ಪವಿತ್ರಗೆ ರಾಷ್ಟ್ರೀಯ ವಿಶೇಷಚೇತನರ ಸಬಲೀಕರಣ ಪ್ರಶಸ್ತಿ

KannadaprabhaNewsNetwork |  
Published : Dec 10, 2025, 12:15 AM IST
1.ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಪವಿತ್ರ ವೈ. ಸುಂದರೇಶನ್ ಅವರಿಗೆ ರಾಷ್ಟ್ರೀಯ ವಿಶೇಷಚೇತನರ ಸಬಲೀಕರಣ ಪ್ರಶಸ್ತಿ ಪ್ರದಾನ ಮಾಡಿದರು. | Kannada Prabha

ಸಾರಾಂಶ

ರಾಮನಗರ: ವಿಶೇಷ ಚೇತನರು ಕಾರ್ಪೊರೇಟ್ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗವನ್ನು ಊಹಿಸುವುದು ಅಸಾಧ್ಯ. ಆದರೆ, ಇಲ್ಲೊಬ್ಬ ಮಹಿಳೆ ವಿಶೇಷ ಚೇತನರಿಗಾಗಿಯೇ ಬೆಂಗಳೂರಿನಲ್ಲಿ ಐಟಿ-ಬಿಪಿಒ ಕಂಪನಿ ತೆರೆದು ಉದ್ಯೋಗದಾತೆ ಆಗಿರುವುದು ಮಾತ್ರವಲ್ಲದೆ ಅವರ ಬಾಳಿನ ಬೆಳಕಾಗಿದ್ದಾರೆ. ಈ ಅದಮ್ಯ ಸೇವೆಯನ್ನು ಪರಿಗಣಿಸಿ ಅವರಿಗೆ ಭಾರತ ಸರ್ಕಾರ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

ರಾಮನಗರ: ವಿಶೇಷ ಚೇತನರು ಕಾರ್ಪೊರೇಟ್ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗವನ್ನು ಊಹಿಸುವುದು ಅಸಾಧ್ಯ. ಆದರೆ, ಇಲ್ಲೊಬ್ಬ ಮಹಿಳೆ ವಿಶೇಷ ಚೇತನರಿಗಾಗಿಯೇ ಬೆಂಗಳೂರಿನಲ್ಲಿ ಐಟಿ-ಬಿಪಿಒ ಕಂಪನಿ ತೆರೆದು ಉದ್ಯೋಗದಾತೆ ಆಗಿರುವುದು ಮಾತ್ರವಲ್ಲದೆ ಅವರ ಬಾಳಿನ ಬೆಳಕಾಗಿದ್ದಾರೆ. ಈ ಅದಮ್ಯ ಸೇವೆಯನ್ನು ಪರಿಗಣಿಸಿ ಅವರಿಗೆ ಭಾರತ ಸರ್ಕಾರ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

ಆ ಮಹಿಳೆ ಹೆಸರು ಪವಿತ್ರ ವೈ. ಸುಂದರೇಶನ್. ಐಟಿ ಮತ್ತು ಬಿಪಿಒ ವಲಯದಲ್ಲಿ ಪ್ರಸಿದ್ಧಿ ಪಡೆದಿರುವ ವಿಂದ್ಯಾ ಇ-ಇನ್ಫೋ ಮೀಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ. ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕು ಬಿಡದಿ ನಿವಾಸಿ.

ವಿಶೇಷ ಚೇತನರಿಗೆ ಉದ್ಯೋಗ ನೀಡಿ ಕ್ರಾಂತಿಕಾರಿ ಸಾಧನೆ ಮಾಡಿದ ಪವಿತ್ರ ವೈ.ಸುಂದರೇಶನ್ ಅವರ ಗುರುತರ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ 2025ನೇ ಸಾಲಿನ ರಾಷ್ಟ್ರೀಯ ವಿಶೇಷಚೇತನರ ಸಬಲೀಕರಣ ಪ್ರಶಸ್ತಿ ನೀಡಿ ಗೌರವಿಸಿರುವುದು ನಾಡಿಗೆ ಹೆಮ್ಮೆ ತರಿಸಿದೆ.

ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ದಿವ್ಯಾಂಗ ಸಬಲೀಕರಣ ಇಲಾಖೆ (ಡಿಸೆಂಬರ್ 3) ನವದೆಹಲಿಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಶೇಷಚೇತನರ ದಿನಾಚರಣೆ ಸಮಾರಂಭದಲ್ಲಿ ಸ್ವತಃ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಪವಿತ್ರ ವೈ. ಸುಂದರೇಶನ್ ಅವರಿಗೆ ರಾಷ್ಟ್ರೀಯ ವಿಶೇಷಚೇತನರ ಸಬಲೀಕರಣ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದಾರೆ.

ಯಾರಿದು ಪವಿತ್ರ ವೈ.ಸುಂದರೇಶನ್ ? :

ಇವರು ಮೂಲತಃ ಬೆಂಗಳೂರಿನವರು. ವಾಣಿಜ್ಯ ಪದವೀಧರೆ. ಅವರ ಪತಿ ಅಶೋಕ್ ಗಿರಿ ಐಟಿ ವಲಯದವರು. ಈ ದಂಪತಿ ತಮ್ಮ ಪರಿಣತಿಯನ್ನು ಒಟ್ಟುಗೂಡಿಸಿ ಉದ್ಯಮ ಸ್ಥಾಪಿಸಲು ನಿರ್ಧರಿಸಿದರು. ಅದೇ ಸಮಯದಲ್ಲಿ ಸಂಭವಿಸಿದ ಘಟನೆಯೊಂದು ದಂಪತಿಯ ಉದ್ಯಮದ ಸ್ವರೂಪ ಬದಲಾಯಿಸಿತು.

ಈ ದಂಪತಿ ಕಣ್ಣಿಗೆ ವಿಶೇಷಚೇತನ ಯುವಕನೊಬ್ಬ ರಸ್ತೆ ದಾಟುತ್ತಿರುವುದನ್ನು ಗಮನಿಸಿದರು. ಆಗ ಪವಿತ್ರ ಅವರ ಆಲೋಚನೆಯ ದಿಕ್ಕೇ ಬದಲಾಗಿ ವಿಂದ್ಯಾ ಇ-ಇನ್ಫೋಮೀಡಿಯಾ ಎಂಬ ಸಂಸ್ಥೆಯ ಹುಟ್ಟಿಗೆ ಕಾರಣವಾಯಿತು.

ಐಟಿ ಬಿಟಿ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಐಟಿ ಮತ್ತು ಬಿಪಿಒ ಕಂಪನಿಗಳಲ್ಲಿ ಉದ್ಯೋಗವನ್ನು ಗೌರವಿಸುವ ಮತ್ತು ಅದರಲ್ಲಿ ಮುಂದುವರೆಯುವ ಆಸಕ್ತಿ ಉಳ್ಳ ವಿಶೇಷ ಚೇತನರನ್ನು ಏಕೆ ನೇಮಿಸಿಕೊಳ್ಳಬಾರದು. ಆ ಮೂಲಕ ಅವರನ್ನು ಮುಖ್ಯವಾಹಿನಿಗೆ ಕರೆತರುವ ಕೆಲಸ ಮಾಡಬಹುದಲ್ಲ ಎಂಬ ಆಲೋಚನೆ ಪವಿತ್ರ ಅವರಲ್ಲಿ ಹೊಳೆಯಿತು.

ವಿಶೇಷ ಚೇತನರ ಪಾಲಿನ ಆಶಾಕಿರಣ :

ಅದರಂತೆ 2006ರ ಜೂನ್ ತಿಂಗಳಲ್ಲಿ ವಿಂದ್ಯಾ ಇ - ಇನ್ಫೋಮೀಡಿಯಾ ಪ್ರೈ.ಲಿ. ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಕೇವಲ ಮೂರು ಜನರಿಂದ ಆರಂಭವಾದ ಈ ಕಂಪನಿಯಲ್ಲಿ ಇಂದು ಸುಮಾರು 3 ಸಾವಿರ ಮಂದಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಶೇಕಡ 60ರಷ್ಟು ಮಂದಿ ದೃಷ್ಟಿ ಹೀನತೆ, ಶ್ರವಣದೋಷ, ದೈಹಿಕ ಅಂಗವೈಕಲ್ಯ, ಆಸಿಡ್ ದಾಳಿಗೆ ತುತ್ತಾದಂತಹ ದಿವ್ಯಾಂಗ ಜನರೇ ಹೆಚ್ಚಿದ್ದಾರೆ. ಇಷ್ಟೇ ಅಲ್ಲದೆ, ತೃತೀಯ ಲಿಂಗಿಗಳು, ಏಕ ಪೋಷಕರ ಮಕ್ಕಳು ಕಂಪನಿಯ ಉದ್ಯೋಗಿಗಳು. ಇಲ್ಲಿ ಅಂಗವಿಕಲರಿಗೆ ವಿಶೇಷ ತರಬೇತಿ ನೀಡಿ ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತದ್ದೆ. ಅಲ್ಲದೆ, ಅವರಿಗೆ ಆಕರ್ಷಕ ವೇತನವನ್ನೂ ನೀಡಲಾಗುತ್ತಿದೆ.

