)
ಸಿದ್ದು ಚಿಕ್ಕಬಳ್ಳೇಕೆರೆ
ಸಾಮಾಜಿಕ ಭದ್ರತಾ ಯೋಜನೆಯಡಿ ರಾಜ್ಯದಲ್ಲಿ 18 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಪಾವತಿಯಾಗುತ್ತಿದ್ದ ಪಿಂಚಣಿ ಸ್ಥಗಿತಗೊಳಿಸಿದ್ದು, ಯಾವ ಕಾರಣಕ್ಕಾಗಿ ಹಣ ಪಾವತಿಯಾಗುತ್ತಿಲ್ಲ ಎಂದು ನಿರ್ದಿಷ್ಟವಾಗಿ ತಿಳಿಯದೆ ಜನ ಪರದಾಡುತ್ತಿದ್ದಾರೆ.
ಪಿಂಚಣಿ ಸ್ಥಗಿತದ ಬಗ್ಗೆ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಮೆಸೇಜ್ ಕಳುಹಿಸಿದ್ದರೂ ಬಹಳಷ್ಟು ಜನರಿಗೆ ಇದರ ಅರಿವೇ ಇಲ್ಲ. ತಳಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಗ್ರಾಮ ಆಡಳಿತಾಧಿಕಾರಿಗಳು(ವಿಎ) ಪಿಂಚಣಿ ಸ್ಥಗಿತವಾಗಿರುವ ಪ್ರತಿ ಫಲಾನುಭವಿಗೂ ನೋಟಿಸ್(ತಿಳಿವಳಿಕೆ) ನೀಡಿ ಸೂಕ್ತ ದಾಖಲೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಬೇಕು. ವಿಪರ್ಯಾಸವೆಂದರೆ ಫಲಾನುಭವಿಗೆ ಯಾವ ನಿರ್ದಿಷ್ಟ ಕಾರಣಕ್ಕಾಗಿ ಪಿಂಚಣಿ ಸ್ಥಗಿತವಾಗಿದೆ ಎಂಬ ಸಮಗ್ರ ಮಾಹಿತಿಯೇ ವಿಎಗಳ ಬಳಿ ಇಲ್ಲ.ಮತ್ತೊಂದೆಡೆ, ಹೋಬಳಿ ಮಟ್ಟದಲ್ಲಿರುವ ನಾಡ ಕಚೇರಿಗಳಲ್ಲೂ ಈ ಬಗ್ಗೆ ಪರಿಶೀಲನೆ ನಡೆಸುವ ಅವಕಾಶ ಇಲ್ಲದಂತಾಗಿದೆ. ಇದರಿಂದಾಗಿ ಫಲಾನುಭವಿಗಳು ದೂರದ ತಾಲೂಕು ಕೇಂದ್ರಕ್ಕೆ ತೆರಳಿ ತಾಲೂಕು ಕಚೇರಿಗಳಲ್ಲೇ ಈ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ. ಪಂಚಾಯ್ತಿವಾರು ಸಂದೇಹಾಸ್ಪದ ಪ್ರಕರಣಗಳ ಬಗ್ಗೆ ವಿಎಗಳಿಗೆ ಪಟ್ಟಿ ನೀಡಲಾಗಿದೆ. ಆದರೆ, ಇಂತಹ ನಿರ್ದಿಷ್ಟ ಕಾರಣಕ್ಕಾಗಿಯೇ ಪಿಂಚಣಿ ಸ್ಥಗಿತವಾಗಿದೆ ಎಂಬ ಮಾಹಿತಿ ನೀಡಿಲ್ಲ.
ಕೆಲ ಗ್ರಾಮ ಆಡಳಿತಾಧಿಕಾರಿಗಳು ‘ಆದಾಯ ದೃಢೀಕರಣ, ಪಡಿತರ ಚೀಟಿ, ಆಧಾರ್ ಮತ್ತಿತರ ದಾಖಲೆಗಳನ್ನು ಸಲ್ಲಿಸಬೇಕು’ ಎಂದು ಮುಗುಮ್ಮಾಗಿ ಹೇಳುತ್ತಿದ್ದಾರೆ. ಮತ್ತೆ ಕೆಲವೆಡೆ, ಫಲಾನುಭವಿಗಳೇ ತಾಲೂಕು ಕಚೇರಿಗಳಿಗೆ ತೆರಳಿ, ಯಾವ ಕಾರಣಕ್ಕಾಗಿ ಪಿಂಚಣಿ ಸ್ಥಗಿತವಾಗಿದೆ ಎಂಬುದನ್ನು ಪರಿಶೀಲನೆ ಮಾಡಿಸಿಕೊಂಡು ಬಂದು ಗ್ರಾಮ ಆಡಳಿತಾಧಿಕಾರಿಗಳಿಗೆ ತಿಳಿಸಿದಾಗ ಅದರಂತೆ ನೋಟಿಸ್ ನೀಡಲಾಗುತ್ತಿದೆ.
-ಬಾಕ್ಸ್-
ನೀಡದೆ ‘ವಿಎ’ಗಳಿಂದ ವಿಳಂಬ
-ಬಾಕ್ಸ್-
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಕಾರ್ಯದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ತೊಡಗಿರುವುದರಿಂದ ಪಿಂಚಣಿ ಸ್ಥಗಿತದ ಬಗ್ಗೆ ಫಲಾನುಭವಿಗಳಿಗೆ ನೋಟಿಸ್ ನೀಡಲು ಹಿನ್ನಡೆ ಉಂಟಾಗುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.