ಡೆಂಘೀ ನಿಯಂತ್ರಣಕ್ಕೆ ಜನರು ಕೈಜೋಡಿಸಿ: ಡಾ.ವಿನಯ್

KannadaprabhaNewsNetwork |  
Published : May 18, 2024, 01:33 AM IST
ಫೋಟೊ:೧೭ಕೆಪಿಸೊರಬ-೦೧ : ಸೊರಬ ಪಟ್ಟಣದ ಪುರಸಭೆ ಮುಂಭಾಗದಲ್ಲಿ ರಾಷ್ಟೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಟಿಎಚ್‌ಒ ಡಾ. ವಿನಯ್ ಪಾಟೀಲ್ ಚಾಲನೆ ನೀಡಿದರು. | Kannada Prabha

ಸಾರಾಂಶ

ಡೆಂಘೀ ಹರಡುವುದು ತಡೆಯಲು ಸರ್ಕಾರ ಡೆಂಘೀ ದಿನ ಜಾರಿಗೆ ತಂದಿದ್ದು, ಇದರಿಂದ ಜನರಿಗೆ ಡೆಂಘೀ ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುವ ಜೊತೆಗೆ ನೆರವಾಗುತ್ತದೆ. ಜನತೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಉಪಯೋಗಿಸದ ತೊಟ್ಟಿ, ಮಡಿಕೆ ಇತರೆ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು. ಇದರಿಂದ ಸೊಳ್ಳೆಗಳ ನಿಯಂತ್ರಣ ಸಾಧ್ಯವಿದೆ.

ಕನ್ನಡಪ್ರಭ ವಾರ್ತೆ ಸೊರಬ

ನಾಗರಿಕರು ವಾಸದ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಿ ಡೆಂಘೀ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವಿನಯ್ ಪಾಟೀಲ್ ಹೇಳಿದರು.

ಶುಕ್ರವಾರ ಪಟ್ಟಣದ ಪುರಸಭೆ ಮುಂಭಾಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗ, ಸಾರ್ವಜನಿಕ ಆಸ್ಪತ್ರೆ ಹಾಗೂ ಪುರಸಭೆ ವತಿಯಿಂದ ರಾಷ್ಟ್ರೀಯ ಡೆಂಘೀ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ ಡೆಂಘೀ ಹರಡುವುದು ತಡೆಯಲು ಸರ್ಕಾರ ಡೆಂಘೀ ದಿನ ಜಾರಿಗೆ ತಂದಿದ್ದು, ಇದರಿಂದ ಜನರಿಗೆ ಡೆಂಘೀ ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುವ ಜೊತೆಗೆ ನೆರವಾಗುತ್ತದೆ. ಜನತೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಉಪಯೋಗಿಸದ ತೊಟ್ಟಿ, ಮಡಿಕೆ ಇತರೆ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು. ಇದರಿಂದ ಸೊಳ್ಳೆಗಳ ನಿಯಂತ್ರಣ ಸಾಧ್ಯವಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಟಿ. ಬಾಲಚಂದ್ರ ಮಾತನಾಡಿ, ಪುರಸಭೆಯಿಂದ ನಿತ್ಯ ಈಗಾಗಲೇ ಕಸ ಸಂಗ್ರಹಣಾ ವಾಹನದ ಮೂಲಕ ಡೆಂಘೀ ಕುರಿತು ಜಾಗೃತಿಯ ಧ್ವನಿ ಮುದ್ರಿಕೆ ಪ್ರಸಾರ ಮಾಡಲಾಗುತ್ತಿದೆ. ಪಟ್ಟಣದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಜನತೆ ಸಂಗ್ರಹಿಸಿಕೊಂಡ ನೀರು ವಾರಕ್ಕೆ ಒಮ್ಮೆಯಾದರು ಬದಲಿಸಬೇಕು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಹಾಗೂ ಸೂಕ್ತ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

ನಂತರ ಪಟ್ಟಣದ ಮುಖ್ಯರಸ್ತೆ, ಚಾಮರಾಜಪೇಟೆ, ಚಿಕ್ಕಪೇಟೆ, ಡಾ.ಬಿ.ಆರ್. ಅಂಬೇಡ್ಕರ್ ಬಡಾವಣೆ, ಸಾಗರ ರಸ್ತೆ ಸೇರಿ ವಿವಿಧಡೆ ಜಾಗೃತಿ ಜಾಥಾ ನಡೆಸಲಾಯಿತು. ಜನತೆಗೆ ಡೆಂಘೀ ಕುರಿತು ಜಾಗೃತಿ ಕರಪತ್ರ ಹಂಚಲಾಯಿತು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ, ತಾಲೂಕು ಹಿರಿಯ ಆರೋಗ್ಯಾಧಿಕಾರಿ ಯಶವಂತರಾಜ್, ಹಿರಿಯ ಮಹಿಳಾ ಆರೋಗ್ಯಾಧಿಕಾರಿ ಗಾಯತ್ರಿ, ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ರಣಜಿತ್ ಕುಮಾರ್, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