ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪರವಾನಗಿ ಕಡ್ಡಾಯ: ವೀರಣ್ಣ ಹಳ್ಳಿ

KannadaprabhaNewsNetwork |  
Published : Sep 10, 2026, 02:15 AM IST
ಗಣೇಶ ಚತುರ್ಥಿ ಶಾಂತಿಸಭೆಯಲ್ಲಿ ಠಾಣಾಧಿಕಾರಿ ವೀರಣ್ಣ ಹಳ್ಳಿ ಮಾತನಾಡಿದರು. | Kannada Prabha

ಸಾರಾಂಶ

ಗಣಪತಿ ಹಬ್ಬದ ಅಂಗವಾಗಿ ಕನಕಗಿರಿ ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಮಂಗಳವಾರ ಶಾಂತಿಸಭೆ ಆಯೋಜಿಸಲಾಗಿತ್ತು. ಪಿಐ ವೀರಣ್ಣ ಹಳ್ಳಿ ಕಾನೂನು ಪಾಲನೆ ಕುರಿತು ಮಾಹಿತಿ ನೀಡಿದರು.

ಕನಕಗಿರಿ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಗಣಪತಿ ಪ್ರತಿಷ್ಠಾಪಿಸುವ ಸಮಿತಿಯವರು ಸರ್ಕಾರದ ನಿಯಮದಂತೆ ಪರವಾನಗಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಪಿಐ ವೀರಣ್ಣ ಹಳ್ಳಿ ಸೂಚಿಸಿದರು.

ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಗಣಪತಿ ಹಬ್ಬದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು. ಕಾನೂನಿಗೆ ಜಾತಿ ಮುಖ್ಯವಲ್ಲ. ಕಾನೂನಿನಡಿಯಲ್ಲಿ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸಲು ಸರ್ಕಾರ ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಗಣಪತಿ ಪ್ರತಿಷ್ಠಾಪಿಸುವ ಸಮಿತಿಯವರು ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಜತೆಗೆ ಮೆರವಣಿಗೆ ನಡೆಯುವ ಸ್ಥಳ, ದಿನಾಂಕ ಹಾಗೂ ಕಾರ್ಯಕ್ರಮಗಳ ನಡೆಯುವ ಬಗೆಗಿನ ವಿವರವನ್ನು ಪತ್ರದಲ್ಲಿ ಉಲ್ಲೇಖಿಸಿ ನೀಡಬೇಕು. ಇನ್ನೂ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗುವುದು. ಅಕ್ರಮ ಚಟುವಟಿಕೆ ನಡೆದರೆ ಸಮಿತಿಯವರ ಪದಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ತಹಸೀಲ್ದಾರ್‌ ಚಂದ್ರಶೇಖರ ಗಾಳಿ ಹಾಗೂ ಪಪಂ ಪ್ರಭಾರಿ ಮುಖ್ಯಾಧಿಕಾರಿ ರಾಜಶೇಖರ ಮಾತನಾಡಿ, ಸಣ್ಣ ಗಣೇಶ ಮೂರ್ತಿಗಳ ವಿಸರ್ಜನೆಗೆ ಕೊಂಡದಪೇಟೆಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಇನ್ನೂ ಬೃಹತ್ ಗಾತ್ರದ ವಿಘ್ನೇಶನ ಮೂರ್ತಿಗಳ ವಿಸರ್ಜನೆಗೆ ಕೆ. ಕಾಟಾಪುರ ಅಥವಾ ಲಕ್ಷ್ಮೀದೇವಿ ಕೆರೆಯಲ್ಲಿ ವಿಸರ್ಜಿಸಲು ವ್ಯವಸ್ಥೆ ಮಾಡಲಾಗುವುದು. ನಗರದ ಬೀದಿಗಳಲ್ಲಿ ಬೆಳಕಿನ ವ್ಯವಸ್ಥೆ ಮತ್ತು ಸ್ವಚ್ಛತೆ ಮಾಡಲಾಗುವುದು ಎಂದರು.

ಹಿಂದೂ ಜಾಗರಣ ವೇದಿಕೆಯ ಅಯ್ಯನಗೌಡ ಮಾತನಾಡಿ, ಭೀಕರ ಬರದಲ್ಲಿ ಸಾವಿರಾರು ರು. ನೀಡಿ ಗಣಪತಿ ಪ್ರತಿಷ್ಠಾಪಿಸುವುದು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಪರವಾನಗಿ ಪಡೆಯುವುದನ್ನು ರದ್ದುಗೊಳಿಸಿ, ಉಚಿತ ಅನುಮತಿ ನೀಡಬೇಕು. ಜೆಸ್ಕಾಂ ಇಲಾಖೆ ವಿದ್ಯುತ್ ಬಿಲ್ ನೀಡುವ ಬದಲು ಶೂನ್ಯ ಬಿಲ್ ನೀಡಬೇಕು. ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಗಣಪತಿ ವಿಸರ್ಜನೆ ಸೂಕ್ತ ಜಾಗ ಗುರುತಿಸಬೇಕು. ಮೆರವಣಿಗೆ ದಿನಗಳಲ್ಲಿ ಮದ್ಯದಂಗಡಿಗಳ ಬಂದ್ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಹನುಮಂತರೆಡ್ಡಿ, ದೊಡ್ಡಬಸವ ಸಾನಬಾಳ, ವೆಂಕಟೇಶ ಗಂಗಾಮತ, ಹನುಮೇಶ ಡಿಶ್ ಮಾತನಾಡಿದರು.

ಪ್ರಮುಖರಾದ ಸುಭಾಷ ಕಂದಕೂರು, ಬಸವರಾಜ ನಾಯಕ, ಹನುಮೇಶ ಗಾಯಕವಾಡ, ಹನುಮೇಶ ವಾಲೇಕಾರ, ಪ್ರಕಾಶ ಕುಂಬಾರ, ಬಸವರಾಜ ಹಂದ್ರಾಳ್ ಇತರರಿದ್ದರು.

ದಂಡ ಹಾಕಲಾಗುವುದು: ಸರ್ಕಾರದ ನಿಯಮದಂತೆ ಹಣ ಪಾವತಿಸಿ ವಿದ್ಯುತ್ ಪರವಾನಗಿ ಪಡೆದುಕೊಳ್ಳಬೇಕು. ಹಣ ನೀಡದ ಸಮಿತಿಯವರಿಗೆ ವಿದ್ಯುತ್ ಸಂಪರ್ಕ ನೀಡುವುದಿಲ್ಲ. ಒಂದು ವೇಳೆ ಇಲಾಖೆಯ ಇಲಾಖೆ ಅನುಮತಿ ಇಲ್ಲದೆ ವಿದ್ಯುತ್ ಸಂಪರ್ಕ ಪಡೆದುಕೊಂಡಲ್ಲಿ ಸಮಿತಿ ಮೇಲೆ ಕೇಸ್ ದಾಖಲಿಸಿ ದಂಡ ಹಾಕಲಾಗುವುದು ಎಂದು ಕನಕಗಿರಿ ಜೆಇ ಆನಂದ ಪ್ರಭಾರಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಡಾ: ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮರು ಮಾರಾಟ!
ದೇಶಕ್ಕೆ ಆರೋಗ್ಯವಂತ ಸಮಾಜ ಅತ್ಯಗತ್ಯ