ಸಾವಿರಾರು ಕುಟುಂಬಗಳಿಗೆ ಶಾಶ್ವತ ಮನೆ ಹಕ್ಕುಪತ್ರ: ಶ್ರೀನಿವಾಸ ಮಾನೆ

KannadaprabhaNewsNetwork |  
Published : May 08, 2026, 02:15 AM IST
ಕಲಕೇರಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಶ್ರೀನಿವಾಸ ಮಾನೆ ನಾನಾ ಕಂದಾಯ ಗ್ರಾಮ, ಉಪ ಗ್ರಾಮಗಳ ಫಲಾನುಭವಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದರು. | Kannada Prabha

ಸಾರಾಂಶ

ಹಾನಗಲ್ಲ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ನಾನಾ ಕಂದಾಯ ಗ್ರಾಮ ಮತ್ತು ಉಪ ಗ್ರಾಮಗಳ ೪೯೨ ಫಲಾನುಭವಿ ಕುಟುಂಬಗಳಿಗೆ ಶಾಸಕ ಶ್ರೀನಿವಾಸ ಮಾನೆ ಹಕ್ಕುಪತ್ರ ವಿತರಿಸಿದರು.

ಹಾನಗಲ್ಲ: ಸಣ್ಣ ರೈತರು, ಕೂಲಿಕಾರರು, ಬಡವರು, ಮಧ್ಯಮ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಕುಟುಂಬಗಳು ನಿವೇಶನ ಖರೀದಿಸಲು ಸಾಧ್ಯವಾಗದೇ ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡು ಹತ್ತಾರು ವರ್ಷಗಳಿಂದ ಅತಂತ್ರ ಬದುಕು ನಡೆಸುತ್ತಿದ್ದವು. ಇಂಥ ಸಾವಿರಾರು ಕುಟುಂಬಗಳಿಗೆ ಶಾಶ್ವತ ಮನೆ ಮಾಲೀಕತ್ವದ ಹಕ್ಕುಪತ್ರ ವಿತರಿಸಿ ಇದೀಗ ಸ್ವತಂತ್ರಗೊಳಿಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ನಾನಾ ಕಂದಾಯ ಗ್ರಾಮ ಮತ್ತು ಉಪ ಗ್ರಾಮಗಳ ೪೯೨ ಫಲಾನುಭವಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ೨೦೨೩ರಲ್ಲಿ ತಾಲೂಕಿನಲ್ಲಿ ೫೨ ದಿನಗಳ ಕಾಲ ಐತಿಹಾಸಿಕ ದೃಢಸಂಕಲ್ಪ ಯಾತ್ರೆಯ ಮೂಲಕ ಪ್ರತಿಯೊಂದು ಗ್ರಾಮಗಳನ್ನು ಕಾಲ್ನಡಿಗೆಯಲ್ಲಿ ಸಂಚರಿಸಿದ ಸಂದರ್ಭದಲ್ಲಿ ಸಾವಿರಾರು ಕುಟುಂಬಗಳಿಗೆ ಮನೆಯ ಮಾಲಿಕತ್ವ ಇಲ್ಲದಿರುವುದು, ಅನೇಕ ಕಡೆಗಳಲ್ಲಿ ಕೋರ್ಟ್‌ನಿಂದ ನೋಟಿಸ್ ಜಾರಿ ಮಾಡಿ ಮನೆ ತೆರವುಗೊಳಿಸುವಂತೆ ಒತ್ತಾಯಿಸುತ್ತಿರುವ ಬಗ್ಗೆ ಜನ ಆತಂಕ ವ್ಯಕ್ತಪಡಿಸುತ್ತಿದ್ದರು. ಆ ಸಂದರ್ಭದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ಕುಟುಂಬಗಳನ್ನು ಸ್ವತಂತ್ರಗೊಳಿಸುವ ಸಂಕಲ್ಪ ಮಾಡಲಾಗಿತ್ತು. ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಸಂಕಲ್ಪ ಈಡೇರಿ, ಸಾವಿರಾರು ಕುಟುಂಬಗಳಲ್ಲಿ ನೆಮ್ಮದಿ ಮೂಡಿಸಲಾಗಿದೆ. ಮಳೆ ಬಂದು ಮನೆ ಬಿದ್ದರೆ ಪರಿಹಾರ ಸಿಗುತ್ತಿರಲಿಲ್ಲ, ಹೊಸ ಮನೆ ಕಟ್ಟಿಕೊಳ್ಳಲು ಅವಕಾಶ ನೀಡುತ್ತಿರಲಿಲ್ಲ, ಬ್ಯಾಂಕುಗಳು ಸಾಲ ಸೌಲಭ್ಯ ಸಹ ಕೊಡುತ್ತಿರಲಿಲ್ಲ. ಇವೆಲ್ಲ ಕಾರಣಗಳಿಂದ ಕಣ್ಣೀರಿನಲ್ಲಿ ಕೈ ತೊಳೆಯುಂಥ ಸ್ಥಿತಿ ಇತ್ತು. ಇದೀಗ ಸಂಕಷ್ಟಗಳೆಲ್ಲ ದೂರ ಸರಿದಿವೆ ಎಂದರು.

