ಹೆತ್ತವರ ಋಣ ತೀರಿಸಲು ಸಾಧ್ಯವಿಲ್ಲ:ಶಾಸಕ ಜೆ.ಟಿ. ಪಾಟೀಲ

KannadaprabhaNewsNetwork | Published : Mar 25, 2025 12:45 AM

ಸಾರಾಂಶ

ಜನ್ಮಭೂಮಿ, ಹೆತ್ತ ತಾಯಿಯ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಸ್ತ್ರೀಯನ್ನು ಭೂಮಿಗೆ ಹೋಲಿಸಲಾಗಿದ್ದು, ಮಹಿಳೆ ಭೂತಾಯಿ ಸ್ವರೂಪಿಣಿಯಾಗಿದ್ದಾಳೆ ಎಂದು ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜನನಿ ಮತ್ತು ಜನ್ಮಭೂಮಿಯ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಸ್ತ್ರೀಯನ್ನು ಭೂಮಿಗೆ ಹೋಲಿಸಲಾಗಿದ್ದು, ಮಹಿಳೆ ಭೂತಾಯಿ ಸ್ವರೂಪಿಣಿಯಾಗಿದ್ದಾಳೆ ಎಂದು ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ. ಪಾಟೀಲ ಹೇಳಿದರು.

ನವನಗರದ ಕಲಾಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಸಮಾರೋಪ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಯಿಗಿಂತ ಬಂದುವಿಲ್ಲ. ಉಪ್ಪಿಗಿಂತ ರುಚಿಯಿಲ್ಲ ಎಂಬ ನಾಣ್ಣುಡಿ ಅನಾದಿಕಾಲದಿಂದಲೂ ಬಂದಿದೆ. ಪ್ರತಿಯೊಬ್ಬ ಹೆಣ್ಣು ಮಗಳು ಅದೆಷ್ಟೇ ತೊಂದರೆ ಬಂದರೂ ತಾಳ್ಮೆಯಿಂದ ನಿರ್ವಹಿಸುತ್ತಾರೆ ಎಂದು ಹೇಳಿದರು.

ಸ್ತ್ರೀ ಕುಟುಂಬ ನಿರ್ವಹಣೆಯಲ್ಲಿ ಯಾವ ಆರ್ಥಿಕ ತಜ್ಞರಿಗಿಂತಲೂ ಕಡಿಮೆ ಇಲ್ಲ. ಅವಿದ್ಯಾವಂತಳಾಗಿದ್ದರೂ ಕುಟುಂಬ ನಿರ್ವಹಣೆಯಲ್ಲಿ ಗಂಡ, ಅತ್ತೆ, ಮಾವ, ಮಕ್ಕಳು ದನಕರುಗಳ ಜೊತೆಗೆ ಕುಟುಂಬದ ಎಲ್ಲ ಸದಸ್ಯರಿಗೆ ಊಟ ಬಡಿಸುವ ಗುರುತರ ಜವಾಬ್ದಾರಿ ವಹಿಸಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಾಳೆ. ಹಿಂದೆ ಮಹಿಳೆಯರಿಗೆ ಅಡಿಗೆ ಮನೆಯೇ ಸೀಮಿತವಾಗಿತ್ತು. ಆದರೆ ಇಂದು ಶೇ.50ರಷ್ಟು ಮೀಸಲಾತಿ ರಾಜಕೀಯ ರಂಗದಲ್ಲಿಯೂ ಕಲ್ಪಿಸಲಾಗಿದೆ. ಅಲ್ಲದೆ ಇಂದು ಸ್ತ್ರೀ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾಳೆ. ಇತ್ತೀಚಿನ ಗಗನಯಾತ್ರಿ ಸುನಿತಾ ವಿಲಿಯಂ ಸಾಧನೆ ಮೆಚ್ಚುವಂತಹದ್ದಾಗಿದೆ. ಅಂತಹ ಅದೇಷ್ಟೋ ಮಹಿಳೆಯರು ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಶೈಕ್ಷಣಿಕ, ಕ್ರೀಡೆ ಮುಂತಾದ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ಹೆಣ್ಣು ಅಬಲೆಯಲ್ಲ ಸಬಲೆಯಾಗಿದ್ದು, ಹೆಣ್ಣು-ಗಂಡಿನ ನಡುವೆ ಶಾರೀರಿಕವಾಗಿ ವ್ಯತ್ಯಾಸ ಇದ್ದರೂ ಸಹ ಮಹಿಳೆ ಮಾತ್ರ ಮಾನಸಿಕವಾಗಿ ಹೆಚ್ಚು ಬಲಿಷ್ಠರಾಗಿರುತ್ತಾಳೆ. ನಮ್ಮ ಮಹಿಳೆಗೆ ನಮ್ಮ ದೇಶದಲ್ಲಿ ಸಿಗುವ ಗೌರವ, ಮಾನ್ಯತೆ ವಿಶ್ವದ ಯಾವ ಮೂಲೆಯಲ್ಲೂ ದೊರಕುವುದಿಲ್ಲ. ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ ಮಹಿಳೆ ನಿಲ್ಲುತ್ತಾಳೆ. ಇಂದು ಹೆಣ್ಣು ಮಕ್ಕಳ ಸಂಖ್ಯೆ ಕಡಿಯಾಗುತ್ತಿರುವುದು ಆತಂಕಕಾರಿಯಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಿಳೆಗೆ ವಿಶಿಷ್ಟ ಸ್ಥಾನ ಕೊಡುವ ನಿಟ್ಟಿನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ರೂಪಿಸಿದ್ದಾರೆ ಎಂದು ಹೇಳಿದರು.

