ಗದಗ: ರೋಣ ತಾಲೂಕಿನ ಅಸೂಟಿ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಡಿಒ ಮುಕ್ತುಮ್ ಹುಸೇನ ಅವರ ಆತ್ಮಹತ್ಯೆ ಪ್ರಕರಣವನ್ನು ಸಮಗ್ರ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಸದಸ್ಯರು ಹಾಗೂ ಆರ್ಡಿಪಿಆರ್ ವೃಂದ ಸಂಘಗಳ ಪದಾಧಿಕಾರಿಗಳಿಂದ ಅಪರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ತಕ್ಷಣ ನ್ಯಾಯ ಒದಗಿಸಿ ಸಮರ್ಪಕ ಪರಿಹಾರಧನ ನೀಡಬೇಕು. ಜತೆಗೆ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವ ಮೂಲಕ ಆರ್ಥಿಕ ಭದ್ರತೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಪಿಡಿಒಗಳ ಮೇಲೆ ಇರುವ ಅತಿಯಾದ ಕೆಲಸದ ಒತ್ತಡವನ್ನು ಕಡಿಮೆ ಮಾಡುವ ಕ್ರಮಗಳನ್ನು ಸರ್ಕಾರ ಜಾರಿಗೆ ತರಬೇಕು. ಕೆಲಸದ ಸಮಯ, ಹೊಣೆಗಾರಿಕೆ ಹಾಗೂ ಆಡಳಿತಾತ್ಮಕ ನಿಯಮಗಳಿಗೆ ಸ್ಪಷ್ಟ ಮಾರ್ಗಸೂಚಿ ರೂಪಿಸಬೇಕು. ಜತೆಗೆ ಪಿಡಿಒಗಳಿಗೆ ಭದ್ರತೆ ಹಾಗೂ ಮಾನಸಿಕ ಬೆಂಬಲ ವ್ಯವಸ್ಥೆ ಕಲ್ಪಿಸಬೇಕು.ಮೇಲಧಿಕಾರಿಗಳ ಅನಾವಶ್ಯಕ ಹಸ್ತಕ್ಷೇಪ ನಿಯಂತ್ರಿಸಿ ಪಿಡಿಒಗಳಿಗೆ ಸೇವಾ ಸ್ವಾಯತ್ತತೆ ನೀಡುವ ಮೂಲಕ ಉತ್ತಮ ವಾತಾವರಣ ನಿರ್ಮಿಸಬೇಕು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಿಡಿಒಗಳ ಸೇವಾ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.