ಕನ್ನಡಪ್ರಭ ವಾರ್ತೆ ಹಾಸನ
ನಗರದ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಘಟಕ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೊಡ್ಡವರು ಹೇಳುವ ಮಾತನ್ನು ಮಕ್ಕಳು ಕೇಳುವ ಗುಣ ಬೆಳೆಸಿಕೊಳ್ಳಬೇಕು. ಇಂದಿನ ಮಕ್ಕಳಿಗೆ ಟೆಕ್ನಾಲಜಿ ಬಗ್ಗೆ ಹೆಚ್ಚಿನ ಅರಿವು ಇದ್ದರೂ, ನಮ್ಮ ಸಂಸ್ಕೃತಿ ಮತ್ತು ಜೀವನ ಮೌಲ್ಯಗಳಲ್ಲಿ ಹಿರಿಯರ ಅನುಭವವೇ ಮುಖ್ಯ ಎಂದು ತಿಳಿಸಿದರು. ನಮ್ಮ ತಂದೆ-ತಾಯಿ ಕಲಿತ ಸಂಸ್ಕೃತಿ, ಆಚಾರ-ವಿಚಾರಗಳನ್ನು ಕನಿಷ್ಠ ಮಟ್ಟಿಗಾದರೂ ಮಕ್ಕಳಿಗೆ ತಿಳಿಸುವ ಕೆಲಸ ಪೋಷಕರು ಮಾಡಬೇಕು. ಮುಂದಿನ ಭವಿಷ್ಯ ಉತ್ತಮವಾಗಬೇಕಾದರೆ, ಸಮಾಜದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಬೇಕಾದರೆ ಮಕ್ಕಳಲ್ಲೇ ಸಂಸ್ಕಾರ ಬೀಜ ಬಿತ್ತುವುದು ಅತ್ಯಂತ ಅಗತ್ಯ ಎಂದರು.
ಇಂದಿನ ಕಾಲದಲ್ಲಿ ಹೆಚ್ಚುತ್ತಿರುವ ಸೌಲಭ್ಯಗಳು ಮಕ್ಕಳಲ್ಲಿ ಸೋಮಾರಿತನವನ್ನು ಹೆಚ್ಚಿಸುತ್ತಿವೆ ಎಂಬುದನ್ನು ಅವರು ಆತಂಕ ವ್ಯಕ್ತಪಡಿಸಿದರು. “ಮಕ್ಕಳಿಗೆ ಅಗತ್ಯಕ್ಕಿಂತ ಹೆಚ್ಚು ಸೌಕರ್ಯ ನೀಡಿದಾಗ ಅವರಲ್ಲಿ ಜವಾಬ್ದಾರಿ ಕಡಿಮೆಯಾಗುತ್ತದೆ. ಆದ್ದರಿಂದ, ಸಣ್ಣ ಕೆಲಸಗಳನ್ನಾದರೂ ಕಲಿಸುವುದು ಮುಖ್ಯ,” ಎಂದು ಕಿವಿಮಾತು ಹೇಳಿದರು. ಗ್ರಾಮೀಣ ಪ್ರದೇಶದ ಮಕ್ಕಳ ಉದಾಹರಣೆ ನೀಡಿದ ಅವರು, “ಗ್ರಾಮಗಳಲ್ಲಿ ಮಕ್ಕಳು ಕೆಲಸದ ಜೊತೆಗೆ ಶಿಕ್ಷಣವನ್ನು ಸಮತೋಲನವಾಗಿ ನಡೆಸಿಕೊಂಡು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುತ್ತಿದ್ದಾರೆ. ಆದರೆ ನಗರಗಳಲ್ಲಿ ಅನೇಕ ಮಕ್ಕಳು ಓದಿನ ಒತ್ತಡಕ್ಕೆ ಒಳಗಾಗಿ ಜೀವನ ಕೌಶಲ್ಯಗಳಿಂದ ದೂರವಾಗುತ್ತಿದ್ದಾರೆ,” ಎಂದು ಅಭಿಪ್ರಾಯಪಟ್ಟರು.ವೈದ್ಯರು, ಎಂಜಿನಿಯರ್, ಐಎಎಸ್ ಆಗಬೇಕು ಎಂಬ ಆಶಯದಲ್ಲಿ ಮಕ್ಕಳಿಗೆ ಕೇವಲ ಓದಿನ ಮೇಲೆಯೇ ಒತ್ತಡ ಹಾಕುವುದು ಸರಿಯಲ್ಲ. ಮನೆ ಕೆಲಸಗಳೂ ಸೇರಿದಂತೆ ಜೀವನದ ಮೂಲ ಕೌಶಲ್ಯಗಳನ್ನು ಕಲಿಸುವುದು ಅಗತ್ಯ ಎಂದರು. “ಆಡುವ ಸಮಯದಲ್ಲಿ ಮಕ್ಕಳು ಆಡಬೇಕು, ಓದುವ ಸಮಯದಲ್ಲಿ ಓದಲು ಅವಕಾಶ ಕೊಡಬೇಕು. ಈ ಸಮತೋಲನ ಇದ್ದಾಗ ಮಾತ್ರ ಮಕ್ಕಳ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಯಾಗುತ್ತದೆ” ಎಂದು ಸಲಹೆ ನೀಡಿದರು. ಒಟ್ಟಾರೆ, ಮಕ್ಕಳಲ್ಲಿ ಸಂಸ್ಕಾರ, ಜವಾಬ್ದಾರಿ ಹಾಗೂ ಜೀವನ ಕೌಶಲ್ಯಗಳನ್ನು ಬೆಳೆಸುವಲ್ಲಿ ಪೋಷಕರ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಮುಖಂಡರಾದ ಪ್ರಧಾನ ಕಾರ್ಯದರ್ಶಿ ಇಂದಿರಾ ನಾಗರಾಜು, ಅಂಬಿಕಾ, ಚಿಕ್ಕಮಗಳೂರು ಕನ್ನಡ ಸೇನೆ ಜಿಲ್ಲಾಧ್ಯಕ್ಷೆ ಚೈತ್ರಗೌಡ, ವಿಜಯಲಕ್ಷ್ಮಿ ಅಂಜನಪ್ಪ, ಶೇಶಮ್ಮ, ನಾಗರತ್ನ, ರಮೇಶ್, ರಶ್ಮಿ, ಅನೀತಾ ಇತರರು ಉಪಸ್ಥಿತರಿದ್ದರು. ಮಾಧ್ಯಮ ವಕ್ತಾರರಾದ ವೇಧವತಿ ಕಾರ್ಯಕ್ರಮ ನಿರೂಪಿಸಿದರು.