ದಾವಣಗೆರೆ: ಗಣೇಶ ಚತುರ್ಥಿ ಹಬ್ಬ ಎಂದರೆ ಮನೆ ಮನೆಗೂ, ಬೀದಿ ಬೀದಿಗೂ ಹರಡುವ ಭಕ್ತಿ ಮತ್ತು ಸಡಗರ. ಆದರೆ, ಇಂದಿನ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಾಗುವ ಗಣೇಶ ಮೂರ್ತಿಗಳ ಪರಿಣಾಮವಾಗಿ ಪರಿಸರ ಮಾಲಿನ್ಯ ಗಂಭೀರ ಸಮಸ್ಯೆಯಾಗಿರುವುದು ಎಲ್ಲರಿಗೂ ತಿಳಿದ ಸಂಗತಿ. ಇದಕ್ಕೆ ಮಾದರಿಯ ಉದಾಹರಣೆಯಾಗಿ ದಾವಣಗೆರೆಯ ಮಾದರಿ ಸಿದ್ದಗಂಗಾ ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ 12 ಅಡಿ ಎತ್ತರದ ಪರಿಸರ ಸ್ನೇಹಿ ಪೇಪರ್ ಗಣಪತಿ ಮೂರ್ತಿ ಈಗ ಸಜ್ಜಾಗಿದೆ.ಹತ್ತು ದಿನಗಳ ಶ್ರಮ – ನೈಸರ್ಗಿಕ ಬಣ್ಣದ ಸೊಬಗು:
30 ಕೆ.ಜಿ. ಹಳೆಯ ನ್ಯೂಸ್ ಪೇಪರ್ ಹಾಗೂ 10 ಕೆ.ಜಿ. ಮೈದಾ ಅಂಟನ್ನು ಬಳಸಿ, ವಿದ್ಯಾರ್ಥಿಗಳು ಹತ್ತು ದಿನಗಳ ಕಾಲ ಅಹರ್ನಿಶಿ ಶ್ರಮಿಸಿದರು. ಹಂತ ಹಂತವಾಗಿ ಪತ್ರಿಕೆಯನ್ನು ಅಂಟಿಸಿ, ಆಕರ್ಷಕವಾಗಿ ಆಕಾರ ನೀಡಿದ ನಂತರ ಮೂರ್ತಿಗೆ ನೈಸರ್ಗಿಕ ಬಣ್ಣಗಳಿಂದ ಅಲಂಕಾರ ಮಾಡಲಾಗಿದೆ. ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೆ, ಪ್ರಕೃತಿಗೆ ಹಾನಿಯಾಗದಂತೆ ತಯಾರಿಸಿರುವುದು ಈ ಮೂರ್ತಿಯ ಪ್ರಮುಖ ವಿಶೇಷತೆ.ಮೆರವಣಿಗೆಯ ಸಾಂಸ್ಕೃತಿಕ ಶೋಭೆ:
ಶಾಲಾ ಆವರಣದಿಂದ ಹೊರಡುವ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ನಂದಿ ಕೋಲು, ಕುದುರೆ, ಪಟ ಮುಂತಾದ ಜನಪದ ಕಲೆಗಳನ್ನು ಪ್ರದರ್ಶಿಸಲಿದ್ದಾರೆ. ಶಾಲೆಯ ವಾದ್ಯಗೋಷ್ಠಿಯು ಭಜನೆ ಹಾಗೂ ಭಕ್ತಿಗೀತೆಗಳೊಂದಿಗೆ ಶೋಭೆ ಹೆಚ್ಚಿಸಲಿದ್ದು, ಮಕ್ಕಳ ಭಕ್ತಿ ನೃತ್ಯ, ಪದ್ಯಪಾಠ ಹಾಗೂ ಕಲಾತ್ಮಕ ಅಭಿವ್ಯಕ್ತಿ ಮೆರವಣಿಗೆಯ ಆಕರ್ಷಣೆಯಾಗಲಿದೆ.ಮಾರ್ಗದರ್ಶನ ಮತ್ತು ಸಹಕಾರ:
ಈ ಪೇಪರ್ ಗಣಪತಿ ಡಾ.ಜಯಂತ್ ಅವರ ಕಲ್ಪನೆಯ ಕೂಸು. ಕಳೆದ ಹತ್ತು ವರ್ಷಗಳಿಂದ ಈ ಶಾಲೆಯಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯಾಗುತ್ತಿದ್ದು, ಇದು ದಾವಣಗೆರೆಯಾದ್ಯಂತ ಗಮನ ಸೆಳೆಯುತ್ತಿದೆ. ಶಾಲೆಯ ಡ್ರಾಯಿಂಗ್ ಶಿಕ್ಷಕರ ಸಹಕಾರ ಹಾಗೂ ಡಾ.ಜಸ್ಟಿನ್ ಡಿಸೋಜಾ ಅವರ ತಾಂತ್ರಿಕ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ದೊರೆತಿದೆ. ಶಾಲೆಯ ಅಧ್ಯಕ್ಷರಾದ ಹೇಮಂತ್ ಸರ್ ಮೆರವಣಿಗೆಯ ಎಲ್ಲಾ ವ್ಯವಸ್ಥೆಗಳಿಗೆ ನೇತೃತ್ವ ವಹಿಸಿದ್ದಾರೆ.ಭವಿಷ್ಯದ ಮಾದರಿ:
ಈ ಪ್ರಯತ್ನವನ್ನು ಜಿಲ್ಲಾಡಳಿತವು ಇತರ ಶಾಲೆಗಳಲ್ಲಿಯೂ ಅನುಸರಿಸಿದರೆ, ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವುದರ ಜೊತೆಗೆ ಸಾಂಸ್ಕೃತಿಕ ಸಂವೇದನೆ ಬೆಳೆಸಲು ಇದು ಮಹತ್ವದ ಹೆಜ್ಜೆಯಾಗಲಿದೆ. ಸಮಾಜದ ಬೆಂಬಲ ದೊರೆತರೆ, ಇಂತಹ ಪರಿಸರ ಸ್ನೇಹಿ ಹಬ್ಬಗಳು ಮುಂದಿನ ದಿನಗಳಲ್ಲಿ ಜನಾಂಆಂದೋಲನದ ರೂಪ ತಾಳಲಿವೆ.ಪರಿಸರ ಸಂರಕ್ಷಣೆಯ ಸಂದೇಶ“ಗಣೇಶನು ವಿಜ್ಞ ವಿನಾಶಕ, ಆದರೆ ನಾವು ತಯಾರಿಸಿದ ಪೇಪರ್ ಗಣಪತಿ ಸಮಾಜಕ್ಕೆ ಪರಿಸರ ಸಂರಕ್ಷಣೆಯ ಮಹತ್ವದ ಸಂದೇಶ ನೀಡುತ್ತಿದೆ. ಮಕ್ಕಳು ಕಲೆಯೊಂದಿಗೆ ಜವಾಬ್ದಾರಿಯುತ ನಾಗರಿಕರಾಗುವ ದಾರಿಯಲ್ಲಿ ಸಾಗುತ್ತಿದ್ದಾರೆ” ಎಂದು ಶಿಕ್ಷಕರು ಹರ್ಷ ವ್ಯಕ್ತಪಡಿಸಿದರು.