ಬ್ಯಾಡಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗೂ ಅಭಿವೃದ್ಧಿ ಶೂನ್ಯದಿಂದ ಜನ ತೀವ್ರ ಬೇಸತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳು, ಜನವಿರೋಧಿ ನೀತಿ ಅನುಸರಿಸುತ್ತಿದ್ದು, ಆಡಳಿತ ವ್ಯವಸ್ಥೆ ಸಂಪೂರ್ಣ ದಿವಾಳಿಯಾಗಿದೆ. ಅಭಿವೃದ್ಧಿಗೆ ಶೂನ್ಯ ಹಣ ಬಿಡುಗಡೆಯಾಗುತ್ತಿದೆ. ರಸ್ತೆಗಳಲ್ಲಿ ದೊಡ್ಡ ಪ್ರಮಾಣದ ತಗ್ಗುಗುಂಡಿಗಳು ಬಿದ್ದಿವೆ. ಇದರಿಂದ ಎಲ್ಲೆಡೆ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿದೆ. ಕಳೆದ 2.5 ವರ್ಷದ ಕಾಂಗ್ರೆಸ್ ಅವಧಿಯಲ್ಲಿ ಜಿಲ್ಲೆ ಹಾಗೂ ತಾಲೂಕಿನಾದ್ಯಂತ ಅಭಿವೃದ್ಧಿ ಹಿನ್ನೆಡೆಯಾಗಿದೆ. ಸರ್ಕಾರದ ಬೊಕ್ಕಸದಲ್ಲಿ ಹಣ ಖಾಲಿಯಾಗಿದ್ದು,ಆರ್ಥಿಕವಾಗಿ ಅಭಿವೃದ್ಧಿ ಕಡೆಗಣಿಸಿದೆ. ಪಟ್ಟಣದ ಮುಖ್ಯರಸ್ತೆ ಸೇರಿದಂತೆ ತಾಲೂಕಿನ ಎಲ್ಲೆಡೆ ಗುಂಡಿಗಳು ವಿಪರೀತವಾಗಿವೆ. ಬ್ಯಾಡಗಿ ತಿಳವಳ್ಳಿ, ಹಂಸಭಾವಿ ಹಾಗೂ ರಾಣಿಬೆನ್ನೂರು ಕಡೆಗೆ ತೆರಳುವ ರಸ್ತೆಗಳು ಕಿತ್ತುಹೋದರೂ ದುರಸ್ತಿಗೊಂಡಿ ತಿರುಗಿ ನೋಡಿಲ್ಲ ಎಂದು ಆರೋಪಿಸಿದರು.
ರೈತ ಸಮುದಾಯ, ಕಾರ್ಮಿಕರು, ನೌಕರರು ಸೇರಿದಂತೆ ಸಮಸ್ತ ನಾಗರಿಕರು ಸರ್ಕಾರದ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಜನಾದೇಶವನ್ನು ಧಿಕ್ಕರಿಸಿದ ಮುಖ್ಯಮಂತ್ರಿಗಳು ಕಾನೂನು ಪಾಲನೆಗೆ ಒತ್ತು ನೀಡುತ್ತಿಲ್ಲ. ಅಧಿಕಾರದ ಲಾಲಸೆಯಿಂದ ಸಮುದಾಯ ತುಷ್ಟೀಕರಣ ನಡೆದಿದೆ. ಮತ್ತೊಮ್ಮೆ ಜನ ಅಧಿಕಾರ ನೀಡುವುದಿಲ್ಲವೆಂಬ ಖಾತ್ರಿಯಾಗಿದೆ. ಜನ ಕಾಂಗ್ರೆಸ್ ಸರ್ಕಾರವನ್ನು ಕ್ಷಮಿಸುವುದಿಲ್ಲವೆಂದರು.ಪ್ರತಿಭಟನೆಗೆ ಸೇರಿದ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮುಖ್ಯರಸ್ತೆಯ ತಡೆ ನಡೆಸಿದರು.