ರಾಣಿಬೆನ್ನೂರು: ಸಾರ್ವಜನಿಕರು ಸಕಾಲಕ್ಕೆ ಆದಾಯ ತೆರಿಗೆ ಪಾವತಿ ಮಾಡುವ ಮೂಲಕ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕೈಜೋಡಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಡಿ.ಎಸ್. ಕಾರ್ತಿಕ್ ತಿಳಿಸಿದರು.ನಗರದ ಸ್ಟೇಷನ್ ರಸ್ತೆ ವರ್ತಕರ ಸಮುದಾಯ ಭವನದಲ್ಲಿ ಶುಕ್ರವಾರ ಹಾವೇರಿ ಆದಾಯ ತೆರಿಗೆ ಇಲಾಖೆ ವತಿಯಿಂದ ಆಯೋಜಿಸಿದ್ದ ಆದಾಯ ತೆರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಬ್ಬ ವ್ಯಕ್ತಿ, ಸಂಘ, ಸಂಸ್ಥೆ, ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರ, ಹಿಂದೂ ಅವಿಭಕ್ತ ಕುಟುಂಬವಾಗಿದ್ದರೂ ಪ್ರತಿ ಹಣಕಾಸು ವರ್ಷದ ಆದಾಯವನ್ನು ಆದಾಯ ತೆರಿಗೆ ಕಾನೂನುಗಳಿಂದ ವಿಧಿಸಲಾಗುತ್ತದೆ ಎಂದರು. ಆದಾಯ ತೆರಿಗೆ ಅಧಿಕಾರಿ ನಾರಾಯಣ ಪಿ. ಮಾತನಾಡಿ, ಸರ್ಕಾರದ ನಿಯಮಾವಳಿ ಪ್ರಕಾರ ನಿಗದಿಪಡಿಸಿದ ಆದಾಯ ಹೊಂದಿದವರು ಪ್ರತಿವರ್ಷ ತೆರಿಗೆ ರಿಟರ್ನ್ ಸಲ್ಲಿಸಬೇಕು. ಕಾಲಕಾಲಕ್ಕೆ ಇಲಾಖೆಗೆ ವಿವಿಧ ಆದಾಯ ಮೂಲಗಳ ಮಾಹಿತಿ ಲಭಿಸುತ್ತದೆ. ಆದ್ದರಿಂದ ಇಲಾಖೆ ಯಿಂದ ನೋಟಿಸ್ ಬರುವ ಮುನ್ನವೇ ರಿಟರ್ನ್ ಸಲ್ಲಿಸಬೇಕು. ಇ ಮೇಲ್ ವಿಳಾಸಕ್ಕೆ ನೋಟಿಸ್ ಕಳುಹಿಸಲಾಗುತ್ತದೆ. ನೋಟಿಸ್ ಬಂದ ಕೂಡಲೇ ಇಲಾಖೆಗೆ ತೆರಿಗೆ ರಿಟರ್ನ್ ಸಲ್ಲಿಸಬೇಕು ಎಂದರು.ವರ್ತಕರ ಸಂಘದ ಅಧ್ಯಕ್ಷ ಚನ್ನಬಸವರಾಜ ಕುರವತ್ತಿ, ಉಮೇಶ ಹೊನ್ನಾಳಿ, ವೀರೇಶ ಮೋಟಗಿ, ಪ್ರಕಾಶ ಮೂರಶಿಳ್ಳಿನ, ಕಾಶಿನಾಥ ಪವಾರ ಮತ್ತಿತರರಿದ್ದರು. ಮಣ್ಣಿನ ಸತ್ವ ಕಾಪಾಡಲು ಸಾವಯವವೇ ಉತ್ತಮ: ಶಿವಕುಮಾರ ಹಿರೇಮಠಹಾನಗಲ್ಲ: ಕೃಷಿ ಭೂಮಿಯ ಮಣ್ಣನ್ನು ಸತ್ವಯುತವಾಗಿ ಉಳಿಸಲು ಸಾವಯವವೇ ಸರಿಯಾದ ದಾರಿಯಾಗಿದ್ದು, ಇದರಿಂದ ಆರೋಗ್ಯಕ್ಕೆ ಸಹಕಾರಿಯಾಗುವ ಆಹಾರ ಉತ್ಪಾದನೆ, ಉತ್ತಮ ಇಳುವರಿ, ಆರ್ಥಿಕ ಲಾಭವೂ ಸಾಧ್ಯ ಎಂದು ಕೃಷಿ ತಜ್ಞ ಶಿವಕುಮಾರ ಹಿರೇಮಠ ತಿಳಿಸಿದರು.ಇಲ್ಲಿನ ಲೋಯಲಾ ವಿಕಾಸ ಕೇಂದ್ರದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ತರಬೇತಿ ಕಾರ್ಯಾಗಾರದಲ್ಲಿ ಮಾಹಿತಿ ಮಾರ್ಗದರ್ಶನ ನೀಡಿದ ಅವರು, ಮಣ್ಣು ನೀರು ನಮ್ಮ ಸಂಪತ್ತು. ಇದನ್ನು ಸದುಪಯೋಗ ಮಾಡಿಕೊಳ್ಳುವ ಇಚ್ಛಾಶಕ್ತಿ ನಮ್ಮದಾಗಬೇಕು. ಅತಿಯಾಗಿ ರಾಸಾಯನಿಕಗಳನ್ನು ಬಳಸಿ ಈಗಾಗಲೇ ಭೂಮಿಯನ್ನು ಹಾಳು ಮಾಡಿಕೊಂಡಿದ್ದೇವೆ. ಈಗಲಾದರೂ ಎಚ್ಚೆತ್ತು ನಮ್ಮ ಭೂಮಿ ನಮ್ಮ ನೀರು ನಮಗಾಗಿ ಎಂಬ ಸತ್ಯವನ್ನು ಅರಿಯೋಣ ಎಂದರು.ಸಂಸ್ಥೆಯ ನಿರ್ದೇಶಕ ವಿನ್ಸೆಂಟ್ ಜೇಸನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಲೊಯೋಲಾ ವಿಕಾಸ ಕೇಂದ್ರ ಸಂಸ್ಥೆಯ ಮುಖಾಂತರ ಮಣ್ಣಿನ ಸಂರಕ್ಷಣೆ ಕುರಿತು ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಯುವಪೀಳಿಗೆಗೆ ಈ ಶಿಕ್ಷಣದ ಅಗತ್ಯವಿದೆ. ಪ್ರತಿ ಮನೆಗಳು ನೀರು ಹಾಗೂ ಭೂಮಿ ಉಳಿಸುವ ಕಾರ್ಯದಲ್ಲಿ ಭಾಗಿಯಾಗಬೇಕು. ಕೃಷಿಗಾಗಿ ಬೇಕಾದ ಬೀಜಗಳನ್ನು ಸಿದ್ಧಪಡಿಸಿಕೊಳ್ಳುವುದನ್ನು ನಿಲ್ಲಿಸಿ, ಯಾವುದೋ ಕಂಪನಿಗಳ ಮೇಲೆ ಅವಲಂಬಿತರಾಗಿದ್ದೇವೆ. ಈಗಲಾದರೂ ಬೀಜ ಕಣಜ ಯೋಚನೆ ಯೋಜನೆ ಮಾಡಿ ಕೃಷಿಗೆ ನಾವೇ ಬೀಜಗಳನ್ನು ಹಿಡಿದಿಟ್ಟುಕೊಳ್ಳುವುದು ಅತ್ಯಂತ ಉಚಿತ ಎಂದರು.