ತಾಲೂಕಿನ ಕೊಡಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 175 ಲಕ್ಷ ರು. ವೆಚ್ಚದ ಹಲವಾರು ಕಾಮಗಾರಿಗಳಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಕೊಡಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 175 ಲಕ್ಷ ರು. ವೆಚ್ಚದ ಹಲವಾರು ಕಾಮಗಾರಿಗಳಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಚಾಲನೆ ನೀಡಿದರು.ಹಾವಾಳ ಮತ್ತು ಜೋಗಿಪಾಳ್ಯದಲ್ಲಿ ತಲಾ ಸುಮಾರು 20 ಲಕ್ಷ ರು ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಅಂಗನವಾಡಿ ಕೇಂದ್ರದ ಕಟ್ಟಡಗಳ ಉದ್ಘಾಟನೆ, ಸುಮಾರು 30 ಲಕ್ಷ ರು ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ, ಮತ್ತು ಕಲ್ಕೆರೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಸುಮಾರು 95 ಲಕ್ಷ ರು ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ಸಹಿತ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಕಾಮಗಾರಿ ಸೇರಿದಂತೆ ಒಟ್ಟು 1.75 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಪ್ರತಿ ಮನೆಮನೆಗೆ ಕೊಳಾಯಿ ಮೂಲಕ ನೀರು ಸರಬರಾಜು ಮಾಡುವ ಯೋಜನೆ ಉತ್ತಮ ಯೋಜನೆಯಾಗಿದೆ. ತಾಲೂಕಿನ 280 ಗ್ರಾಮಗಳಲ್ಲಿ ಜಲ ಜೀವನ್ ಯೋಜನೆಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಗ್ರಾಮಗಳಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು. ಕೇಂದ್ರ ಸರ್ಕಾರ ಜನರ ಮನೆಗೆ ನೀರು ಕೊಡುವ ಮೂಲಕ ಹಳ್ಳಿಗರ ಮನಗೆದ್ದಿದೆ. ಅದೇ ಕಾರಣಕ್ಕೆ ಮೋದಿ ಅವರಿಗೆ ಜನ ಆರ್ಶೀವಾದ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಇನ್ನೂ ಹೆಚ್ಚಿನ ಕೆಲಸ ಮಾಡಲಿದೆ. ನಾನು ಸಹ ಜನರ ಕೆಲಸಗಳಲ್ಲಿ ಯಾವುದೇ ವಿಲಂಭ ಮಾಡದಂತೆ ಅಧಿಕಾಗಳಿಗೆ ಸೂಚಿಸಿದ್ದೇನೆ ಎಂದರು. ಕೊಡಗಿಹಳ್ಳಿ ಗ್ರಾ.ಪಂ.ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ ತಮ್ಮ ಗ್ರಾಮ ಪಂಚಾಯಿತಿಗೆ ಅತ್ಯುತ್ತಮ ಗ್ರಾಮ ಪಂಚಾಯಿತಿ ಎಂಬ ಪ್ರಶಸ್ತಿ ಲಭಿಸಿದೆ. ಶಾಸಕ ಎಂ..ಟಿ.ಕೃಷ್ಣಪ್ಪನವರ ನೇತೃತ್ವದಲ್ಲಿ ಸುಮಾರು ಒಂದು ಕೋಟಿ, ಎಪ್ಪತ್ತೈದು ಲಕ್ಷ ವೆಚ್ಚದಲ್ಲಿ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದ್ದಾರೆ. ತಾಲೂಕಿನ ಗ್ರಾ.ಪಂ.ಗಳ ಪೈಕಿ ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿಯ ಪಥದಲ್ಲಿದೆ. ಇದಕ್ಕೆ ಸರ್ವ ಸದಸ್ಯರ ಸಹಕಾರ ಮುಖ್ಯ ಕಾರಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರತ್ನಮ್ಮ ಸಿದ್ದಲಿಂಗಯ್ಯ, ಸದಸ್ಯರಾದ ಪವಿತ್ರ ಮಹೇಶ್, ಆದರ್ಶ ಕೆ.ಎಸ್., ಎಚ್.ಎನ್.ದೇವರಾಜ್, ಕೆ.ಸಿ.ಶ್ರೀನಿವಾಸ್, ಎಚ್.ಎಸ್.ರವಿಚಂದ್ರ, ಭವ್ಯ ನಾಗೇಶ್, ಸವಿತ ಯೋಗೀಶ್, ರುಪ ಜವರಪ್ಪ, ಮುನಿಸ್ವಾಮಿ, ಗಂಗಾಮಣಿ ರಂಗಪ್ಪ, ಸೌಭಾಗ್ಯ ಶಿವಯ್ಯ, ರಾಜಲಕ್ಷ್ಮೀ ರಾಘವೇಂದ್ರ, ಕೆ.ಎಚ್.ದೇವರಾಜು ಶೋಭಾ ಸೀನಾಚಾರ್, ಪಿಡಿಒ ಗೋಪಿನಾಥ್, ಮುಖಂಡರಾದ ಬಡಗರಹಳ್ಳಿ ತ್ಯಾಗಣ್ಣ, ಕಲ್ಕೆರೆ ಶಂಕ್ರಣ್ಣ, ಕಾರ್ಯದರ್ಶಿ ಮಂಜಯ್ಯ, ಎನ್.ಆರ್.ಐ.ಜಿ.ಡಿ. ಸುರೇಶ್, ಬಿಲ್ ಕಲೆಕ್ಟರ್ ರಂಗನಾಥ್ ಸೇರಿದಂತೆ ಗ್ರಾ ಪಂ ಸಿಬ್ಬಂದಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.