ಪೋಷಕರೇ, ತಮ್ಮಲ್ಲಿನ ತಾತ್ಸಾರ ಮನೋಭಾವ, ಕೀಳರಿಮೆ ತೊಡೆದು ಹಾಕಿ

KannadaprabhaNewsNetwork |  
Published : Mar 19, 2024, 12:54 AM IST
18ಕೆಎಂಎನ್ ಡಿ11 | Kannada Prabha

ಸಾರಾಂಶ

ದೇಶದಲ್ಲಿ ಸಾಧನೆ ಮಾಡಿದ ಮಹಾನ್ ಸಾಧಕರು, ಮಹಾ ಗಣ್ಯವ್ಯಕ್ತಿಗಳು ಬಹುತೇಕ ಎಲ್ಲರು ಸರ್ಕಾರಿ ಶಾಲೆಯಲ್ಲಿಯೇ ಓದಿ ಬೆಳೆದವರು. ಇಂತಹ ಮಹಾನ್ ವ್ಯಕ್ತಿಗಳು ನಮಗೆಲ್ಲ ಆದರ್ಶ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರಸರ್ಕಾರಿ ಶಾಲೆ ಮಕ್ಕಳಲ್ಲಿಯೂ ವಿಶೇಷ ಪ್ರತಿಭೆ ಗುರುತಿಸಿ ಹೊರತೆಗೆಯುವ ಕೆಲಸ ಶಿಕ್ಷಕರಿಂದ ಆಗಬೇಕು ಎಂದು ಬೆಂಗಳೂರಿನ ಆಯುಕ್ತಕರ ಕಚೇರಿ (ಆಡಳಿತ ವಿಭಾಗ) ಸಹಾಯಕ ನಿರ್ದೇಶಕರಾದ ಸಿ.ಎನ್.ಗೋಪಾಲೇಗೌಡ ಹೇಳಿದರು.

ತಾಲೂಕಿನ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿಂದ ನಡೆದ ರಂಗ ಸಂಭ್ರಮ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿರುವ ತಾತ್ಸಾರದ ಮನೋಭಾವ, ಕೀಳರಿಮೆ ತೊಡೆದು ಹಾಕಬೇಕು. ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತಹ ಮನಸ್ಸು ಮಾಡಬೇಕು ಎಂದರು.

ದೇಶದಲ್ಲಿ ಸಾಧನೆ ಮಾಡಿದ ಮಹಾನ್ ಸಾಧಕರು, ಮಹಾ ಗಣ್ಯವ್ಯಕ್ತಿಗಳು ಬಹುತೇಕ ಎಲ್ಲರು ಸರ್ಕಾರಿ ಶಾಲೆಯಲ್ಲಿಯೇ ಓದಿ ಬೆಳೆದವರು. ಇಂತಹ ಮಹಾನ್ ವ್ಯಕ್ತಿಗಳು ನಮಗೆಲ್ಲ ಆದರ್ಶ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಬೇಕು ಎಂದರು.

ಈ ಶಾಲೆ ಮಕ್ಕಳು ದೇಶದ ಮಹಾಜ್ಞಾನಿಗಳು, ಮಾಹಾನ್ ಸಾಧಕರು, ಹೋರಾಟಗಾರರು, ಕವಿಗಳ ಸಾಧನೆ, ಜೀವನ ಚರಿತ್ರೆಗಳನ್ನು ನಿರರ್ಗಳವಾಗಿ ಮಾತನಾಡುವ ಪ್ರತಿಭೆ ಹೊಂದಿದ್ದಾರೆ. ಇದಕ್ಕೆ ಇಲ್ಲಿನ ಶಿಕ್ಷಕರ ಪರಿಶ್ರಮ ಹೆಚ್ಚಾಗಿದೆ ಎಂದರು.

ಬಿಇಒ ಬಿ.ಚಂದ್ರಶೇಖರ್ ಮಾತನಾಡಿ, ದೊಡ್ಡಬ್ಯಾಡರಹಳ್ಳಿ ಶಾಲೆ ಮತ್ತು ಇಲ್ಲಿನ ಮಕ್ಕಳು ನಮ್ಮ ತಾಲೂಕಿಗೆ ಮಾದರಿಯಾಗಿದ್ದಾರೆ. ಇಲ್ಲಿನ ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಕಾರ್‍ಯಕ್ರಮಗಳಲ್ಲಿ ನಿರೂಪಣೆ, ನಾಟಕ, ಏಕಪಾತ್ರ ಅಭಿನಯಗಳನ್ನು ಮಾಡುವಂತಹ ಪ್ರತಿಭೆ ಹೊಂದಿದ್ದಾರೆ ಎಂದರು.

ಮಕ್ಕಳ ಪ್ರತಿಭೆ ನೋಡಿ ನಾವೆಲ್ಲರೂ ಸಂತೋಷ ಪಡುವಂತಹ ವಿಚಾರವಾಗಿದೆ. ಇಲ್ಲಿನ ಶಿಕ್ಷಕರು ಮಕ್ಕಳ ಮನಸ್ಸಿನ್ನು ಅರ್ಥಮಾಡಿಕೊಂಡು ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ಇದೇ ವೇಳೆ ಶಾಲೆಗೆ ಸುಮಾರು 2 ಲಕ್ಷಕ್ಕಿಂತ ಅಧಿಕ ವಿವಿಧ ವಸ್ತುಗಳನ್ನು ಕೊಡುಗೆ ನೀಡಿ, ಬಿಡುವಿನ ಸಮಯದಲ್ಲಿ ಮಕ್ಕಳಿಗೆ ಭೋದನೆ ಮಾಡುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿರುವ ಜಿಎಚ್‌ವಿಎಸ್ ಸಂಸ್ಥೆ ಸಂಸ್ಥಾಪಕರಾದ ಉಮಾ ಹಾಗೂ ರಾಮನಾಥ್ ಅವರಿಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಳಿಕ ಶಾಲಾ ಮಕ್ಕಳಿಂದ ಹಲವು ನೃತ್ಯ ಹಾಗೂ ಹಾಸ್ಯನಾಟಕ ಪ್ರದರ್ಶನಗಳು ಮೂಡಿಬಂದವು. ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷ ಕಠಾರಿ ಶಂಕರ್, ಸದಸ್ಯರಾದ ಲಿಂಗರಾಜು, ಮಾಜಿ ಸದಸ್ಯ ಬಿ.ಟಿ.ಧರ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್‍ಯದರ್ಶಿ ಕುಮಾರ್, ಉಪನ್ಯಾಸಕ ಧನಂಜಯ್, ರಂಗಭೂಮಿ ನಿರ್ದೇಶಕ ಪುನೀತ್‌ಮಂಡ್ಯ, ಸ್ವಾಮಿಗಾಮನಹಳ್ಳಿ, ಗಿರೀಶ್, ಅಮಿತ್‌ಕೃಷ್ಣ, ಬೀರಶೆಟ್ಟಹಳ್ಳಿ ರಮೇಶ್, ಕುಮಾರ್, ವಿವೇಕ್, ಎಸ್‌ಡಿಎಂಸಿ ಅಧ್ಯಕ್ಷೆ ಲಾವಣ್ಯ, ಸದಸ್ಯರಾದ ನರಸಿಂಹಗೌಡ, ಕೃಷ್ಣ, ಗಿರೀಶ್, ಮುಖ್ಯಶಿಕ್ಷಕ ಪ.ಮ.ನಂಜುಂಡಸ್ವಾಮಿ, ಶಿಕ್ಷಕ ಜಯರಾಮು ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