ಕಾಲ್‌ ಸೆಂಟರ್‌ಗಳ ನಿರ್ವಹಣೆ, ಡೇಟಾ ಎಂಟ್ರಿ, ಡೇಟಾ ಮ್ಯಾನೇಜ್‌ಮೆಂಟ್‌ ಕಾರ್ಯಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನಿರ್ವಹಿಸುತ್ತಿರುವ ವಿಂದ್ಯಾ ಕಂಪನಿಗೆ ಗ್ರಾಹಕರು ಒಮ್ಮೆ ಬಂದರೆ ಸಾಕು, ಇಲ್ಲಿನ ಗುಣಮಟ್ಟ, ಕಾರ್ಯದಕ್ಷತೆ ಮತ್ತು ಬದ್ಧತೆ ನೋಡಿ ಕಾಯಂ ಗ್ರಾಹಕರಾಗಿ ಸೇವೆಗಳನ್ನು ಪಡೆದುಕೊಳ್ಳುತ್ತಾರೆ.

ಬೆಂಗಳೂರಿನಲ್ಲಿ ವಿಂದ್ಯಾ ಕಂಪನಿ ಎತ್ತರಕ್ಕೆ ಬೆಳೆಯುತ್ತಿದ್ದಂತೆ ತನ್ನ ಪಯಣವನ್ನು ಪಕ್ಕದ ರಾಜ್ಯಗಳಿಗೂ ವಿಸ್ತರಿಸಿದೆ. ತಮಿಳುನಾಡಿನ ಕೃಷ್ಣಗಿರಿ, ತೆಲಂಗಾಣದ ಹೈದರಾಬಾದ್‌, ಮಹಾರಾಷ್ಟ್ರದ ಮುಂಬೈ, ನಾಗಪುರದಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆ, ಸಿಬ್ಬಂದಿ ಸಂಖ್ಯೆ ಹೆಚ್ಚುತ್ತಿದೆ.

ದಿವ್ಯಾಂಗರ ಜನರಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದು. ವೃತ್ತಿಪರ ತರಬೇತಿ ನೀಡಿ ಆತ್ಮವಿಶ್ವಾಸ ತುಂಬುವ, ಸೂಕ್ತ ಮಾರ್ಗದರ್ಶನದ ಮೂಲಕ ಅವರ ಕೌಶಲಗಳನ್ನು ಹೆಚ್ಚಿಸಿ, ಕೆಲಸಕ್ಕೆ ಅಣಿಗೊಳಿಸುತ್ತಿರುವ ವಿಂದ್ಯಾ ಇ ಇನ್ಫೋಮೀಡಿಯಾ ಕಂಪನಿ ವಿಶೇಷಚೇತನರು, ಮಹಿಳೆಯರು, ಆರ್ಥಿಕ ದುರ್ಬಲರ ಪಾಲಿಗೆ ಆಶಾಕಿರಣವಾಗಿ ಬೆಳೆದಿದೆ.

ಕೋಟ್ ..........

