ದೇವನಹಳ್ಳಿ: ಸರ್ಕಾರಿ ಶಾಲೆಗಳಲ್ಲಿ ಪರಿಣತ ಶಿಕ್ಷಕರಿದ್ದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಮಕ್ಕಳ ಶಿಕ್ಷಣದಲ್ಲಿ ಶಿಕ್ಷಕರಷ್ಟೇ ಪೋಷಕರು ನಿಗಾ ವಹಿಸಬೇಕು ಎಂದು ತಹಶೀಲ್ದಾರ್ ಅನಿಲ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಅನಸೂಯ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಮಕ್ಕಳು ಶಿಕ್ಷಕರು ಪಾಠ ಮಾಡುವುದನ್ನು ಶ್ರದ್ಧೆಯಿಂದ ಗಮನವಿಟ್ಟು ಕೇಳಬೇಕು. ಪಾಠಗಳು ನಿತ್ಯವೂ ಓದಿಕೊಂಡರೆ ನೂರಕ್ಕೆ ನೂರರಷ್ಟು ಅಂಕ ಗಳಿಸಬಹುದು ಹಾಗೂ ಶಾಲೆಗೆ ನೂರಕ್ಕೆ ನೂರರಷ್ಟು ಫಲಿತಾಂಶ ದಾಖಲಿಸಬಹುದು. ಅದೇ ರೀತಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮುಂದಿನ ಜೀವನದ ಪ್ರಮುಖ ಘಟ್ಟ. ಈ ಬಗ್ಗೆ ಶಿಕ್ಷಕರು ಸಹ ಹೆಚ್ಚಿನ ಕಾಳಜಿ ವಹಿಸಿ ತಾಲೂಕಿಗೆ ಉತ್ತಮ ಫಲಿತಾಂಶ ತರಲು ಈಗಿನಿಂದಲೇ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು ಎಂದರು.ಜಿಲ್ಲಾ ರೈತ ಸಂಘದ ಅಧ್ಯಕ್ಷ ಡಾ.ಬಿ.ಕೆ.ವಿನೋದ್ ಕುಮಾರಗೌಡ ಮಾತನಾಡಿ, ವಿದ್ಯಾಥಿಗಳು ಉತ್ತಮವಾಗಿ ಓದಿ ಕಲಿತು ನಿಮ್ಮ ಜ್ಞಾನ ಭಂಡಾರ ಹೆಚ್ಚಿಸಿಕೊಂಡು ದೇಶದ ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಿ ರಾಷ್ಟ್ರ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಅದೇ ನಮಗೆ ತೃಪ್ತಿ ಹಾಗೂ ನಾವು ನಿಮ್ಮಿಂದ ನಿರೀಕ್ಷೆ ಮಾಡುವುದು. ವಿದ್ಯೆ ಅಮೂಲ್ಯ ಸಂಪತ್ತು. ಆ ಸಂಪತ್ತಿನ ಮೂಲಕ ನೀವು ಉನ್ನತ ಸ್ಥಾನಕ್ಕೇರಬೇಕು. ಉತ್ತಮ ಜೀವನ ರೂಪಿಸಿಕೊಳ್ಳಬೆಕು ಎಂದರು.
ಆರಕ್ಷಕ ಉಪ ನಿರಿಕ್ಷಕ ನಾಗೇಶ್ ಮಾತನಾಡಿ, ನಮಗೆ ನಮ್ಮ ಶಾಲಾ ದಿನಗಳಲ್ಲಿ ಯಾವ ಸೌಲಭ್ಯ, ಪ್ರೋತ್ಸಾಹಗಳಿಲ್ಲದೆಯೂ ಶ್ರದ್ದೆಯಿಂದ ಸರ್ಕಾರಿ ಶಾಲೆಯಲ್ಲಿ ಓದಿ ಇಂದು ಜವಾಬ್ದಾರಿಯುತ ಸೇವೆಯಲ್ಲಿರುವುದು ಹೆಮ್ಮೆ ಎನಿಸುತ್ತದೆ. ನೀವೂ ಚೆನ್ನಾಗಿ ಓದಬೇಕು ಎಂದು ಸಲಹೆ ಮಾಡಿದರು.ನಿವೃತ್ತ ತಹಸೀಲ್ದಾರ್ ಪಿ.ಗಂಗಾದರಪ್ಪ ಮಾತನಾಡಿ, ನಾನು ಸಹ ಇದೇ ಶಾಲೆಯ ಹಳೆಯ ವಿದ್ಯಾರ್ಥಿ. ಇನ್ನು ಮುಂದೆ ಈ ಶಾಲೆಯಲ್ಲಿ ೮, ೯ ಮತ್ತು ೧೦ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸುವ ಪ್ರತಿ ಮೂರು ವಿದ್ಯಾರ್ಥಿಗಳಿಗೆ ಒಂದು ಉತ್ತಮ ಬಹುಮಾನ ಕೊಡಿಸುತ್ತೇನೆ. ಅಲ್ಲದೆ ತಾಲೂಕು ಮಟ್ಟದಲ್ಲಿ ಅತೀ ಹೆಚ್ಚು ಅಂಕಗಳಿಸಿದರೆ ನಮ್ಮ ಲಯನ್ಸ್ ಸಂಸ್ಥೆಯಲ್ಲಿಯೂ ನಗದು ಬಹುಮಾನ ಕೊಡಿಸಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ ವಿವಿಧ ಆಟೋಟಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಪಿ.ಗಂಗಾಧರ್, ಪ್ರೌಢಶಾಲಾ ವಿಭಾಗದ ಉಪ್ರಾಂಶುಪಾಲರಾದ ನೀಲಕಂಠ ಗಾಂವಕರ್, ರೈತ ಸಂಘದ ಕಾನೂನು ಸಲಹೆಗಾರ ಮಹದೇವ್ ಸಾಗರ್, ಡಾ.ಕಿರಣ್, ಉಪಪ್ರಾಂಶುಪಾಲ ನೀಲಕಂಠ ಗಾವಂಕರ್, ಸಹಶಿಕ್ಷಕರು ಉಪಸ್ಥಿತರಿದ್ದರು.
೦೬ ದೇವನಹಳ್ಳಿ ಚಿತ್ರಸುದ್ದಿ ೦೨ದೇವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಅನಸೂಯಮ್ಮ ಅವರನ್ನು ತಹಸೀಲ್ದಾರ್ ಅನಿಲ್, ಹಸಿರು ಸೇನೆ ಅಧ್ಯಕ್ಷ ಡಾ.ಬಿ.ಕೆ. ವಿನೊದ ಕುಮಾರಗೌಡ, ಪಿ.ಗಂಗಾಧರ್ ಇತರರು ಸನ್ಮಾನಿಸಿದರು.