ಪ್ರೀತಿಸಿ ಮದುವೆ ಮಾಡಿಕೊಂಡಿದ್ದ ಯುವತಿಯನ್ನು ಗಂಡನ ಮನೆಯಿಂದಲೇ ಆಕೆಯ ಪೋಷಕರು ಹೊತ್ತೊಯ್ದ ಘಟನೆ ಇಲ್ಲಿನ ಭೈರಿದೇವರಕೊಪ್ಪದಲ್ಲಿ ಶನಿವಾರ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಪ್ರೀತಿಸಿ ಮದುವೆ ಮಾಡಿಕೊಂಡಿದ್ದ ಯುವತಿಯನ್ನು ಗಂಡನ ಮನೆಯಿಂದಲೇ ಆಕೆಯ ಪೋಷಕರು ಹೊತ್ತೊಯ್ದ ಘಟನೆ ಇಲ್ಲಿನ ಭೈರಿದೇವರಕೊಪ್ಪದಲ್ಲಿ ಶನಿವಾರ ರಾತ್ರಿ ನಡೆದಿದೆ. ಮದುವೆಯಾದ ಎರಡು ವರ್ಷ ತಂದೆಯ ಮನೆಯಲ್ಲೇ ಇದ್ದ ಯುವತಿ, ಶನಿವಾರ ಗಂಡನನ್ನು ಬಿಟ್ಟಿರದೇ ಪತಿಯ ಮನೆಗೆ ಬಂದಿದ್ದಳು. ಇದು ಗೊತ್ತಾಗಿ ಯುವತಿಯ ಮನೆಯವರು ರಾತ್ರಿಯೇ ಬಂದು ಆಕೆಯನ್ನು ಹೊತ್ತುಕೊಂಡು ಹೋಗಿದ್ದಾರೆ. ಹುಬ್ಬಳ್ಳಿ ಹೊರವಲಯದ ಗ್ರಾಮವೊಂದರ ಯುವಕ ನಿರಂಜನ ಮತ್ತು ಸುಷ್ಮಾ ಪ್ರೀತಿಸುತ್ತಿದ್ದರು. ಎರಡು ವರ್ಷದ ಹಿಂದೆ ಇವರಿಬ್ಬರು ಗದಗದಲ್ಲಿ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದರು. ಆದರೆ, ಯುವತಿಯ ಮನೆಯವರು ಇವರಿಬ್ಬರೂ ಒಂದಾಗಿ ಬದುಕಲು ಬಿಟ್ಟಿರಲ್ಲಿಲ್ಲ. ಅಲ್ಲದೆ ಆಕೆಗೆ ಮತ್ತೊಂದು ಮದುವೆ ಮಾಡಲು ಯತ್ನಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಯುವತಿ ಶನಿವಾರ ತನ್ನ ಗಂಡನ ಮನೆಗೆ ಬಂದಿದ್ದಳು.
ಮಗಳು ಯುವಕನ ಮನೆಗೆ ಹೋಗಿರುವ ಸುದ್ದಿ ತಿಳಿದು ಯುವತಿ ತಂದೆ, ಮಾವಂದಿರು ಒತ್ತಾಯಪೂರ್ವಕವಾಗಿ ಸುಷ್ಮಾಳನ್ನು ಎತ್ತಿಕೊಂಡು ಹೋಗಿದ್ದಾರೆ. ಸುಷ್ಮಾ ತಂಟೆಗೆ ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪತಿ ನಿರಂಜನಗೆ ಧಮಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ನಿರಂಜನ ರಕ್ಷಣೆ ಕೋರಿ ಹುಬ್ಬಳ್ಳಿಯ ನವನಗರ ಪೊಲೀಸರ ಮೋರೆ ಹೋಗಿದ್ದರು. ಸಂಜೆ ವೇಳೆ ಪೊಲೀಸರಿಗೆ ಹೇಳಿಕೆ ನೀಡಿದ ಸುಷ್ಮಾ, ತನ್ನ ತಾಯಿ ಆರೋಗ್ಯ ಸರಿ ಇಲ್ಲದ ಕಾರಣ ಆರೈಕೆ ಮಾಡಲು ಹೋಗಿದ್ದೆ. ಮತ್ತೆ ತನ್ನ ಗಂಡನ ಮನೆಗೆ ಹಿಂದಿರುಗುವುದಾಗಿ ಹೇಳಿಕೆ ನೀಡಿದ್ದಾಳೆ. ಇದು ಕೌಟುಂಬಿಕ ವಿಚಾರವಾಗಿದ್ದು, ಮನೆಯಲ್ಲಿ ಕುಳಿತು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿಕೆ ದಾಖಲಿಸಿದ್ದಾರೆ. ಹೀಗಾಗಿ ಪ್ರಕರಣ ದಾಖಲಾಗಿಲ್ಲ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.