ತಹಸೀಲ್ದಾರ್ ರೇಣುಕಾ ಎಸ್. ಮಾತನಾಡಿ, ಶಾಶ್ವತ ಮನೆ ಮಾಲೀಕತ್ವ ಪಡೆದ ಕುಟುಂಬಗಳಿನ್ನು ಭಯಪಡುವ ಅಗತ್ಯವಿಲ್ಲ. ಮುಂದೆ ಯಾರೂ ದಾಖಲೆ ಬದಲಿಸಲು ಸಾಧ್ಯವಿಲ್ಲ. ಸಂತೋಷದಿಂದ ಬದುಕು ನಡೆಸುವ ಕಾಲ ಕೂಡಿ ಬಂದಿದೆ. ಇಡೀ ರಾಜ್ಯದಲ್ಲಿಯೇ ಅತ್ಯಧಿಕ ಸಂಖ್ಯೆಯ ಫಲಾನುಭವಿ ಕುಟುಂಬಗಳು ನಮ್ಮ ತಾಲೂಕಿನಲ್ಲಿ ಶಾಶ್ವತ ಮನೆ ಮಾಲೀಕತ್ವದ ಹಕ್ಕುಪತ್ರ ಪಡೆದಿವೆ. ಕಂದಾಯ ದಾಖಲೆಗಳ ಡಿಜಿಟಲೀಕರಣ ಸೇರಿದಂತೆ ಕಂದಾಯ ಇಲಾಖೆಯಲ್ಲಿ ಕ್ರಾಂತಿ ಮಾಡಲಾಗಿದೆ. ಮನೆ ಬಾಗಿಲಿಗೆ ಸರ್ಕಾರವೇ ಬಂದು ಜನಸಂಕಷ್ಟಗಳಿಗೆ ಸ್ಪಂದಿಸುತ್ತಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಕಲಕೇರಿ ಗ್ರಾಮದ ೨೬೦, ಕಲಕೇರಿ ತಾಂಡಾ ಗ್ರಾಮದ ೧೩೫, ಮುಳಥಳ್ಳಿಯ ೧೨೦, ತಾವರಗೊಪ್ಪದ ೬೦, ವೀರಾಪುರದ ೪೦, ವಾಸನದ ೨೩, ಚಿಕ್ಕಹುಲ್ಲಾಳದ ೧೩, ಕನ್ನೇಶ್ವರದ ೧೧, ಹೇರೂರಿನ ೯ ಹಾಗೂ ಕೂಸನೂರು ಗ್ರಾಮದ ೫ ಫಲಾನುಭವಿ ಕುಟುಂಬಗಳಿಗೆ ಶಾಶ್ವತ ಮನೆ ಮಾಲೀಕತ್ವದ ಹಕ್ಕುಪತ್ರ ವಿತರಿಸಲಾಯಿತು.

ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಜಿಪಂ ಮಾಜಿ ಸದಸ್ಯ ಮಹದೇವಪ್ಪ ಬಾಗಸರ, ಮುಖಂಡರಾದ ಪ್ರಕಾಶ ಬಣಕಾರ, ನಾಗಪ್ಪ ಮೆಳ್ಳಳ್ಳಿ, ಬಿ.ಎಸ್. ಗೋರೆಗೌಡ್ರ, ಉಮೇಶ ಗೌಳಿ, ಹೇಮನಗೌಡ ಅಡಿಗಣ್ಣನವರ, ಮಾಲತೇಶ ಗೋರೆಗೌಡ್ರ, ಮೂಕಪ್ಪ ಕೊಪ್ಪದ, ಜಯಮ್ಮ ಮಳೆಣ್ಣನವರ, ವಸಂತ ವೆಂಕಟಾಪುರ, ನಿಜಗುಣಿ ಮಳೆಣ್ಣನವರ, ಅಜ್ಜಪ್ಪ ಕಲ್ಪಾದಿ, ರಾಮಚಂದ್ರ ತಳವಾರ, ಅಲ್ತಾಹಿರ್ ಕಚವಿ, ಮಂಜು ಆಲದಕಟ್ಟಿ, ಪ್ರಕಾಶ ಮಾಸಣಗಿ, ಲಕ್ಷ್ಮಣ ಹರಿಜನ, ಸಿದ್ದು ಕಲ್ಲಣ್ಣನವರ, ದಯಾನಂದ ಹಂಚಿನಮನಿ, ಪ್ರಕಾಶಗೌಡ ಪಾಟೀಲ, ಶಂಕರಣ್ಣ ಪಾಟೀಲ, ಇಸ್ಮೈಲ್‌ಸಾಬ್‌ ತಾವರಗೊಪ್ಪ, ಶೇಕಪ್ಪ ಗಾಣಗೇರ, ಗುಡ್ಡನಗೌಡ ಪಾಟೀಲ, ಪ್ರಕಾಶ ಬಾಗಣ್ಣನವರ, ಮಲ್ಲಿಕಾರ್ಜುನ ಕಳ್ಳಿ, ಮಹೇಶ ಬಣಕಾರ, ಬಿ.ಕೆ. ವಾಸನ, ಮಾರ್ತಾಂಡಗೌಡ ಪಾಟೀಲ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಾಣಿ, ಪಕ್ಷಿ ನಿರ್ಲಕ್ಷಿಸಿದರೆ ಪರಿಸರ ನಾಶ: ಈಶ್ವರಪ್ಪ ಹಂಚಿನಾಳ
ಶಿಕ್ಷಕರ ಕೈಯಲ್ಲಿದೆ ಸರ್ಕಾರಿ ಶಾಲೆಗಳ ಭವಿಷ್ಯ: ಆನಂದಗೌಡ ಪಾಟೀಲ