ಕೊಪ್ಪಳ: ದೇಶದ ಸಂವಿಧಾನ ಅಪಾಯದಲ್ಲಿದೆ. ಉಳ್ಳವರು ಶೋಷಿತರ ಮೇಲೆ ನಿರಂತರ ದಬ್ಬಾಳಿಕೆ ನಡೆಸುವ ಮೂಲಕ ಅವರ ಧ್ವನಿ ಹತ್ತಿಕ್ಕುವ ಹುನ್ನಾರ ನಡೆದಿದೆ. ಈ ನಿಟ್ಟಿನಲ್ಲಿ ಎಲ್ಲ ಶೋಷಿತ ಸಮುದಾಯಗಳು ಒಗ್ಗೂಡಿ ನಮ್ಮ ಹಕ್ಕನ್ನು ಪಡೆಯಬೇಕಾಗಿದೆ ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಹೇಳಿದರು.ನಗರದ ಕಾಳಿದಾಸ ಸಮುದಾಯ ಭವನದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡ ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.ಅವಕಾಶ ವಂಚಿತ ಜಾತಿಗಳಿಗೆ ಮೀಸಲಾತಿ ನೀಡಿ, ಸಾಮಾಜಿಕ ಸಮಾನತೆ ಸಾರಿದ ಪುಣ್ಯ ಭೂಮಿ ನಮ್ಮದು. ಹಲವು ವರ್ಗಗಳ ಆಯೋಗಗಳು ವೈಜ್ಞಾನಿಕ ಅಧ್ಯಯನ ನಡೆಸಿ ಮೀಸಲಾತಿ ಜಾರಿಗೊಳಿಸಿವೆ. ಆದರೆ, ಬಲಾಢ್ಯರು ಮಾತ್ರ ಶೋಷಿತರ ಹಕ್ಕನ್ನು ಕಬಳಿಸುತ್ತಿರುವುದು ಶೋಚನೀಯವಾಗಿದೆ. ದೇಶದಲ್ಲಿರುವ ಉಳ್ಳವರು ಶೋಷಿತರ ಮೇಲೆ ದಬ್ಬಾಳಿಕೆ ನಡೆಸುವ ಮೂಲಕ ಅನ್ಯಾಯ ಎಸಗಲಾಗುತ್ತಿದೆ. ಇಷ್ಟಾದರೂ ದೇಶದ ಪ್ರಧಾನಿ ಶೋಷಿತರ ಪರವಾಗಿ ನಿಲ್ಲದಿರುವುದು ದುರದುಷ್ಟಕರ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಜಿಪಂ ಮಾಜಿ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ ಮಾತನಾಡಿ, ಜ.28ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಶೋಷಿತರ ಜಾಗೃತಿ ಸಮಾವೇಶ ದೇಶದ ಇತಿಹಾಸದ ಪುಟಗಳಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಶೋಷಿತರ, ಹಿಂದುಳಿದವರ ಬದುಕು ಹಸನವಾಗಬೇಕಾದರೇ ಎಚ್.ಕಾಂತರಾಜ್ ಆಯೋಗದ ವರದಿ ಅನುಷ್ಠಾನ ತುಂಬ ಅವಶ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ, ನಮ್ಮ ಹಕ್ಕು ಪಡೆಯೋಣ ಎಂದರು.ಹಾಲವರ್ತಿಯ ಜಡೇಶ್ವರ ಮಠದ ಶಿವಸಿದ್ದೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.ಮಾಜಿ ಶಾಸಕ ಬಸವರಾಜ ಹಿಟ್ನಾಳ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕುರುಬ ಸಂಘದ ರಾಜ್ಯಾಧ್ಯಕ್ಷ ಎಂ.ಈರಣ್ಣ, ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ಅನಂತ್ ನಾಯಕ, ಆದರ್ಶ ಯಲ್ಲಪ್ಪ, ಕುರುಬ ಸಂಘದ ಖಂಜಾಚಿ ಕೃಷ್ಣಮೂರ್ತಿ, ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ಟಿ. ರತ್ನಾಕರ, ಯಮನೂರಪ್ಪ ಗೊರ್ಲೇಕೊಪ್ಪ, ಪರಶುರಾಮಪ್ಪ ಹರಪನಹಳ್ಳಿ, ನೀಲಕಂಠಪ್ಪ ಬಡಿಗೇರ, ಭರಮಪ್ಪ ನಗರ, ವೀರಣ್ಣ ಬಳೂಟಗಿ, ಸುಬ್ರರಾಜ್, ಶ್ಯಾಮಿದ್ ಮನಿಯಾರ್, ಕಳಕಪ್ಪ ಕಂಬಳಿ, ಕುರುಬ ಯುವ ಘಟಕದ ರಾಜ್ಯಾಧ್ಯಕ್ಷ ಭಗವಂತ ರಾಯ ಪಾಟೀಲ್, ರಾಮಕೃಪ್ಪ ಬೆಂಗಳೂರು ಸೇರಿದಂತೆ ಇತರರಿದ್ದರು.