ಸಂಸತ್‌ ಚುನಾವಣೆ: ಯಾರ ಕೊರಳಿಗೆ ವಿಜಯಮಾಲೆ?

KannadaprabhaNewsNetwork | Published : Jun 4, 2024 12:31 AM

ಸಾರಾಂಶ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಕ್ಷೇತ್ರದಲ್ಲಿ ಅಭ್ಯರ್ಥಿಗಳು ಮಾತ್ರವಲ್ಲದೆ ಜನರು ಕೂಡ ಸೋಲು - ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದು, ಯಾರ ಕೊರಳಿಗೆ ವಿಜಯಮಾಲೆ ಬೀಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಕ್ಷೇತ್ರದಲ್ಲಿ ಅಭ್ಯರ್ಥಿಗಳು ಮಾತ್ರವಲ್ಲದೆ ಜನರು ಕೂಡ ಸೋಲು - ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದು, ಯಾರ ಕೊರಳಿಗೆ ವಿಜಯಮಾಲೆ ಬೀಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ , ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಸೇರಿದಂತೆ 15 ಮಂದಿಯ ರಾಜಕೀಯ ಭವಿಷ್ಯ ಜೂನ್ 4ರ ಮಧ್ಯಾಹ್ನದ ವೇಳೆಗೆ ನಿರ್ಧಾರವಾಗಲಿದೆ. ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಈಗಾಗಲೇ ಟೆಂಪಲ್ ರನ್ ಆರಂಭಿಸಿದ್ದಾರೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಬದ್ಧ ರಾಜಕೀಯ ಎದುರಾಳಿಗಳಾಗಿದ್ದವು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬದಲಾದ ರಾಜಕೀಯದಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸೇರಿಕೊಂಡಿತು. ಸ್ಥಾನಗಳ ಹಂಚಿಕೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಜೆಪಿ ಪಾಲಾಯಿತು.

ಕಾಂಗ್ರೆಸ್ ಪಕ್ಷದಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಸ್ಪರ್ಧಿಸಿದರೆ, ಈ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯನ್ನಾಗಿ ಬಿಜೆಪಿ ಪಕ್ಷ ಮಾಜಿ ಪ್ರಧಾನಿ ದೇವೇಗೌಡರ ಅಳಿಯರಾದ ನಾರಾಯಣ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ.ಸಿ.ಎನ್ .ಮಂಜುನಾಥ್ ಅವರನ್ನು ಕಣಕ್ಕೆ ಇಳಿಸಿತು.

ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಡಿ.ಕೆ.ಸುರೇಶ್ ಅವರು ಚುನಾವಣೆಗೆ ಒಂದು ವರ್ಷ ಇರುವಂತೆಯೇ ಸಿದ್ಧತೆ ಮಾಡಿಕೊಂಡಿದ್ದರು. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಮಾಡಿದ್ದರು. ಶಾಸಕರ ಬಲ ಮತ್ತು ಗ್ಯಾರಂಟಿಗಳು ತಮ್ಮ ಗೆಲುವಿಗೆ ನೆರವಾಗಲಿದೆ ಎಂಬುದು ಕಾಂಗ್ರೆಸ್ಸಿಗರ ಲೆಕ್ಕಾಚಾರ.

ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ರಾಜಕೀಯಕ್ಕೆ ಹೊಸಬರಾದರು, ಅವರ ಕುಟುಂಬಕ್ಕೆ ರಾಜಕೀಯ ನಂಟಿದೆ. ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಮಂಜುನಾಥ್ ಜೆಡಿಎಸ್‌ನವರಿಗಿಂತ ಹೆಚ್ಚಾಗಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಪಡೆದ ಮತಗಳು ಒಗ್ಗೂಡಿದರೆ ಗೆಲುವು ಕಷ್ಟವೇನಲ್ಲ ಎನ್ನುವುದು ಮೈತ್ರಿ ಪಾಳಯದ ಲೆಕ್ಕಾಚಾರವಾಗಿದೆ. ಇಡೀ ಕ್ಷೇತ್ರದಲ್ಲಿ ಮೈತ್ರಿ ಪ್ರಚಾರ ಯಶಸ್ವಿಯಾಗಿದ್ದು, ಮತದಾರರು ಕೈ ಹಿಡಿಯಲಿದ್ದಾರೆ ಎನ್ನುವ ವಿಶ್ವಾಸ ಉಭಯ ಪಕ್ಷಗಳ ನಾಯಕರದ್ದಾಗಿದೆ.

ದೇಶದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರುವುದಾಗಿ ಸಮೀಕ್ಷೆಗಳು ಹೇಳಿದ್ದು, ಕ್ಷೇತ್ರದಲ್ಲಿಯೂ ಅದೇ ಚಮತ್ಕಾರ ನಡೆಯಬಹುದು ಎಂಬ ವಿಶ್ವಾಸ ಬಿಜೆಪಿ ಕಾರ್ಯಕರ್ತರದ್ದು. ಕ್ಷೇತ್ರದಲ್ಲಿ ನಗರ ಮತದಾರರೇ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಮೋದಿ ಅಲೆ ಕೆಲಸ ಮಾಡಿದೆ. ಯುವಜನರು ಬಿಜೆಪಿ ಬೆಂಬಲಿಸಿರಬಹುದು ಎಂಬ ನಂಬಿಕೆಯಲ್ಲಿ ಕಮಲ ಪಾಳಯ ಗೆಲುವಿನ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿದೆ.

