ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದಾಗ ಮಾತ್ರ ಶಿಕ್ಷಣ ಪರಿಪೂರ್ಣವಾಗುತ್ತದೆ. ಹೆತ್ತವರು ತಮ್ಮಮಕ್ಕಳನ್ನು ಯಾವುದಾದರೊಂದು ಕಲಾ ಶಿಕ್ಷಣ ಮೈಗೂಡಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಬಂಟ್ವಾಳ: ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದಾಗ ಮಾತ್ರ ಶಿಕ್ಷಣ ಪರಿಪೂರ್ಣವಾಗುತ್ತದೆ. ಹೆತ್ತವರು ತಮ್ಮಮಕ್ಕಳನ್ನು ಯಾವುದಾದರೊಂದು ಕಲಾ ಶಿಕ್ಷಣ ಮೈಗೂಡಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಬಿ.ಸಿ. ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಶನಿವಾರ ನಡೆದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ಕಲ್ಲಡ್ಕ, ಭರತ ನಾಟ್ಯ ಸಂಸ್ಥೆಯ ವಿದ್ಯಾರ್ಥಿನಿ ಆತ್ಮಿ ಶೆಟ್ಟಿ ಅವರ ಭರತ ನಾಟ್ಯ ರಂಗ ಪ್ರವೇಶ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಪುತ್ತೂರು ವಿಶ್ವಕಲಾ ನಿಕೇತನ ಸಂಸ್ಥೆಯ ನಿರ್ದೇಶಕಿ , ನೃತ್ಯ ಗುರು ವಿದುಷಿ ನಯನ ವಿ. ರೈ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಂದು ಕಾಲದಲ್ಲಿ ಅಸಡ್ಡೆಯಿಂದ ಕಾಣುತ್ತಿದ್ದ ನೃತ್ಯ ಕ್ಷೇತ್ರ ಇಂದು ಎಲ್ಲರೂ ಗೌರವಿಸುವ ಕಲೆಯಾಗಿ ಮಾರ್ಪಾಡು ಹೊಂದಿರುವುದು ಅಭಿಮಾನದ ಸಂಗತಿ. ತಾಳ್ಮೆ, ಸಹನೆ ಇದ್ದಾಗ ಮಾತ್ರ ಭರತನಾಟ್ಯದಂತಹ ಕಲೆಯನ್ನು ಒಲಿಸಿಕೊಳ್ಳಲು ಸಾಧ್ಯ ಎಂದರು.ನೃತ್ಯಗುರು ವಿದುಷಿ ವಿದ್ಯಾಮನೋಜ್ ಮಾತನಾಡಿ, ಆತ್ಮಿ ಶೆಟ್ಟಿ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು, ಯಾವುದೇ ಕೆಲಸವನ್ನು ಬದ್ಧತೆಯಿಂದ ಮಾಡಬಲ್ಲವಳು. ರಂಗ ಪ್ರವೇಶದ ಮೂಲಕ ನೃತ್ಯ ಕ್ಷೇತ್ರದ ಅಪೂರ್ವ ಘಟ್ಟವನ್ನು ಏರಿದ್ದಾಳೆ ಎಂದರು.ಉದ್ಯಮಿ ಚಂದ್ರಹಾಸ ಡಿ. ಶೆಟ್ಟಿ, ನೃತ್ಯಗಿರಿ ಮೈಸೂರು ಭರತನಾಟ್ಯ ಸಂಸ್ಥೆಯ ನಿರ್ದೇಶಕರಾದ ಡಾ. ಕೃಪಾ ಪಡ್ಕೆ,
ಆತ್ಮಿ ಶೆಟ್ಟಿಯ ಹೆತ್ತವರಾದ ಉದಯ ಕುಮಾರ್ ಶೆಟ್ಟಿ, ಶಾಲಿನಿ ಶೆಟ್ಟಿ, ಮಾವ ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸುಖೇಶ್ ಶೆಟ್ಟಿ ವಂದಿಸಿದರು. ದೀಪಕ್ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಹಾಗೂ ಬಳಿಕ ಆತ್ಮಿಶೆಟ್ಟಿಯವರ ರಂಗ ಪ್ರವೇಶದ ನೃತ್ಯ ಪ್ರಸ್ತುತಿಗಳು ಮನೋಜ್ಞವಾಗಿ ಮೂಡಿಬಂತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.