ಉಪ್ಪಿನಂಗಡಿ: ಪಶ್ಚಿಮಘಟ್ಟದ ತಪ್ಪಲು ಪ್ರದೇಶವಾಗಿರುವ ಶಿರಾಡಿ-ಶಿಶಿಲ ರಕ್ಷಿತಾರಣ್ಯವನ್ನೊಳಗೊಂಡ ಪ್ರದೇಶದಲ್ಲಿ ಹಾದುಹೋಗುವ ಮಂಗಳೂರು-ಬೆಂಗಳೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ನೆಲ್ಯಾಡಿ-ಹೊಸಮಜಲು ಸಮೀಪದ ಮಣ್ಣಗುಂಡಿಯಿಂದ ಗುಂಡ್ಯ ತನಕ ಲಾವತಡ್ಕ ಅಥವಾ ಮಣ್ಣಗುಂಡಿ, ಪೆರಿಯ ಶಾಂತಿ, ಅಡ್ಡಹೊಳೆ ಈ ೩ ಕಡೆಯಲ್ಲಿ ಆನೆ ದಾಟು ಯೋಜನೆ ಮಂಜೂರಾಗಿದ್ದು, ಈ ಪೈಕಿ ಪೆರಿಯಶಾಂತಿ ಮತ್ತು ಅಡ್ಡಹೊಳೆಗಳಲ್ಲಿನ ಆನೆದಾಟು ಯೋಜನೆ ಕಾಮಗಾರಿ ಪೂರ್ಣಗೊಂಡಿದೆ.ಪೆರಿಯಶಾಂತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಮೇಲ್ಸೇತುವೆ ಮೇಲೆ ಹಾದು ಹೋಗುತ್ತದೆ. ಇದರ ಬದಿಯಲ್ಲಿ ನೆಲದ ಅಂತರದಲ್ಲಿ ಧರ್ಮಸ್ಥಳ-ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕ ರಸ್ತೆ ಕವಲೊಡೆದು ಹಾದು ಹೋಗುತ್ತದೆ. ಇದರಿಂದ ಸುಮಾರು ೩೦೦ ಮೀಟರ್ ದೂರಲ್ಲಿ ಹೆದ್ದಾರಿಯ ಇಕ್ಕೆಲಗಳಲ್ಲಿ ಮೀಸಲು ರಕ್ಷಿತಾರಣ್ಯದ ಮಧ್ಯೆ ತೋಡು ಹರಿದು ಹೋಗುತ್ತಿದೆ. ಆನೆಗಳಿಗೆ ನೀರು ಕುಡಿಯಲು ಈ ತೋಡು ಉಪಯೋಗ ಆಗುವ ರೀತಿಯಲ್ಲಿ ಅಂಡರ್ ಪಾಸ್ ರೀತಿಯಲ್ಲಿ ಆನೆ ದಾಟು ನಿರ್ಮಾಣವಾಗಿದೆ. ಅಡ್ಡಹೊಳೆಯಲ್ಲೂ ಇದೇ ರೀತಿಯಾಗಿ ನಿರ್ಮಾಣವಾಗಿದೆ.
ಈ ಹಿಂದೆ ಮಣ್ಣಗುಂಡಿಯಿಂದ ಶಿರಾಡಿಯ ಅಡ್ಡಹೊಳೆ ತನಕ ಹತ್ತಾರು ಕಡೆಯಲ್ಲಿ ಆನೆಗಳು ಅದರ ಪಾಡಿಗೆ ರಸ್ತೆ ದಾಟಿ ಹೋಗುತ್ತಿದ್ದವು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯಾಗಿ ಮಾರ್ಪಾಡು ಆಗುವುದರೊಂದಿಗೆ ಮೊದಲಿನ ರೀತಿಯಲ್ಲಿ ಆನೆಗಳಿಗೆ ರಸ್ತೆ ದಾಟಲು ಆಗದೆ ದಾರಿ ತೋಚದಾಗಿದೆ. ಹೀಗಾಗಿ ಆನೆಗಳು ತನಗೆ ಸರಿಯಾಗಿ ನೀರು, ಆಹಾರ ಸಿಗದ ಕಾರಣಕ್ಕಾಗಿ ಕೃಷಿ ತೋಟದೊಳಗೆ ನುಗ್ಗಿ ಸಂಘರ್ಷ ಉಂಟು ಮಾಡುತ್ತವೆ. ಇದನ್ನು ತಪ್ಪಿಸಲು ಚತುಷ್ಪಥ ಹೆದ್ದಾರಿಯ ಆಯ್ದ ಭಾಗಗಳಲ್ಲಿ ಆನೆ ದಾಟು ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ತನ್ಮೂಲಕ ಆನೆಗಳ ಆಕ್ರೋಶ ಭರಿತ ಸಂಚಾರಕ್ಕೆ ತಡೆಯೊಡ್ದಲಾಗಿದೆ. ಮಣ್ಣಗುಂಡಿಯಿಂದ ಸಕಲೇಶಪುರ ತನಕವೂ ಅಲ್ಲಲ್ಲಿ ಆನೆ ದಾಟು ಅಗತ್ಯ ಇದೆ. ಇದು ಕೇವಲ ಆನೆ ದಾಟುವುದಕ್ಕೆ ಮಾತ್ರ ಅಲ್ಲ, ಕಾಡು ಪ್ರಾಣಿಗಳಾದ ಜಿಂಕೆ, ಕಡವೆ, ಕಾಡುಕೋಣಗಳಿಗೂ ಇದರಿಂದ ಪ್ರಯೋಜನವಾಗಲಿದೆ. -ಭುವನೇಶ್ ಕೈಕಂಬ, ವನ್ಯಜೀವಿ ಪರಿಣತರು ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ೩ ಯಾ ೪ ಹಿಂಡುಗಳಾಗಿ ಆನೆಗಳಿವೆ. ಆದರೆ ಇವುಗಳ ಮೂಲ ಈ ಪ್ರದೇಶಗಳಾಗಿರುವುದಿಲ್ಲ. ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಳೆಂಜ, ಶಿಶಿಲ, ರೆಖ್ಯ, ಪೋರ್ಕಳ, ಗುಂಡ್ಯ, ಶಿರಾಡಿ, ಅಡ್ಡಹೊಳೆ, ಬಂದಾರು ಹೀಗೆ ಈ ಪ್ರದೇಶದಲ್ಲಿ ೧೦ಕ್ಕೂ ಅಧಿಕ ಆನೆಗಳು ಇವೆ. ಇನ್ನು ಪಂಜ, ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯಿಂದಲೂ ಇಲ್ಲಿಗೆ ಬಂದು ಹೋಗುತ್ತಿರುತ್ತವೆ. ಹೀಗಾಗಿ ಹೆದ್ದಾರಿಯಲ್ಲಿ ೩ ಕಡೆ ಆನೆ ದಾಟು ಮಾಡಿರುವುದು ಕಡಿಮೆ ಆಗಿದ್ದು, ಇನ್ನೂ ಕನಿಷ್ಠ ೩ ಆಗಬೇಕಾಗಿತ್ತು.
-ರಾಘವೇಂದ್ರ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಹೆದ್ದಾರಿ ವಿಸ್ತರಣೆಗೊಂಡು ಹೆದ್ದಾರಿಯನ್ನು ದಾಟುವ ಸಂದರ್ಭದಲ್ಲಿ ಅಪಘಾತ ಸಂಭವಿಸುವುದನ್ನು ತಪ್ಪಿಸಲು ಆನೆ ದಾಟು ಯೋಜನೆ ಅಳವಡಿಸಿರುವುದು ಶ್ಲಾಘನೀಯ. ಆದರೆ ಅದು ಸಾಕಷ್ಟು ಪ್ರಮಾಣದಲ್ಲಿರಬೇಕಿತ್ತು. -ಕಂಗ್ವೆ ವಿಶ್ಬನಾಥ ಶೆಟ್ಟಿಪರಿಸರ ಪ್ರೇಮಿ, ಸಾಮಾಜಿಕ ಕಾರ್ಯಕರ್ತ