ಕಮಲ ಪಾಳಯವು ನಗರ ಮತದಾರರನ್ನು ಬಹುವಾಗಿ ನೆಚ್ಚಿಕೊಂಡಿತ್ತು. ಆದರೆ, ಬೆಂಗಳೂರು ನಗರ ವ್ಯಾಪ್ತಿಯ ಮೂರು ಕ್ಷೇತ್ರಗಳಾದ ರಾಜರಾಜೇಶ್ವರಿ ನಗರ, ಆನೇಕಲ್ ಹಾಗೂ ಬೆಂಗಳೂರು ದಕ್ಷಿಣದಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿದೆ. ಆ ಮತಗಳು ಯಾರ ಪಾಲಾಗಿವೆ ಎಂಬುದು ಬಿಜೆಪಿ ಮತ್ತು ಕಾಂಗ್ರೆಸ್ ನವರನ್ನು ಚಿಂತೆಗೀಡು ಮಾಡಿದೆ.

ಜಾತಿ ಲೆಕ್ಕಾಚಾರವೂ ಜೋರು :

ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೂ ಮುನ್ನವೇ ಜಾತಿ ಲೆಕ್ಕಾಚಾರ ಜೋರಾಗಿತ್ತು. ಇನ್ನು ಮತದಾನದ ನಂತರ ಇದು ಇನ್ನಷ್ಟು ಹೆಚ್ಚಾಯಿತು. ಯಾವ ಸಮುದಾಯದ ಮತಗಳು ಯಾರಿಗೆ ಬಂದಿವೆ. ಯಾವ ಜಾತಿಯ ಮುಖಂಡ ಯಾರ ಪರವಾಗಿ ಕೆಲಸ ಮಾಡಿದ್ದಾರೆ ಎಂದು ರಾಜಕೀಯ ನಾಯಕರು ಮಾಹಿತಿ ಸಂಗ್ರಹಿಸುವುದರಲ್ಲಿ ತೊಡಗಿದ್ದರು.

ಚುನಾವಣಾ ಕಣದಲ್ಲಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಹೀಗಾಗಿ ಒಕ್ಕಲಿಗ ಸಮುದಾಯದ ಮತಗಳು ಚದುರಿ ಹೋಗಿರುವ ಸಾಧ್ಯತೆಗಳಿವೆ ಎಂಬುದು ಬಹಳಷ್ಟು ಜನರ ಅಭಿಪ್ರಾಯ. ಆದರೆ, ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯ ಜೆಡಿಎಸ್ ಪಕ್ಷವನ್ನೇ ಹೆಚ್ಚು ಬೆಂಬಲಿಸುತ್ತಾ ಬಂದಿರುವ ಉದಾಹರಣೆಗಳಿವೆ. ಹೀಗಾಗಿ ಆ ಮತಗಳು ಸೇರಿ ಲಿಂಗಾಯತರು, ಬ್ರಾಹ್ಮಣ ಸಮುದಾಯದ ಹೆಚ್ಚಿನ ಮತಗಳು ಬಿಜೆಪಿ ಹಾಗೂ ಗ್ಯಾರಂಟಿ ಯೋಜನೆಯ ಫಲಾನುಭವಿ ಮಹಿಳೆಯರು, ಅಹಿಂದ ವರ್ಗದವರು ಹೆಚ್ಚಾಗಿ ಕಾಂಗ್ರೆಸ್ ನ್ನು ಬೆಂಬಲಿಸಿರುವ ಸಾಧ್ಯತೆಗಳಿವೆ ಎಂಬ ಲೆಕ್ಕಾಚಾರಗಳು ನಡೆದಿವೆ. ಫಲಿತಾಂಶ ಯಾವ ಸಮುದಾಯ ಯಾರನ್ನು ಬೆಂಬಲಿಸಿದೆ ಎಂಬುದು ಖಾತ್ರಿಯಾಗಲಿದೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಮತ್ತು ಬಿಜೆಪಿ - ಜೆಡಿಎಸ್ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಅವರ ನಡುವೆ ನೇರ ಹಣಾಹಣಿ ನಡೆದಿದೆ. ಚುನಾವಣಾ ಫಲಿತಾಂಶ ಉಭಯ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಬಾಕ್ಸ್ ...............

ಅಭ್ಯರ್ಥಿಗಳ ಜತೆಗೆ ಬಾಜಿದಾರರ ಭವಿಷ್ಯವೂ ನಿರ್ಧಾರ ! :

ಚುನಾವಣಾ ಫಲಿತಾಂಶ ಅಭ್ಯರ್ಥಿಗಳು ಮಾತ್ರವಲ್ಲದೆ ಬಾಜಿದಾರರ ಭವಿಷ್ಯವನ್ನು ನಿರ್ಧಾರ ಮಾಡಲಿದೆ. ರಾಜಕೀಯ ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದರೆ ತನ್ನ ಅಭ್ಯರ್ಥಿ ಪರವಾಗಿ ಬೆಟ್ಟಿಂಗ್ ಕಟ್ಟಿರುವ ಬಾಜಿದಾರರು ಫಲಿತಾಂಶ ಏನಾಗುತ್ತದೆಯೊ ಎಂಬ ಆತಂಕದಲ್ಲಿದ್ದಾರೆ.

ಚುನಾವಣಾ ಫಲಿತಾಂಶ, ಗೆಲುವಿನ ಅಂತರಗಳ ಮೇಲೆಯು ಬೆಟ್ಟಿಂಗ್ ದಂಧೆ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕಿಂತಲ್ಲೂ ನೆರೆಯ ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಬೆಟ್ಟಿಂಗ್ ದಂಧೆ ಹೆಚ್ಚಾಗಿ ನಡೆಯುತ್ತಿದೆ.

3ಕೆಆರ್ ಎಂಎನ್ 1,2.ಜೆಪಿಜಿ

1.ಕಾಂಗ್ರೆಸ್ ಡಿ.ಕೆ.ಸುರೇಶ್.

2.ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್.

Share this article