ಉಡುಪಿ: ಉಡುಪಿ ಯಕ್ಷಗಾನ ಕಲಾರಂಗದ 51ನೇ ವಾರ್ಷಿಕ ಮಹಾಸಭೆ ಶನಿವಾರ ಸಂಜೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಜರುಗಿತು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಅಗಲಿದ ಸದಸ್ಯರಿಗೆ, ಕಲಾವಿದರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಹಿಂದಿನ ಮಹಾಸಭೆಯ ವರದಿ ವಾಚಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ 2025-26ರ ಪರಿಶೋಧಿತ ಲೆಕ್ಕಪತ್ರ ಮಂಡಿಸಿದರು. 2026-27ನೇ ಸಾಲಿಗೆ ಸಿಎ ಅರುಣ್ ನಾಯಕರನ್ನು ಲೆಕ್ಕ ಪರಿಶೋಧಕರನ್ನಾಗಿ ನೇಮಕ ಮಾಡಲಾಯಿತು.ಈ ಎಲ್ಲ ಕಲಾಪಗಳು ಸದಸ್ಯರ ಸೂಚನೆ, ಅನುಮೋದನೆಗಳೊಂದಿಗೆ ಅಂಗೀಕಾರಗೊಂಡವು. 2026-27ನೇ ಸಾಲಿಗೆ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಆಹ್ವಾನಿತ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ ಮಾತನಾಡಿದರು. ಅಧ್ಯಕ್ಷೀಯ ಭಾಷಣದ ನಂತರ ಜತೆಕಾರ್ಯದರ್ಶಿ ವಿದ್ಯಾಪ್ರಸಾದ ವಂದಿಸಿದರು. ಡಾ. ಪ್ರತಿಮಾ ಜೆ. ಆಚಾರ್ಯ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತು.