ಕೊಪ್ಪಳ:
ಹಿಂದೂ ಧರ್ಮದಲ್ಲಿ ಆಚಾರ-ವಿಚಾರ ಹೇಗಿರಬೇಕು, ದಿನನಿತ್ಯದ ಜೀವನದಲ್ಲಿ ನೆಮ್ಮದಿ ಮತ್ತು ಮುಕ್ತಿ ಹೇಗೆ ಕಾಣಬೇಕು ಎನ್ನುವುದಕ್ಕೆ ಶಂಕರಾಚಾರ್ಯರ ತತ್ವಾದರ್ಶ ದಾರಿ ದೀಪವಾಗಿವೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.ನಗರದ ಕೋಟೆ ಹತ್ತಿರದ ಶ್ರೀಶಂಕರ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಆಯಶ್ರದಲ್ಲಿ ಹಮ್ಮಿಕೊಂಡಿದ್ದ ಶ್ರೀಶಂಕರಾಚಾರ್ಯರ ಜಯಂತಿ ಉದ್ಘಾಟಿಸಿ ಮಾತನಾಡಿದರು.
ನಾವು ಶಂಕರಾಚಾರ್ಯರ ಬಗ್ಗೆ ಎಷ್ಟು ತಿಳಿದುಕೊಳ್ಳುತ್ತೇವೋ ಅಷ್ಟು ಭಗವಂತನ ಹತ್ತಿರ ಹೋಗಲು ಸಾಧ್ಯವಾಗುತ್ತದೆ. ಅಷ್ಟೊಂದು ಮಾರ್ಗದರ್ಶನ ನೀಡಿರುವಂತಹ ದಾರ್ಶನಿಕರು ಅವರಾಗಿದ್ದಾರೆ ಎಂದ ಅವರು, ಇಂದು ಈ ಜಯಂತಿ ಕಾರ್ಯಕ್ರಮ ಆಚರಣೆಗೆ ಮಾತ್ರ ಸೀಮಿತವಾಗದೆ ಅವರ ಆದರ್ಶಗಳ ಪ್ರಚಾರದ ಕಾರ್ಯಕ್ರಮವಾಗಬೇಕು ಎಂದರು.ಎಲ್ಲ ಧರ್ಮಗಳು ಒಳಿತನ್ನೇ ಹೇಳಿವೆ. ಆದರೆ, ಹಿಂದೂ ಧರ್ಮದಲ್ಲಿ ಸಂಬಂಧಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ತಂದೆ, ತಾಯಿ, ಮಕ್ಕಳ ಸಂಬಂಧ, ಸಂಸ್ಕಾರ-ಶಿಕ್ಷಣ ಹೇಗಿರಬೇಕು ಎಂಬುದು ಹಿಂದೂ ಧರ್ಮದಲ್ಲಿದ್ದು ಹೀಗಾಗಿ ಜಗತ್ತಿನ ಎಲ್ಲರೂ ಪ್ರೀತಿಸುತ್ತಾರೆ ಎಂದು ಹೇಳಿದರು.
ಜಗತ್ತು ವೇಗವಾಗಿ ಬೆಳೆಯುತ್ತಿದ್ದು, ವಿವಿಧ ಧರ್ಮಗಳು ಬದಲಾವಣೆ ಹೊಂದಿವೆ. ಆದರೆ, ಹಿಂದೂ ಧರ್ಮದ ಆಚಾರ-ವಿಚಾರ, ಭಜನೆ, ಪ್ರಾರ್ಥನೆ, ಧಾರ್ಮಿಕ ಕಾರ್ಯಗಳು ಇಂದಿಗೂ ಆಚರಣೆಯಲ್ಲಿವೆ. ಮುಂದೆಯೂ ಸಹ ಶಂಕರಾಚಾರ್ಯರ ಆದರ್ಶ ಉಳಿಸಿ-ಬೆಳೆಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.ನಿವೃತ್ತಿ ಸಂಸ್ಕೃತ ಪ್ರಾಧ್ಯಾಪಕ ವಿದ್ಯಾನಾಥ ಶಾಸ್ತ್ರೀ, ಶ್ರೀಶಂಕರಾಚಾರ್ಯರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೋಟ್ರೇಶ ಮರಬನಲಳ್ಳಿ, ಡಿ.ವಿ. ಜೋಶಿ, ರವಿ ಪುರೋಹಿತ, ರಮೇಶ ಕೆ., ಅಶೋಕ ವಿ., ಕೃಷ್ಣ ವಿ., ವೆಂಕಟೇಶ ವಿ., ಸುರೇಶ ಪಿ.ನಾಡಿಗಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.