ಕನ್ನಡಪ್ರಭ ವಾರ್ತೆ ಮಂಡ್ಯ
ಪಂಜಿನ ಮರವಣಿಗೆಗೂ ಮುನ್ನ ಶಾಸಕ ಪಿ.ರವಿಕುಮಾರ್ ಅವರು ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಕೊಲೆ ಆರೋಪಿಗಳು ಎಲ್ಲೇ ಇದ್ದರೂ ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಪೊಲೀಸ್ ಇಲಾಖೆಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಕೊಲೆ ಆರೋಪಿಗಳಿಂದ ಅವರ ಕುಟುಂಬಸ್ಥರಿಗಾಗಲಿ, ಗ್ರಾಮಸ್ಥರಿಗಾಗಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.ಪಂಜಿನ ಮೆರವಣಿಗೆಯು ಮೃತ ಯೋಗೇಶ್ ಮನೆಯಿಂದ ಪ್ರಾರಂಭವಾಗಿ ಶ್ರೀಕಾಲಭೈರವೇಶ್ವರ ಸ್ವಾಮಿಯ ದೇವಸ್ಥಾನದವರೆಗೂ ನಡೆಯಿತು. ಗ್ರಾಮದ ಮುಖಂಡರಾದ ರಮೇಶ್, ದೊರೆಸ್ವಾಮಿ, ದೇವರಾಜು, ರವಿಕುಮಾರ್, ಲಿಂಗರಾಜು, ಯಶವಂತ್, ಮನೋಜ್, ಸ್ವಾಮಿ ಗ್ರಾಮದ ಮುಖಂಡರು, ಕುಟುಂಬಸ್ಥರು ಭಾಗವಹಿಸಿದ್ದರು. ಪಂಜಿನ ಮೆರವಣಿಗೆ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಯೋಗೇಶ್ ಹತ್ಯೆ: ನಾಲ್ವರು ಆರೋಪಿಗಳ ಬಂಧನ
ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ನಡೆದ ಯೋಗೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಕೆರಗೋಡು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೃತನ ಸಹೋದರ ನಿಂಗರಾಜು, ಆತನ ಪತ್ನಿ, ಮಕ್ಕಳಾದ ಭರತ್, ದರ್ಶನ್ ಅವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಆಸ್ತಿ ವಿಚಾರಕ್ಕೆ ಜಗಳ ನಡೆದು ತಮ್ಮ ಯೋಗೇಶ್ನನ್ನು ಅಣ್ಣ ನಿಂಗರಾಜು ಹಾಗೂ ಆತನ ಮಕ್ಕಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಕೊಲೆಯಾದ ಯೋಗೇಶ್ನ ಮತ್ತೊಬ್ಬ ಸಹೋದರ ಎಂ.ಎನ್.ಕೆಂಪೇಗೌಡ ನೀಡಿದ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮಂಡ್ಯ ನಗರದ ಬಿಜಿಎಸ್ ಕಲ್ಯಾಣ ಮಂಟಪದ ಬಳಿ ಹಾಗೂ ಕೆ.ಎಂ.ದೊಡ್ಡಿಯ ತಿಟ್ಟಮಾರನಹಳ್ಳಿ ಬಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.