ಮಹಿಳೆಯರಿಗಾಗಿ ಸೈಬರ್ ಸುರಕ್ಷತೆ ಕುರಿತು ಡಿ.ಎಸ್.ಪಿ ಮಂಜುನಾಥ ಗಂಗಲ್, ಮಹಿಳೆಯರಲ್ಲಿ ಮಾನಸಿಕ ಒತ್ತಡ ನಿರ್ವಹಣೆ ಕುರಿತು ಮನೋರೋಗ ತಜ್ಞೆ ಡಾ.ಸೌಮ್ಯ ಎಸ್.ಪಾಟೀಲ ಉಪನ್ಯಾಸ ನೀಡಿದರು. ಸಾಧಕ ಮಹಿಳೆಯರಿಗೆ ಸನ್ಮಾನಿಸಲಾಯಿತು. ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿ ಅಧ್ಯಕ್ಷ ಡಾ.ಎಸ್.ಎಚ್. ತೆಕ್ಕೆನ್ನವರ, ಜಿಪಂ ಮುಖ್ಯ ಯೋಜನಾಧಿಕಾರಿ ಪುನಿತ್ ಆರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಪ್ರಭಾಕರ ಸೇರಿದಂತೆ ಇತರರು ಇದ್ದರು.ಜಿಲ್ಲೆಯ ಸ್ವಸಹಾಯ ಸಂಘಗಳು ಉತ್ತಮವಾಗಿ ಕಾರ್ಯಚಟುವಟಿಕೆ ಮಾಡುವ ಮೂಲಕ ರಾಜ್ಯದಲ್ಲಿ ಹೆಸರು ಮಾಡಿದ್ದಾರೆ. ಇಲಾಖೆಯಿಂದ ಸಾಕಷ್ಟು ತರಬೇತಿಗಳನ್ನು ನೀಡಿ ಅವರ ಆರ್ಥಿಕ ಮಟ್ಟವನ್ನು ಹೆಚ್ಚುವಂತೆ ಮಾಡಲಾಗಿದೆ ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಮಾತನಾಡಿ ಮಗುವಿಗೆ ಮೊಟ್ಟ ಮೊದಲು ನಗು ಕಲಿಸಿಕೊಡು ಮೂಲಕ ಪರಂಪರೆ ಕಲಿಸಿಕೊಡುವಲ್ಲಿ ಮಹಿಳೆಯ ಪಾತ್ರ ಹೆಚ್ಚಿನದ್ದಾಗಿದೆ.

- ಶಶಿಧರ ಕುರೇರ ಜಿಪಂ ಸಿಇಒ

Share this article