ, ಮಹಿಳಾ ಸಂಘ ಸೇರಿದಂತೆ ವಿವಿಧ ಸಂಘಟೆನೆಗಳ ಕಾರ್ಯಕರ್ತರು ಏಳು ಗ್ರಾಪಂಗಳ ಮುಖಂಡರು, ಅಂಗನವಾಡಿ ಕಾರ್ಯಕರ್ತರು ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಗುರುವಾರ ಪಂಜಿನ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಕಿಸಾನ್ ಸಭಾ ಜಿಲ್ಲಾದ್ಯಕ್ಷ ಕೆರೆಗುಡಿಹಳ್ಳಿ ಹಾಲೇಶ್ ಮಾತನಾಡಿ, ಹರಪನಹಳ್ಳಿ ತಾಲೂಕಿನ ಅರಸೀಕೆರೆ ದೊಡ್ಡ ಹೋಬಳಿಯಾಗಿದೆ. ಅರಸೀಕೆರೆಯ ನಾಡಕಚೇರಿಗೆ, ಕೃಷಿ ಕಚೇರಿಗೆ, ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಸಾವಿರಾರು ಸಾರ್ವಜನಿಕರು, ಬಂದು ಹೋಗುವುದರಿಂದ ಬಸ್ ನಿಲ್ದಾಣ ಕಾಮಗಾರಿ, ವಿದ್ಯುತ್ ಪ್ರಸರಣ ಘಟಕ, ರಸ್ತೆ ಅಗಲೀಕರಣ, ಕಾಮಗಾರಿಗಳು ಮೂರು ವರ್ಷಗಳಿಂದ ಅರ್ದಕ್ಕೆ ನಿಂತಿವೆ ಎಂದು ದೂರಿದರು.
ಕಲ್ಯಾಣ ಕರ್ನಾಟಕ ಅಭಿವೃದ್ದಿ ಈ ಭಾಗಕ್ಕೆ ಅನುದಾನ ನೀಡುವಲ್ಲಿ ತಾರಮ್ಯವಾಗಿದೆ. ಈ ಬಗ್ಗೆ ಹಲವಾರು ಬಾರಿ ಪ್ರತಿಭಟನೆ, ಧರಣಿ, ಮುತ್ತಿಗೆ, ಬೃಹತ್ ಹೋರಾಟದ ಮುಖಾಂತರ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದರೂ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.ತಹಸೀಲ್ದಾರ್ ಬಿ.ವಿ. ಗಿರೀಶಬಾಬು ಮನವಿ ಸ್ವೀಕರಿಸಿ ಮಾತನಾಡಿ, ತಾಲೂಕಿನ ಎಲ್ಲ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳನ್ನು 15 ದಿನದೊಳಗೆ ಅರಸೀಕೆರೆಗೆ ಕರೆಸಿ ಸಭೆ ಮಾಡಿ ಸಮಸ್ಯೆ ಬಗೆಹರಿಸಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಿಪಿಐ ಉಪಾಧ್ಯಕ್ಷ ಎಚ್.ಎಂ. ಸಂತೋಷ್, ವಿವಿಧ ಸಂಘಟನೆಗಳ ಮುಖಂಡರಾದ ಬೂದಿಹಾಳ್ ಸಿದ್ದೇಶ್, ಕಬ್ಬಳ್ಳಿ ಮೈಲಪ್ಪ, ಬಳಿಗನೂರ್ ಕೊಟ್ರೇಶ್, ಎಚ್.ರಂಗಪ್ಪ, ಟಿ.ಬಸಮ್ಮ, ಎ.ದುರುಗಪ್ಪ, ಸತ್ತೂರು ಮಹದೇವಪ್ಪ, ಅರುಣಕುಮಾರ್, ಶರತ್ ಹಿರೇಮಠ್, ಹಗರಿ ಗುಡಿಹಳ್ಳಿ ಶಿವರಾಜ್, ಹರಿಯಮ್ಮನಹಳ್ಳಿ ಬಸವರಾಜ್, ತೌಡೂರು ಪ್ರಭುಗೌಡ, ಸಾರಿಗೆ ಇಲಾಖೆಯ ಅಧಿಕಾರಿ ಮಂಜುಳಾ ಇದ್ದರು.