ಶಿಗ್ಗಾಂವಿ: ಮಗುವಿಗೆ ಶಿಕ್ಷಣ ಅತ್ಯಗತ್ಯವಾಗಿದ್ದು, ಕುಟುಂಬ ಸಂತೋಷಯುತ ಮತ್ತು ಧನಾತ್ಮಕ ಬೆಳವಣಿಗೆಯ ವಾತಾವರಣವನ್ನು ಒದಗಿಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು.
ತಾಲೂಕಿನ ಅರಟಾಳ ಗ್ರಾಮದ ಶ್ರೀ ಪಾಶ್ವನಾಥ ದಿಗಂಬರ ಜೈನ ಬಸದಿಯಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಶಿಗ್ಗಾಂವಿ ಹಾಗೂ ಸವಣೂರು ತಾಲೂಕು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.ಬೆಳೆಯುತ್ತಿರುವ ಮಗುವಿಗೆ ಸಂತೋಷದ ಕಲಿಕೆಯ ವಾತಾವರಣ ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದು ಪೋಷಕರ ಪ್ರಾಥಮಿಕ ಆದ್ಯತೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಹಾವೇರಿ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಮಾತನಾಡಿ, ಡಾ. ಹೇಮಾವತಿ ಹೆಗ್ಗಡೆಯವರ ಮಹಿಳಾ ಸಬಲೀಕರಣದ ಮಹತ್ವಾಕಾಂಕ್ಷೆ ಹೊಂದಿದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ದುರ್ಬಲ ವರ್ಗದ ಮಹಿಳೆಯರಲ್ಲಿ ಕುಟುಂಬ ನಿರ್ವಹಣೆ ಜಾಣ್ಮೆ, ಹಣಕಾಸಿನ ವ್ಯವಹಾರದ ಜ್ಞಾನ, ಮಕ್ಕಳ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ವೈಯಕ್ತಿಕ ಪರಿಸರ ಪ್ರಜ್ಞೆ, ಸ್ವಾವಲಂಬನೆ, ಸ್ವಉದ್ಯೋಗ, ಸರ್ಕಾರದ ಸೌಲಭ್ಯಗಳ ಬಳಕೆ, ನಾಗರಿಕ ಸೌಲಭ್ಯಗಳ ಬಳಕೆ ಮುಂತಾದ ಗುರಿಗಳನ್ನು ಇಟ್ಟುಕೊಂಡು ಯೋಜನೆ ಪ್ರಾರಂಭಿಸಿದ ಕಾರ್ಯಕ್ರಮವೇ ಮಹಿಳಾ ಜ್ಞಾನವಿಕಾಸ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪ್ರಕಾಶ್ ಪಾಸಾರ ಮಾತನಾಡಿ, ಯೋಜನೆಯ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು,
ಕಾರ್ಯಕ್ರಮದಲ್ಲಿ ಈರಣ್ಣ ಚೌಟಿ, ಶಿಗ್ಗಾಂವಿ, ಸವಣೂರ ತಾಲೂಕಿನ ಯೋಜನಾಧಿಕಾರಿಗಳಾದ ಉಮಾ ಮಾತನಾಡಿ, ಮಾಸಿಕ ಕೇಂದ್ರದಲ್ಲಿ ಶಿಕ್ಷಣ, ಕಾನೂನು ಸಲಹೆ, ಸರ್ಕಾರಿ ಯೋಜನೆಗಳ ಬಗ್ಗೆ ತಾಲೂಕಿನ ಜ್ಞಾನವಿಕಾಸ ಕೇಂದ್ರಗಳಲ್ಲಿ ತಿಳಿಸಲಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ತಾಲೂಕು ಸಮನ್ವಯ ಅಧಿಕಾರಿ ರಾಧಿಕಾ ಮೇಲ್ವಿಚಾರಕ ಜಯರಾಮ್, ಆನಂದ್, ಕೃಷಿ ಮೇಲ್ವಿಚಾರಕ ಪ್ರಶಾಂತ್, ಜ್ಞಾನವಿಕಾಸ ಕೇಂದ್ರದ ತಾಲೂಕಿನ ಎಲ್ಲ ಸೇವಾ ಪ್ರತಿನಿಧಿಗಳು ಉಪಸ್ಥಿರಿದ್ದರು.