ಪೆನ್‌ಡ್ರೈವ್ ಕೇಸ್, ಎಸ್‌ಐಟಿ ಪ್ರಕರಣಗಳ ವಿಚಾರಣೆ ದಿನ ನ್ಯಾಯಾಲಯ ಸ್ಥಳಾಂತರಕ್ಕೆ ಒಪ್ಪಿಗೆ

KannadaprabhaNewsNetwork |  
Published : May 10, 2024, 01:33 AM IST
ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಕಾನೂನು ಸಚಿವ ಎಚ್.ಕೆ.ಪಾಟೀಲ ಮಾತನಾಡಿದರು.  | Kannada Prabha

ಸಾರಾಂಶ

ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಪ್ರಕರಣಗಳು ದಾಖಲಾಗಿವೆ. 42 ಎಸಿಎಂಎಂ ಹಾಗೂ ಸಿಟಿ ಸಿವಿಲ್‌ ಆ್ಯಂಡ್‌ ಸೆಷನ್ಸ್‌ ಜಡ್ಜ್‌ 81 (82) ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ.

ಗದಗ:

ಹಾಸನ ಜಿಲ್ಲೆಯಲ್ಲಿ ನಡೆದಿರುವ ಲೈಂಗಿಕ ಪ್ರಕರಣದ ಪೆನ್‌ಡ್ರೈವ್ ಪ್ರಕರಣದ ವಿಚಾರಣೆಯ ದಿನ ಮಾತ್ರ ಆ ನ್ಯಾಯಾಲಯವನ್ನು ಗುರುನಾನಕ್‌ ಭವನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲು ಕಾನೂನು ಇಲಾಖೆ ಒಪ್ಪಿದ್ದು, ಈ ವಿಷಯವಾಗಿ ರಾಜ್ಯದ ಉಚ್ಚ ನ್ಯಾಯಾಲಯದ ರಿಜಿಸ್ಟಾರ್ ಜನರಲ್‌ಗೆ ಪತ್ರ ಬರೆಯಲಾಗಿದೆ ಎಂದು ಕಾನೂನು, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಪ್ರಕರಣಗಳು ದಾಖಲಾಗಿವೆ. 42 ಎಸಿಎಂಎಂ ಹಾಗೂ ಸಿಟಿ ಸಿವಿಲ್‌ ಆ್ಯಂಡ್‌ ಸೆಷನ್ಸ್‌ ಜಡ್ಜ್‌ 81 (82) ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆಗಾಗಿ ದೂರುದಾರರು, ಸಂತ್ರಸ್ತೆಯರು ಆಗಮಿಸುವುದು ಸಾಮಾನ್ಯ. ಆದರೆ ಪ್ರಸ್ತುತ ನಡೆಯುತ್ತಿರುವ ನ್ಯಾಯಾಲಯ ಆವರಣದಲ್ಲಿ ಬೇರೆ ಬೇರೆ ನ್ಯಾಯಾಲಯಗಳಿರುವ ಹಿನ್ನೆಲೆಯಲ್ಲಿ ಸಾಕ್ಷಿದಾರರಿಗೆ ರಕ್ಷಣೆ ಒದಗಿಸುವುದು ಮತ್ತು ಅವರ ಗೌಪ್ಯತೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆಗಳ ಪ್ರಕರಣ ವಿಚಾರಣೆಗಳ ದಿನಗಳಂದು ಮಾತ್ರ ಈ ನ್ಯಾಯಾಲಯಗಳನ್ನು ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಪ್ರಾರಂಭಿಸಲಾಗಿದ್ದ ಗುರುನಾನಕ್‌ ಭವನದಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರಿಸುವ ಬಗ್ಗೆ ನಮ್ಮ ಇಲಾಖೆ ಅನುಮೋದನೆ ನೀಡಿದೆ.

ಈ ಎರಡೂ ನ್ಯಾಯಾಲಯಗಳು ಸಿವಿಲ್‌ ಕೋರ್ಟ್‌ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆರೋಪಿಗಳ ಪರ ಬಾತ್ಮೀದಾರರು, ಮಾಧ್ಯಮದವರು ಹಾಗೂ ಸಾರ್ವಜನಿಕರು ಸಹ ನ್ಯಾಯಾಲಯಗಳಲ್ಲಿ ನಿರಾತಂಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವುದರಿಂದ ಪೆನ್‌ಡ್ರೈವ್ ಪ್ರಕರಣಗಳ ವಿಚಾರಣೆ ಸಮಯದೊಳಗೆ ಗೌಪ್ಯತೆ ಕಾಪಾಡಲು ಕಷ್ಟವಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದರು. ಹಾಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದರು.