ವಿಶೇಷಚೇತನರ ಶೈಕ್ಷಣಿಕ ಅರ್ಹತೆ, ಪ್ರತಿಭೆ, ಸಾಮರ್ಥ್ಯಕ್ಕೆ ಅನುಗುಣವಾಗಿ ಸೂಕ್ತ ಉದ್ಯೋಗ ನೀಡುವವರು ಇಲ್ಲ. ಎಲ್ಲ ಅರ್ಹತೆ ಇದ್ದರೂ ಅಂಗವೈಕಲ್ಯದ ಕಾರಣ ಕೆಲಸ ಕೊಡದೆ ತಿರಸ್ಕರಿಸುವವರೇ ಹೆಚ್ಚು. ಆದರೆ, ವಿಂದ್ಯಾ ಇ - ಇನ್ಫೋಮೀಡಿಯಾ ಕಂಪನಿ ಮೂಲಕ ವಿಶೇಷಚೇತನರಿಗೆ ಉದ್ಯೋಗಾವಕಾಶ ಕಲ್ಪಿಸಿರುವ ಪವಿತ್ರ ವೈ.ಸುಂದರೇಶನ್ ಕಾರ್ಯ ವೈಖರಿ ಇತರರಿಗೆ ಮಾದರಿಯಾಗಿದೆ. ಇಂತಹ ಮಹಿಳೆ ನಮ್ಮೊಂದಿಗೆ ಇರುವುದು ಹೆಮ್ಮೆಯ ವಿಚಾರ.

- ವರದರಾಜುಗೌಡ, ಮಾಜಿ ಅಧ್ಯಕ್ಷರು, ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರ.

ಕೋಟ್ ................

ವಿಂದ್ಯಾ ನನ್ನ ಹಿರಿಯ ಮಗಳ ಹೆಸರು. ವಿಂದ್ಯಾ ಇ - ಇನ್ಫೋ ಮೀಡಿಯಾ ಪ್ರೈವೆಟ್ ಲಿಮಿಟೆಡ್ ನನ್ನ ಎರಡನೇ ಮಗಳು. ತನುಶ್ರೀ ಮೂರನೇ ಮಗಳು. ನನ್ನಿಬ್ಬರು ಮಕ್ಕಳಂತೆ ಕಂಪನಿಗೂ ಪೋಷಣೆ ಮತ್ತು ಪ್ರೀತಿ ಬೇಕು. ಸಾಮಾನ್ಯರಂತೆ ಮತ್ತು ಅವರಿಗಿಂತ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬಲ್ಲರು ಎಂಬುದನ್ನು ವಿಶೇಷಚೇತನರು ತೋರಿಸಿ ಕೊಟ್ಟಿದ್ದಾರೆ. ದಿವ್ಯಾಂಗಜನರು ನಮ್ಮನ್ನು ಬೇರೆಯವರಂತೆ ನೋಡದೆ ತಮ್ಮಲ್ಲೊಬ್ಬರೆಂದು ಭಾವಿಸಿರುವುದು ಖುಷಿಯ ವಿಚಾರ. ಭಾರತ ಸರ್ಕಾರ ನನಗೆ ನೀಡಿರುವ ರಾಷ್ಟ್ರೀಯ ಪ್ರಶಸ್ತಿ ದಿವ್ಯಾಂಗಜನರಿಗೆ ಅರ್ಪಿಸುತ್ತೇನೆ.

- ಪವಿತ್ರ ವೈ.ಸುಂದರೇಶನ್ , ವ್ಯವಸ್ಥಾಪಕ ನಿರ್ದೇಶಕಿ, ವಿಂದ್ಯಾ ಇ - ಇನ್ಫೋಮೀಡಿಯಾ ಪ್ರೈ.ಲಿ.

9ಕೆಆರ್ ಎಂಎನ್ 1,2.ಜೆಪಿಜಿ

1.ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಪವಿತ್ರ ವೈ. ಸುಂದರೇಶನ್ ಅವರಿಗೆ ರಾಷ್ಟ್ರೀಯ ವಿಶೇಷಚೇತನರ ಸಬಲೀಕರಣ ಪ್ರಶಸ್ತಿ ಪ್ರದಾನ ಮಾಡಿದರು.

2.ರಾಷ್ಟ್ರೀಯ ವಿಶೇಷಚೇತನರ ಸಬಲೀಕರಣ ಪ್ರಶಸ್ತಿ ಪುರಸ್ಕೃತೆ ಪವಿತ್ರ ವೈ.ಸುಂದರೇಶನ್ ಅವರನ್ನು ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ವರದರಾಜುಗೌಡ ಅಭಿನಂದಿಸಿದರು. ಕಂಪನಿ ಸಿಇಒ ಅಶೋಕ್ ಗಿರಿ, ನಿವೃತ್ತ ಅಧಿಕಾರಿ ಅಶ್ವತ್ಥರಾಮ್ , ಮುಖಂಡ ಶರತ್ ಕೆಂಪಣ್ಣ ಇದ್ದರು.

---------------------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