ಉಡುಪಿ: ಇಂದು ರಾಮಮಂದಿರ ನಿರ್ಮಾಣವಾಗಿದೆ. ಮುಂದೆ ರಾಮ ರಾಜ್ಯ ನಿರ್ಮಾಣವಾಗಬೇಕಾಗಿದೆ, ಸನಾತನ ಧರ್ಮಕ್ಕೆ ಆಂತರಿಕವಾಗಿ ಬಹಿರಂಗವಾಗಿ ಬಗೆಯಬಗೆಯ ಸವಾಲುಗಳು ಎದುರಾಗುತ್ತಿವೆ. ಆದರೆ ಎಂದಿಗೂ ನಮ್ಮ ಒಗ್ಗಟ್ಟನ್ನು ಬಿಡದೇ ಸವಾಲುಗಳನ್ನು ಎದುರಿಸಬೇಕು. ಮೈಮನಸ್ಸುಬುದ್ಧಿ, ಪ್ರತೀ ಮನೆ, ಬಡಾವಣೆ. ಊರುಕೇರಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದೂ ರಾಮರಾಜ್ಯದ ಭಾಗವೇ ಆಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಅಭಿಪ್ರಾಯಪಟ್ಟಿದ್ದಾರೆ.
ದಲಿತರ ಕಾಲೋನಿಗೆ ಶ್ರೀಗಳು: ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು, ಇಲ್ಲಿನ ರೋಹಿಣಿ ಕ್ಷೇತ್ರದ ಸೆಕ್ಟರ್ 4 ರಲ್ಲಿ 300ಕ್ಕೂ ಅಧಿಕ ಮಂದಿ ವಾಸಿಸುವ ದಲಿತರ ಬಡಾವಣೆಗ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ಶ್ರೀಗಳನ್ನು ಬಡಾವಣೆಯ ರಸ್ತೆಗಳಲ್ಲಿ ಹೂವಿನ ಮಳೆಗೆರೆದು, ರಂಗೋಲಿಯಿಂದ ಅಲಂಕರಿಸಿ ಭಕ್ತಿಯಿಂದ ಸ್ವಾಗತಿಸಿದರು. ವಿಶ್ವ ಹಿಂದು ಪರಿಷತ್ ಮತ್ತು ಸೇವಾಭಾರತಿಯ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು. ಮುಂದಿನ ಮೂರು ಭಾನುವಾರಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ಮನೆಗಳಿಗೆ ಭೇಟಿ ನೀಡಿದ ಶ್ರೀಗಳನ್ನು ಮನೆಮಂದಿ ಅವರ ಕಾಲಿಗೆ ನೀರೆರೆದು ಆರತಿ ಬೆಳಗಿ ಮಾಲಾರ್ಪಣೆಗೈದು ಭಕ್ತಿಯಿಂದ ಬರಮಾಡಿಕೊಂಡರು. ಶ್ರೀಗಳು ಈ ಮನೆಗಳಲ್ಲಿ ಮಠದ ವತಿಯಿಂದಲೇ ಒದಗಿಸಿದ ಶ್ರೀರಾಮ ಹಾಗೂ ಉಡುಪಿ ಕೃಷ್ಣನ ಫೋಟೋಗಳಿಗೆ ದೀಪಗಳನ್ನು ಬೆಳಗಿದರು. ಬಳಿಕ ಮನೆಯ ಪ್ರತಿಯೊಬ್ವರ ಹೆಸರು ಉದ್ಯೋಗ ಶಿಕ್ಷಣ ಇತ್ಯಾದಿಗಳನ್ನು ಕೇಳಿ , ಉಭಯಕುಶಲೋಪರಿ ನಡೆಸಿದರು. ಮನೆಮಂದಿಗೆ ಹತ್ತು ಬಾರಿ ರಾಮಮಂತ್ರವನ್ನು ಉಪದೇಶಿಸಿ, ಪ್ರಸಾದ ನೀಡಿ ಆಶೀರ್ವದಿಸಿದರು. ನಿತ್ಯ ರಾಮಕೃಷ್ಣರ ಮಂತ್ರ ಜಪಿಸುವಂತೆ ಸೂಚಿಸಿದರು. ಸ್ಥಳೀಯ ಶಾಸಕ ಕುಲವಂತ ರಾಣಾ ಅವರಲ್ಲಿ ಬಡಾವಣೆಯ ಸ್ವಚ್ಛತೆ, ಮೂಲಭೂತ ಸೌಕರ್ಯಗಳ ನವೀಕರಣ ತುಂಬ ಹಳೆಯದಾಗಿರುವ ಮನೆಗಳನ್ನು ಕಾರ್ಪೊರೇಟ್ ಕಂಪೆನಿಗಳ ಸಹಾಯವನ್ನಾದರೂ ಪಡೆದು ದುರಸ್ತಿಗೊಳಿಸಿಕೊಡುವಂತೆ ಸಲಹೆ ಮಾಡಿದರು.ಸ್ಥಳೀಯ ವಿಹಿಂಪ ಮತ್ತು ಸೇವಾಭಾರತಿಯ ಮುಖಂಡರು ಕಾರ್ಯಕರ್ತರು ವ್ಯವಸ್ಥೆಯಲ್ಲಿ ಸಹಕರಿಸಿದರು. ಮಠದ ವತಿಯಿಂದ ಎಲ್ಲರಿಗೂ ರಾಮಕೃಷ್ಣರ ಫೋಟೋ, ಸಿಹಿತಿಂಡಿಯುಳ್ಳ ಪ್ರಸಾದದ ಕಿಟ್ ನ್ನು ಸ್ವಾಮೀಜಿ ವಿತರಿಸಿದರು.