ಕನ್ನಡಪ್ರಭ ವಾರ್ತೆ ಪಾವಗಡ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿ ವಿರುದ್ಧ ಸಿಡಿದೆದ್ದ ನೂರಾರು ಸಂಖ್ಯೆಯ ಸಿಐಟಿಯು ಕಾರ್ಯಕರ್ತರು ಸರ್ಕಾರ ಧೋರಣೆಯನ್ನು ಖಂಡಿಸಿದರು. ಬೆಳಿಗ್ಗೆ 11ಗಂಟೆಗೆ ಪಟ್ಟಣದ ನಿರೀಕ್ಷಣಾ ಮಂದಿರದಿಂದ ಬಳ್ಳಾರಿ ರಸ್ತೆ ಮೂಲಕ ಜಾಥ ತೆರಳಿ ಶನಿಮಹಾತ್ಮ ವೃತ್ತದ ಬಳಿ ಮಾನವ ಸರಪಳಿಯನ್ನು ನಿರ್ಮಿಸಿ ಸರ್ಕಾರಗಳ ವಿರುದ್ಧ ಘೋಷಣೆ ಮೊಳಗಿಸಿದರು.
ಬಳಿಕ ಅಲ್ಲಿಂದ ವಾಪಸ್ಸಾಗಿ ತಹಸಿಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಿದರು.ಇದೇ ವೇಳೆ ಅಂಗನವಾಡಿ ಕಾರ್ಯಕರ್ತರ ಸಂಘದ ತಾಲೂಕು ಅಧ್ಯಕ್ಷ ಸುಶೀಲಮ್ಮ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಎಲ್ಲ ತಾಲೂಕುಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2018ರಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತಹ ಆಶ್ವಾಸನೆ ಇದುವರೆಗೂ ಈಡೇರಿಸಿಲ್ಲ. ಇದರಿಂದ ಕೆಳಹಂತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಹಮಾಲಿ ಕಾರ್ಮಿಕರು, ಬಿಸಿಯೂಟ ನೌಕರರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಕಾರ್ಮಿಕರು ಹೋರಾಟ ಮಾಡುವಂತಹ ಹಕ್ಕನ್ನು ಸಹ ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಕೇಂದ್ರ ಸರ್ಕಾರ ಎಲೆಕ್ಷನ್ ಸಮಯದಲ್ಲಿ ಗಿಮಿಕ್ ಮಾಡುತ್ತದೆ. ರೈತರು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದು, ಸರ್ಕಾರ ಅವರ ಬಗ್ಗೆ ಗಮನ ಹರಿಸುತ್ತಿಲ್ಲ. ಇದೇ ರೀತಿ ಎಪಿಎಂಸಿಯಲ್ಲಿ ಇರುವ ಹಮಾಲಿಗಳಿಗೆ ಕೆಲಸವಿಲ್ಲ. ಅವರಿಗೆ ತಮ್ಮ ಕಲ್ಯಾಣ ನಿಧಿಯಲ್ಲಿ ಇರುವಂತಹ ಹಣ ಹಾಗೂ ವಿಶೇಷ ಯೋಜನೆಗಳನ್ನು ರೂಪಿಸಿ ಫಲಾನುಭವಿಗಳಿಗೆ ಕಲ್ಯಾಣ ನಿಧಿ ದೊರಕಿಸುವಂತೆ ಸರ್ಕಾರ ಕ್ರಮ ವಹಿಸಬೇಕು ಎಂದರು.
ಸಮಾಜ ಸೇವಕ ಕಿರ್ಲಾಲಹಳ್ಳಿ ಈರಣ್ಣ, ಸಿಐಟಿಯು ಕಾರ್ಯದರ್ಶಿ ಶಿವಗಂಗಮ್ಮ, ಕಾರ್ಮಿಕ ಸಂಘಟನೆಯ ರಾಮಕೃಷ್ಣ, ರಾಮಾಂಜಿನಪ್ಪ, ನಾಗರಾಜಪ್ಪ ಹಾಗೂ ಇತರೆ ಆನೇಕ ಮಂದಿ ಅಂಗನವಾಡಿ, ಹಮಾಲಿ ಹಾಗೂ ಇತರೆ ಕಾರ್ಮಿಕ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.