ಪೋಷಕರು, ಆಡಳಿತ ಮಂಡಳಿ ಸಂಧಾನ ಯಶಸ್ವಿ

KannadaprabhaNewsNetwork | Published : Jun 1, 2025 4:35 AM
ಇಲ್ಲಿಗೆ ಸಮೀಪದ ಕುಂಬಳೂರಿನ ಹೊರವಲಯದಲ್ಲಿನ ಚಿಟ್ಟಕ್ಕಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಶುಲ್ಕ ವಸೂಲಿ ಮಾಡಲಾಗುತ್ತದೆ ಎಂಬ ಪೋಷಕರ ಆರೋಪದ ಮೇರೆಗೆ ಶಾಲೆಯ ಆವರಣದಲ್ಲಿ ಜರುಗಿದ ಪೋಷಕರು ಮತ್ತು ಆಡಳಿತ ಮಂಡಳಿ ಸದಸ್ಯರ ಸಭೆ ಸುಂಖಾತ್ಯ ಕಂಡಿದೆ.

ವಿದ್ಯಾರ್ಥಿಗಳಿಂದ ಹೆಚ್ಚು ಶುಲ್ಕ ವಸೂಲಿ ಆರೋಪ । ಅಧಿಕಾರಿಗಳು, ತಂದೆ-ತಾಯಿ ನಡುವೆ ಚರ್ಚೆ, ವಾಗ್ವಾದ

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಇಲ್ಲಿಗೆ ಸಮೀಪದ ಕುಂಬಳೂರಿನ ಹೊರವಲಯದಲ್ಲಿನ ಚಿಟ್ಟಕ್ಕಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಶುಲ್ಕ ವಸೂಲಿ ಮಾಡಲಾಗುತ್ತದೆ ಎಂಬ ಪೋಷಕರ ಆರೋಪದ ಮೇರೆಗೆ ಶಾಲೆಯ ಆವರಣದಲ್ಲಿ ಜರುಗಿದ ಪೋಷಕರು ಮತ್ತು ಆಡಳಿತ ಮಂಡಳಿ ಸದಸ್ಯರ ಸಭೆ ಸುಂಖಾತ್ಯ ಕಂಡಿದೆ.

ಕಳೆದ ಮೂರು ದಿನಗಳ ಹಿಂದೆ ಸುತ್ತ ಹಲವು ಗ್ರಾಮಗಳ ನೂರಾರು ಪೋಷಕರು ಹೆಚ್ಚು ಶುಲ್ಕ ವಸೂಲಿ ಕಾರಣ ಚಿಟ್ಟಕ್ಕಿ ಇಂಟರ್‌ನ್ಯಾಷನಲ್ ಶಾಲಾ ಗೇಟ್‌ನಲ್ಲಿ ಕುಳಿತು ಪ್ರತಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಶಾಲೆಯ ಕಾರ್ಯದರ್ಶಿ, ಆಡಳಿತಾಧಿಕಾರಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಪೋಷಕರು ಸುದೀರ್ಘ ಚರ್ಚೆ ನಡೆಸಿದ್ದರು, ವಾಗ್ವಾದವೂ ನಡೆದಿತ್ತು.

ಈ ಹಿನ್ನೆಲೆ ಶಾಲಾವರಣದಲ್ಲಿ ಜರುಗಿದ ಸಭೆಯಲ್ಲಿ ಪೋಷಕರ, ಆಡಳಿತ ಮಂಡಳಿ ಪದಾಧಿಕಾರಿಗಳ ಮಧ್ಯೆ ಚರ್ಚೆ ನಡೆದು ಸಂಸ್ಥೆಯ ಅಧ್ಯಕ್ಷ ರಮೇಶ್ ಚಿಟ್ಟಕ್ಕಿ ನಿರ್ಣಯ ಹೇಳಿದರು. ಪ್ರತಿ ಎಲ್‌ಕೆಜಿ, ಯುಕೆಜಿ ವಿದ್ಯಾರ್ಥಿಗೆ ೪೦೦೦೦ ಸಾವಿರ ರು., ೧ರಿಂದ ೫ ನೇ ತರಗತಿ ಪ್ರತಿ ವಿದ್ಯಾರ್ಥಿಗೆ ೪೫೦೦೦ ಸಾವಿರ ರು. ಮತ್ತು ೬ರಿಂದ ೧೦ ನೇ ತರಗತಿ ಪ್ರತಿ ವಿದ್ಯಾರ್ಥಿಗೆ ೫೦೦೦೦ ಸಾವಿರ ರು. ತೆಗೆದುಕೊಳ್ಳುವ ಭರವಸೆ ನೀಡಿದರು. ಹೆಚ್ಚು ಶುಲ್ಕ ಮಾಡಿದ್ದರಲ್ಲಿ ಐದು ಸಾವಿರ ರು. ಕಡಿಮೆ ಮಾಡಿದ್ದು ಕಡು ಬಡತನದ ಮತ್ತು ಬಡ ರೈತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಪ್ರಕಟಿಸಿದರು.

ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಕೃಷ್ಣಪ್ಪ ಮಾತನಾಡಿ, ೨೦೨೩-೨೪ನೇ ಲೆಕ್ಕ ತಪಾಸಣೆ ವರದಿ ಪ್ರಕಾರ ಶಾಲೆಯ ಒಟ್ಟು ೬೭ ಸಿಬ್ಬಂಧಿ ಹಾಗೂ ೫೫೮ ವಿದ್ಯಾರ್ಥಿಗಳಿದ್ದು ೨.೨೯.೨೬.೨೦೦ ಕೋಟಿ ಆದಾಯ ಬಂದಿದ್ದು, ೮೬.೪೮.೧೮೦ ಲಕ್ಷ ರು. ಹೆಚ್ಚುವರಿ ಖರ್ಚಾಗಿದೆ. ಈ ಲೆಕ್ಕದಂತೆ ಪ್ರತಿ ವಿದ್ಯಾರ್ಥಿಗೆ ೨೪.೨೦೬ ರು. ಪಡೆಯಬೇಕಿದೆ ಎಂದರು.

ಪೋಷಕರಾದ ಪ್ರಸನ್ನ ಮಾತನಾಡಿ, ಕಳೆದ ಬಾರಿಗಿಂತ ೧೬೦೦೦ ರು. ದಿಢೀರ್ ಹೆಚ್ಚಿಸಲಾಗಿದೆ. ಶಿಕ್ಷಣ ಹಕ್ಕುಗಳ ಉಲ್ಲಂಘನೆಯಾಗಿದೆ. ಆಡಳಿತ ಮಂಡಳಿಯು ಮಕ್ಕಳ ಜತೆ ಆಟವಾಡುತ್ತಿದೆ ಎಂದು ದೂರಿದರು.

ಕುಂದೂರು, ನಿಟ್ಟೂರು, ಭಾನುವಳ್ಳಿ, ಮೂಗಿನಗೊಂದಿ, ಕೋಣನತಲೆ, ಮಲೇ ಕುಂಬಳೂರು, ಹೊಳೆಸಿರಿಗೆರೆ ಗ್ರಾಮಗಳ ಪೋಷಕರಾದ ಪ್ರಕಶ, ನಾಗಗೌಡ, ಪರಮೆಶ್, ಗಂಗಾಧರ್,ವಿಶ್ವನಾಥಯ್ಯ, ಧನ್ಯಕುಮಾರ್,ಚಂದ್ರಪ್ಪ ಇವರು ಸಂಸ್ಥೆಯ ಕಾರ್ಯದರ್ಶಿ ಮಹಂತೇಶ್, ಪ್ರಾಚಾರ್ಯ ಅಖಿಲೇಶ್ವರಿ, ಆಡಳಿತಾಧಿಕಾರಿ ಕುಮಾರ್ ಮತ್ತಿತರ ಜತೆ ಶುಲ್ಕ ಕುರಿತು ಸುಮಾರು ಮೂರು ಗಂಟೆಗಳ ಕಾಲ ಚರ್ಚಿಸಿದರು. ನಂತರ ಪ್ರತಿ ವಿದ್ಯಾರ್ಥಿಗೆ ಐದು ಸಾವಿರ ಕಡಿಮೆ ಮಾಡಿರುವ ನಿರ್ಣಯಕ್ಕೆ ಒಪ್ಪಿಕೊಂಡರು.