ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯವರು ಜನಸ್ನೇಹಿ ಆಡಳಿತ ನೀಡಬೇಕು ಎಂಬ ಉದ್ದೇಶದಿಂದ ಆರು ವಲಯಗಳನ್ನು ಮಾಡಿದೆ. ಆದರೆ ಅಧಿಕಾರಿಗಳು-ಸಿಬ್ಬಂದಿಗಳ ಲಂಚಾವತಾರಕ್ಕೆ ಜನರು ಹೈರಾಣಾಗಿದ್ದಾರೆ ಎಂದು ಆರೋಪಿಸಿದರು.
ಹಣಕೊಡದೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಫೈಲುಗಳು ಅಲ್ಲೇ ಉಳಿದುಕೊಳ್ಳುತ್ತಿವೆ. ಯಾರಾದರು ಅಧಿಕಾರಿಗಳು ಮೂರು-ನಾಲ್ಕು ದಿನ ರಜೆಹಾಕಿ ಹೋದರೆ ಅವರ ಬದಲು ಬೇರೆಯವರು ಕೆಲಸವನ್ನು ಮಾಡುವುದಿಲ್ಲ, ಅವರೇ ಬರಬೇಕು. ಪಾಲಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.ಇದರ ಜೊತೆಗೆ ಪಾಲಿಕೆಯ ಸಮಸ್ಯೆಗಳು ಕೂಡ ಮಿತಿಮೀರಿವೆ. ಅಶುದ್ಧ ಕುಡಿಯುವ ನೀರು ಸರಬರಾಜಾಗುತ್ತಿದೆ. 24 ಗಂಟೆ ಇರಲಿ, ಅರ್ಧಗಂಟೆಯೂ ನೀರು ಬರುವುದಿಲ್ಲ. ವಿದ್ಯುತ್ ದೀಪಗಳದ್ದು ಮತ್ತೊಂದು ಸಮಸ್ಯೆ ಹೀಗಾಗಿ ಪಾಲಿಕೆ ಸಮಸ್ಯೆಗಳ ಆಗರವಾಗಿದೆ ಎಂದು ದೂರಿದರು.
ಹೈಕೋರ್ಟ್ ಸಂಚಾರಿಪೀಠ ಶಿವಮೊಗ್ಗದಲ್ಲಿಯೇ ಆಗಬೇಕೆಂಬುದು ನಮ್ಮ ಪಕ್ಷದ ಒತ್ತಾಯವಾಗಿದೆ. ಯಾವುದೇ ಕಾರಣಕ್ಕೂ ಮಂಗಳೂರಿನಲ್ಲಿ ಆಗುವುದು ಬೇಡ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ವಕೀಲರ ಸಂಘದಿಂದ ಹೈಕೋರ್ಟ್ ಪೀಠಕ್ಕೆ ಹೋರಾಟ ನಡೆಯುತ್ತಿದೆ. ನಾವು ಕೂಡ ಇದಕ್ಕೆ ಬೆಂಬಲ ನೀಡುತ್ತೇವೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ ಮಾತನಾಡಿ, ನಾನು ಅಧ್ಯಕ್ಷನಾಗಿ ಆಯ್ಕೆಯಾದ ಮೇಲೆ ಇಡೀ ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದೇನೆ. ಮತ್ತು ಜಿಲ್ಲೆ, ತಾಲೂಕು, ಗ್ರಾಮಾಂತರ ಮಟ್ಟದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದ್ದೇನೆ. ವಿಧಾನಸಭಾ ಕ್ಷೇತ್ರಕ್ಕೂ ಕೂಡ ಸಮಿತಿ ಮಾಡಿದ್ದು, ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ. ವಿವಿಧ ವಿಭಾಗಗಳ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಸುಮಾರು 74ಕ್ಕೂ ಹೆಚ್ಚು ವಿವಿಧ ವಿಭಾಗಗಳಲ್ಲಿ ಅಧ್ಯಕ್ಷ ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರಲ್ಲದೆ, ಪಟ್ಟಿ ಬಿಡುಗಡೆ ಮಾಡಿದರು. ಮುಖ್ಯವಾಗಿ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ದಾದಾಪೀರ್ ಹಾರ್ನಹಳ್ಳಿ, ನರಸಿಂಹ ಗಂಧದ ಮನೆ, ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಆರ್.ತ್ಯಾಗರಾಜ್, ಖಜಾಂಚಿಯಾಗಿ ರಮೇಶ್ ಬಿ.ನಾಯಕ್ ಆಯ್ಕೆಯಾಗಿದ್ದಾರೆ.
ಗೋಷ್ಠಿಯಲ್ಲಿ ಪ್ರಮುಖರಾದ ಗೀತಾ ಸತೀಶ್, ಕಡಿದಾಳ್ ಗೋಪಾಲ್, ಎಚ್.ಆರ್.ತ್ಯಾಗರಾಜ್, ರಾಕೇಶ್ ಡಿಸೋಜಾ, ಗಂಧದಮನೆ ನರಸಿಂಹ, ಎಚ್.ಎಂ.ಸಂಗಯ್ಯ, ಉಮಾಶಂಕರ ಉಪಾಧ್ಯಾಯ, ಲೋಹಿತ್, ಪ್ರಜ್ವಲ್ ಸೇರಿದಂತೆ ಮೊದಲಾದವರಿದ್ದರು