ಸ್ಯಾಂ ಪಿತ್ರೋಡಾ ಅವರ ಹೇಳಿಕೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ತಕ್ಷಣವೇ ದೇಶದ ಜನರ ಕ್ಷಮೆ ಕೇಳಬೇಕು, ಭಾರತದ ವೈವಿಧ್ಯತೆಯಿಂದ ಕೂಡಿದ ದೇಶವಾಗಿದೆ. ಸುಧಾರಿತರು, ಸುಸಂಸ್ಕೃತರು ಎನಿಸಿಕೊಂಡ ಬುದ್ಧಿಜೀವಿಗಳು ಕೆಲವೊಮ್ಮೆ ಬಣ್ಣದ ಮೇಲೆ ಜನಾಂಗ ಪ್ರತ್ಯೇಕಿಸುವುದನ್ನು ಯಾರೂ ಸಹಿಸುವುದಿಲ್ಲ. ಹೋಲಿಕೆ ಮಾಡುವ ಜತೆಗೆ ಆಫ್ರಿಕನ್‌ರನ್ನು ನೋಡುವ ಅವರ ಮನಸ್ಥಿತಿ ಕೂಡಾ ತಪ್ಪಿದೆ. ಕೂಡಲೇ ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಮತ್ತು ದೇಶದ ಜನರ ಕ್ಷಮೆ ಕೇಳಬೇಕು ಎಂದರು.

ರಾಹುಲ್ ಗಾಂಧಿ ಕಳೆದೊಂದು ವಾರದಿಂದ ಅದಾನಿ, ಅಂಬಾನಿ ಅ‍ವರ ಬಗ್ಗೆ ಟೀಕೆ ಮಾಡುತ್ತಿಲ್ಲ, ಏನಾದರೂ ಸಂದಾಯವಾಗಿದೆಯೇ? ಎನ್ನುವ ಪ್ರಧಾನಿ ಮೋದಿ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಅವರು, ಕಾಂಗ್ರೆಸ್‌ ಟೆಂಪೊಗಟ್ಟಲೆ ಕಪ್ಪು ಹಣ ಪಡೆದಿದೆಯೇ ಎಂದು ಪ್ರಶ್ನಿಸುವ ಪ್ರಧಾನ ಮಂತ್ರಿಗಳು, ದೇಶದ ಜನರ ಮುಂದೆ ನಾಟಕವಾಡುವುದನ್ನು ಬಿಡಬೇಕು. ಅವರು ಈ ಕ್ಷಣದ ವರೆಗೆ ಪ್ರಧಾನಿಯಾಗಿದ್ದಾರೆ. ಅವರು ಮಾಡಿದ ಆರೋಪಕ್ಕೆ ಸಾಕ್ಷಿ, ಪುರಾವೆಗಳು ಇದ್ದಲ್ಲಿ ಹಣ ಕೊಟ್ಟವರನ್ನು ತಕ್ಷಣ ಬಂಧಿಸಿ, ಜೈಲಿಗಟ್ಟಲಿ. ಅವರನ್ನು ತಡೆಯುವವರು ಯಾರು? ದೇಶದ ಹಲವಾರು ಭಾಗಗಳಲ್ಲಿ ಇಡಿ, ಸಿಬಿಐ ದಾಳಿ ಮಾಡಿಸುತ್ತೀರಿ, ನಿಮಗೆ ಗೊತ್ತಿದ್ದರೂ ಯಾಕೆ ಸುಮ್ಮನಿದ್ದೀರಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಎಸ್.ಎನ್. ಬಳ್ಳಾರಿ, ಗುರಣ್ಣ ಬಳಗಾನೂರ, ವಾಸಪ್ಪ ಕುರುಡಗಿ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಬಸವರಾಜ ಕಡೇಮನಿ, ಉಮರ್ ಫಾರೂಕ್ ಹುಬ್ಬಳ್ಳಿ ಮುಂತಾದವರು ಹಾಜರಿದ್ದರು. ಗದಗ ಜಿಲ್ಲೆಯಲ್ಲಿ ಅತ್ಯಂತ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದಕ್ಕೆ ಸಹಕರಿಸಿ ಜಿಲ್ಲೆಯ ಜನತೆಗೂ, ಶ್ರಮಿಸಿದ ಅಧಿಕಾರಿಗಳಿಗೂ ಅಭಿನಂದನೆಗಳು, ಕಳೆದ ಬಾರಿಗಿಂತಲೂ ಮತದಾನದಲ್ಲಿಯೂ ಹೆಚ್ಚಳವಾಗಿದ್ದು, ಸಂತೋಷದ ಸಂಗತಿ. ಜನರು ಮತದಾನ ಬಗ್ಗೆ ಹೆಚ್ಚಿನ ಅರಿವು ಹೊಂದುತ್ತಿದ್ದಾರೆ ಎನ್ನುವುದಕ್ಕೆ ಲೋಕಸಭಾ ಚುನಾವಣೆಯ ಮತದಾನವೇ ಸಾಕ್ಷಿಯಾಗಿದೆ ಎಂದು ಎಚ್.ಕೆ. ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಬೈನಿಂದ ಊಟಿಯವರೆಗೆ ಸೈಕಲ್ ಪ್ರವಾಸ
ಸಾಹೇಬ್ರ ನೀರ್ ಬರದಿದ್ರ ನಾವ್ ಬರ್ಬಾದಾಗ್ತೇವ್ರಿ: ರೈತರ ಅಳಲು